ಕನ್ನಡಪ್ರಭ ವಾರ್ತೆ ಚವಡಾಪುರ: ಮಹಾರಾಷ್ಟ್ರದ ಪಂಡರಾಪುರ ಭಾಗದಲ್ಲಿ ಹಾಗೂ ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮುಂಗಾರು ಪೂರ್ವ ಮಳೆ ಅಬ್ಬರಿಸಿ ಬಂದಿದ್ದರ ಪರಿಣಾಮವಾಗಿ ಮಹಾರಾಷ್ಟ್ರ ರಾಜ್ಯದ ಜಲಾಶಯಗಳಿಂದ ಭೀಮಾ ನದಿಗೆ 50 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ ಎಂದು ಕೆಎನ್ಎನ್ಎಲ್ ಎಇಇ ಸಂತೋಷ ಸಜ್ಜನ್ ಮಾಹಿತಿ ನೀಡಿದ್ದಾರೆ.
ಕನ್ನಡ ಪ್ರಭಕ್ಕೆ ಮಾತನಾಡಿದ ಅವರು ಸಧ್ಯ ಅಫಜಲ್ಪುರ ತಾಲೂಕಿನ ಸೊನ್ನ ಬ್ಯಾರೇಜ್ನಲ್ಲಿ 2.5 ಟಿಎಂಸಿ ನೀರು ಸಂಗ್ರಹವಿದ್ದು, ಮಳೆಗಾಲ ಆರಂಭದಲ್ಲೇ ಈ ಪರಿಯ ನೀರು ಬಂದಿದ್ದರಿಂದ ಬ್ಯಾರೇಜ್ನ 8 ಗೇಟ್ಗಳಿಂದ 50 ಸಾವಿರ ಕ್ಯೂಸೆಕ್ ಒಳ ಮತ್ತು ಹೊರ ಹರಿವು ಕಾಯ್ದುಕೊಂಡಿದ್ದೇವೆ. ಭೀಮಾ ನದಿ ಪಾತ್ರದ ರೈತರು, ಸಾರ್ವಜನಿಕರು ಸ್ವಲ್ಪ ಜಾಗರೂಕರಾಗಿರಬೇಕು ಎಂದ ಅವರು ನಾಳೆಯಿಂದ ಮತ್ತೆ ಮಳೆಯ ಅಬ್ಬರ ಮತ್ತು ಭೀಮಾ ನದಿಗೆ ಹರಿದು ಬರುವ ನೀರಿನ ಮಾಹಿತಿಯನ್ನು ವಿವರವಾಗಿ ಹೇಳಲಾಗುತ್ತದೆ. ನೀರು ಹೆಚ್ಚಾದರೆ ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರ ಸಾರಿ ಹೇಳಿ ಜಾಗೃತೆ ವಹಿಸುವಂತೆ ಎಚ್ಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಭೀಮಾ ನದಿಗೆ ಸಾಮಾನ್ಯವಾಗಿ ಅಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿತ್ತು, ಆದರೆ, ಈ ಬಾರಿ ಮುಂಗಾರು ಆರಂಭಕ್ಕೂ ಒಂದು ವಾರದ ಮೊದಲೇ ಪ್ರವಾಹ ಭೀತಿ ಆವರಿಸಿದ್ದು ನೋಡಿದರೆ ಇಡೀ ವರ್ಷ ಏನು ಕಾದಿದೆಯೋ ಎನ್ನುವ ಆತಂಕ ನದಿ ಪಾತ್ರದ ಜನರಲ್ಲಿ ಮನೆ ಮಾಡಿದೆ.