ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪರಿಶಿಷ್ಟ ಜಾತಿಗೆ ಸೇರಿದ ಎಂ.ಟಿ.ಮಂಜುನಾಥ್ ಅವರ ಪಟ್ಟಣದ ಜಮೀನು ವಿವಾದ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ ಹೊರಡಿಸಿದ ಆದೇಶಕ್ಕೆ ಅವಹೇಳನಕಾರಿಯಾಗಿ ನಿಂದಿಸಿರುವ ತಹಸೀಲ್ದಾರ್ ಸೋಮಶೇಖರ್ ಅವರನ್ನು ಅಮಾನತ್ತು ಪಡಿಸುವಂತೆ ಒತ್ತಾಯಿಸಿ ಕಾರ್ಯಕರ್ತರು ದಲಿತ ಸಂಘಟನೆಗಳ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ತಹಸೀಲ್ದಾರ್ ಸೋಮಶೇಖರ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಎಂ.ಟಿ.ಮಂಜುನಾಥ್ ಅವರು ಒಂದು ಎಕರೆ ಜಮೀನನ್ನು ಕಾನೂನು ರೀತಿಯಲ್ಲಿ ಖರೀದಿಸಿ ಅನುಭೋಗದಲ್ಲಿದ್ದಾರೆ. ಆದರೆ, ಈ ಜಮೀನಿನ ಮಾಲೀಕರಾಗಿರುವ ಮಂಜುನಾಥ್ ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಪುರಸಭೆ ಮತ್ತು ತಾಲೂಕು ಸರ್ವೆ ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಅಳತೆ ಮಾಡಿ ಅತಿಕ್ರಮ ಪ್ರವೇಶ ಮಾಡಿದ್ದರು.
ಅಧಿಕಾರಿಗಳ ಈ ಕ್ರಮ ವಿರೋಧಿಸಿ ಮಂಜುನಾಥ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ್ದರು. ಆಯೋಗ ಮಂಜುನಾಥ್ ಅವರ ಹೆಸರಿಗೆ ಜಮೀನಿನ ಖಾತೆ ಮಾಡಿ ಇ-ಸ್ವತ್ತು ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಆದೇಶ ನೀಡಿತ್ತು. ಬಳಿಕ ಪುರಸಭೆ 5 ಲಕ್ಷ ಕಂದಾಯ ಪಾವತಿಸಿಕೊಂಡು ಅವರ ಹೆಸರಿಗೆ ಖಾತೆ ಮಾಡಿ ಇ- ಸ್ವತ್ತು ನೀಡಿತ್ತು.ಮೂರು ವರ್ಷಗಳ ನಂತರ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ತಹಸೀಲ್ದಾರ್ ಸೋಮಶೇಖರ್ ಪುರಸಭೆ ಮುಖ್ಯಾಧಿಕಾರಿಗಳು ಜಮೀನಿನ ಮಾಲೀಕ ಮಂಜುನಾಥ್ ಅವರಿಗೆ ಯಾವುದೇ ನೋಟಿಸ್ ಮತ್ತು ಮಾಹಿತಿ ನೀಡದೆ ಕಾನೂನು ಬಾಹಿರವಾಗಿ ಕಿರುಕುಳ ನೀಡಿದ್ದಾರೆ. ಇವರೆಲ್ಲರ ವಿರುದ್ಧ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಜಮೀನಿನ ವಿವಾದ ಸಂಬಂಧ ಪಟ್ಟಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಆದೇಶವನ್ನು ಲಘುವಾಗಿ ಟೀಕಿಸಿರುವ ತಹಸೀಲ್ದಾರ್ ಸೋಮಶೇಖರ್ ಅವರನ್ನು ಈ ಕೂಡಲೇ ಅಮಾನತ್ತು ಪಡಿಸುವಂತೆ ದಲಿತ ಮುಖಂಡರು ಉಪವಿಭಾಗಾಧಿಕಾರಿ ಶಿವಮೂರ್ತಿ ಎದುರು ಪಟ್ಟು ಹಿಡಿದು ಧರಣಿ ನಡೆಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆಯೋಗದ ಆದೇಶದ ಬಗ್ಗೆ ಮಾತನಾಡಿರುವುದನ್ನು ದಲಿದ ಮುಖಂಡರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಹೀಗಾಗಿ ತನ್ನ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳದಂತೆ ಮನವಿ ಮಾಡಿದರು.
ಇದೇ ವೇಳೆ ತಾಲೂಕಿನ ಎಲ್ಲ ಗ್ರಾಮಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಮಶಾನ ಭೂಮಿ ಮಂಜೂರು ಮತ್ತು ಅಭಿವೃದ್ಧಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಹೆಮ್ಮನಹಳ್ಳಿ ಗ್ರಾಪಂ ಪಿಡಿಒ ಲೀಲಾವತಿ ಎಸ್ ಸಿ, ಎಸ್ ಟಿ ಅನುದಾನವನ್ನು ಆಯಾ ವರ್ಷದಲ್ಲೇ ಸಮರ್ಪಕವಾಗಿ ಖರ್ಚು ಮಾಡದೇ ಕರ್ತವ್ಯ ಲೋಪ ಎಸೆಗಿರುವುದು ಉನ್ನತ ತನಿಖೆಯಲ್ಲಿ ಸಾಬೀತಾಗಿದೆ. ಆದರೂ ಈ ಹಗರಣ ಸಂಬಂಧ ಹಿರಿಯ ಅಧಿಕಾರಿಗಳು ಗ್ರಾಮದ ಡಿ.ಕೆ.ಕೃಷ್ಣ ನೀಡಿದ ದೂರಿನ ಅರ್ಜಿಯ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ಪಿಡಿಒ ಲೀಲಾವತಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಧರಣಿ ನಿರತರು ಆಗ್ರಹ ಪಡಿಸಿದರು.ನಂತರ ದಲಿತ ಜನಾಂಗದವರ ಸಮಸ್ಯೆ ಕುರಿತಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಬೇಕು ಹಾಗೂ ಅದನ್ನು ಕಾರ್ಯರೂಪಕ್ಕೆ ತರಲು ತಾಲೂಕು ಆಡಳಿತ ಕ್ರಮ ವಹಿಸಬೇಕು ಎಂದು ದಲಿತ ಮುಖಂಡರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿದರು.
ಇದೇ ವೇಳೆ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಉಮೇಶ್, ಗುರು ಶಂಕರ್, ನಿರಂಜನ್ ಭೌದ್ ಮತ್ತು ಮೈಸೂರು ವಿಭಾಗಿಯ ಸಂಚಾಲಕರಾದ ಡಿ.ಕೆ. ಅಂಕಯ್ಯ, ಮೂರ್ತಿ ಕಂಚಿನ ಕೋಟೆ, ಮಂಜು, ಶಿವಣ್ಣ, ಮಾದೇಶ್, ಸಣ್ಣಪ್ಪ, ಅಣ್ಣೂರು ರಾಜಣ್ಣ, ಮತ್ತಿತ್ತರರು ಇದ್ದರು.