ಹುಬ್ಬಳ್ಳಿ:

ಕಾಳು ಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಹಿರಿಯ ಅಧಿಕಾರಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಸೂಚಿಸಿದರು.

ಇಲ್ಲಿನ ಸಂತೋಷ ನಗರದ ಗೃಹ ಕಚೇರಿಯಲ್ಲಿ ಭಾನುವಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು,

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿ ಜಿಲ್ಲೆಯ ಜನರಿಗೆ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಹಾಗೂ ಪೂರೈಕೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಗೃಹ ಬಳಕೆಗೆ ಪ್ರತಿ ತಿಂಗಳು 11 ಸಾವಿರ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿತ್ತು. ಈಗ ಅದಕ್ಕಿಂತಲೂ ಹೆಚ್ಚು ಪೂರೈಕೆ ಮಾಡಲಾಗುತ್ತಿದೆ. ಆದರೆ, ಸಿಲಿಂಡರ್ ನೋಂದಣಿ ಪ್ರಮಾಣ ಹೆಚ್ಚಳ ಆಗಿರುವುದಿಂದ ಬೇಡಿಕೆ ಹೆಚ್ಚಿದೆ. ವಾಣಿಜ್ಯ ಬಳಕೆಗೆ ಮಾತ್ರ ಸಿಲಿಂಡರ್ ಕೊರತೆ ಉದ್ಭವಿಸಿದೆ. ಕೇವಲ ಶೇ. 20ರಷ್ಟು ಮಾತ್ರ ಪೂರೈಕೆ ಆಗುತ್ತಿದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.


ಈ ವೇಳೆ ಶಾಸಕರು, ನಿತ್ಯ ಬಳಕೆಯಲ್ಲಿ ಯಾವುದೇ ಏರಿಕೆ ಕಂಡು ಬರದಿದ್ದರೂ ಸಿಲಿಂಡರ್ ಅಭಾವದ ಸುದ್ದಿ ಹರಿದಾಡುತ್ತಿದೆ. ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಸಿಲಿಂಡರ್ ಸರಬರಾಜು ಮಾಡಬೇಕು. ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ವಿತರಕರನ್ನು ಗುರುತಿಸಿ ಅವರ ಪರವಾನಗಿ ರದ್ದು ಮಾಡುವಂತೆ ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಜಿಲ್ಲಾ ಜಂಟಿ ನಿರ್ದೇಶಕ ವಿನೋದ ಕುಮಾರ, ಹುಬ್ಬಳ್ಳಿ ಸಹಾಯಕ ನಿರ್ದೇಶಕ ಕೇಶವ ರಾಯ್ಕರ್, ಆಹಾರ ನಿರೀಕ್ಷಕರಾದ ವಿಜಯಕುಮಾರ, ಶಿವು ಹೊನ್ನಳ್ಳಿ, ಅರವಿಂದ ಅಂಗಡಿ, ಮಾರುಕಟ್ಟೆ ನೊಡಲ್ ಅಧಿಕಾರಿ ಸಂಜೀವಕುಮಾರ ಸೇರಿದಂತೆ ಹಲವರಿದ್ದರು.