ಹರಪನಹಳ್ಳಿ: ವಿಶೇಷ ಚೇತನರು ಸೇರಿದಂತೆ ಮಹಿಳೆಯರು ಮತ್ತು ಕೂಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಆಸರೆ ಸಂಸ್ಥೆ ಅವರೆಲ್ಲರ ಬಾಳಿಗೆ ಆಸರೆಯಾಗಿದೆ ಎಂದು ತಾಪಂ ಇಒ ವೈ.ಎಚ್. ಚಂದ್ರಶೇಖರ ತಿಳಿಸಿದ್ದಾರೆ.

ಅವರು ತಾಲೂಕಿನ ಕಡತಿ ಗ್ರಾಪಂನಲ್ಲಿ ಆಸರೆ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹರಿಹರ ಹಾಗೂ ಗ್ರಾಪಂ ಮತ್ತು ಜೀವನದಿ ಒಕ್ಕೂಟದ ಸಹಯೋಗದೊಂದಿಗೆ ನಡೆದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಕಿಟ್ ಹಾಗೂ ಚೆಕ್ ವಿತರಣೆ ಮತ್ತು ವಿಶೇಷ ಚೇತನ ಶೀಘ್ರ ಪತ್ತೆ ಹಚ್ಚುವುದು ಹಾಗೂ ವಿವಿಧ ಇಲಾಖೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶೇಷ ಚೇತನರ ಶೀಘ್ರ ಪತ್ತೆ ಹಚ್ಚುವುದು ಹಾಗೂ ಯಾವ್ಯಾವ ಕಾರಣಗಳಿಂದ ವಿಶೇಷ ಚೇತನೆ ಬರುತ್ತೆ ಹಾಗೂ ಎಸ್ಐಆರ್ ಬಗ್ಗೆ ವಿವರವಾದ ಮಾಹಿತಿಯನ್ನು ಅವರು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷೆ ಶೋಭಾ ಮಾತನಾಡಿ, ಆಸರೆ ಸಂಸ್ಥೆ ವಿಶೇಷಚೇತನರು ಹಾಗೂ ಮಹಿಳೆ ಮತ್ತು ಮಕ್ಕಳು ಕೂಲಿ ಕಾರ್ಮಿಕರ ಜೊತೆಗೆ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾ ಬಂದಿದೆ. ಅದರಲ್ಲಿ ವಿಶೇಷವಾಗಿ ಕಡತಿ ಗ್ರಾಪಂನಲ್ಲಿ ವಿಶೇಷಚೇತನರಿಗೆ ಸಾಮಾಜಿಕ ನ್ಯಾಯ ಸ್ವಾತಂತ್ರ್ಯ ಭ್ರಾತೃತ್ವ ಮತ್ತು ಸಮಾನತೆಯಿಂದ ಕುಟುಂಬದಲ್ಲಿ ಮತ್ತು ಸಮುದಾಯದಲ್ಲಿ ಕಾಣುವುದರ ಜೊತೆಗೆ ಅವರು ಮುಖ್ಯ ವಾಹಿನಿಗೆ ಬರಬೇಕು. ಅವರಿಗೆ ಅನುಕಂಪ ಬೇಡ ಅವಕಾಶ ಕೊಡಿ ಎಂದು ಸಲಹೆ ನೀಡಿದರು.

ವಿಬಿಜಿ ರಾಮ್ ಜಿ ಸಹಾಯಕ ನಿರ್ದೇಶಕ ಸೋಮಶೇಖರ್ ವಿಬಿಜಿ ರಾಮ್‌ಜಿ ಯೋಜನೆಯಲ್ಲಿ ಹಾಗೂ ಸಂವಿಧಾನದಲ್ಲಿ ವಿಶೇಷ ಚೇತನರಿಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.


ಎಂಆರ್‌ಡಬ್ಲು ಧನರಾಜ್ ವಿಶೇಷಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಎಸ್ಐಆರ್‌ಡಿ ಸಂಪನ್ಮೂಲ ವ್ಯಕ್ತಿ ಅಕ್ಕ ನಾಗಮ್ಮ ವಿಶೇಷ ಚೇತನರ ಸೌಲಭ್ಯಗಳನ್ನು ಪಡೆಯಬೇಕಾದರೆ ಯಾವೆಲ್ಲ ದಾಖಲೆಗಳು ಇರಬೇಕು ಎನ್ನುವುದರ ಕುರಿತು ತಿಳಿಸಿದರು.

ಪಿಡಿಒ ಬೋಜಪ್ಪ ಗ್ರಾಪಂನಿಂದ ವಿಶೇಷಚೇತನರಿಗೆ ಯಾವ ಅನುದಾನದಲ್ಲಿ ಯಾವೆಲ್ಲ ಸೌಲಭ್ಯಗಳನ್ನು ಕೊಡಲು ಅವಕಾಶ ಇದೆ ಎನ್ನುವ ಬಗ್ಗೆ ತಿಳಿಸಿದರು. ಶ್ರೀಕಾಂತ್ ಗುಳೇದ ಅಧ್ಯಕ್ಷತೆ ವಹಿಸಿದ್ದರು. ಆಸರೆ ಸಂಸ್ಥೆಯ ಕಾರ್ಯದರ್ಶಿ ಸುಧಾ, ಎಸ್ಐಆರ್‌ಡಿ ಸಂಪನ್ಮೂಲ ವ್ಯಕ್ತಿ ಅಕ್ಕನಾಗಮ್ಮ, ಮೀನಾಕ್ಷಿ, ಬೆಂಗಳೂರಿನ ಪ್ರಭಾವತಿ, ಮಂಜುನಾಥ್, ಪುಷ್ಪ, ಎಂಆರ್‌ಡಬ್ಲು ಧನರಾಜ್, ವಿಆರ್‌ಡಬ್ಲು ಗೀತಾ, ಶಿಲ್ಪಾ ಇದ್ದರು.

ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಪಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷಚೇತನ ಮಕ್ಕಳಿಗೆ ತಾಪಂ ಇಒ ಚಂದ್ರಶೇಖರ ಉಚಿತ ಶಾಲಾ ಕಿಟ್‌ ವಿತರಿಸಿದರು.