ಸಾರಾಂಶ
ಕಾರಟಗಿ:
ಇಲ್ಲಿನ ವಲಿಸಾಬ್ ದರ್ಗಾದ ಆವರಣದ ಈದ್ಗಾ ಮೈದಾನದಲ್ಲಿ ತ್ಯಾಗ-ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಶನಿವಾರ ಆಚರಿಸಿದರು.ಬೆಳಗ್ಗೆ ಪಟ್ಟಣ ವಿವಿಧ ಪ್ರದೇಶಗಳಿಂದ ಈದ್ಗಾ ಮೈದಾನಕ್ಕೆ ಆಗಮಿಸಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಧರ್ಮಗುರುಗಳು ಧರ್ಮಗ್ರಂಥ ಪಠಿಸಿದರು. ಬಳಿಕ ಧರ್ಮ ಸಂದೇಶ ನೀಡಿದ ಅವರು, ಬಕ್ರೀದ್ ಸ್ಮರಣೆಗಾಗಿ ತ್ಯಾಗ, ಧರ್ಮದ ಮನೋಭಾವನೆ ರೂಢಿಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿ, ಸೌಹಾರ್ದತೆಯಿಂದ ಸಹಬಾಳ್ವೆ ನಡೆಸಿ ಸಮಾಜದಲ್ಲಿ ಸೌಹಾರ್ದತೆ ವಾತಾವರಣ ನಿರ್ಮಿಸಬೇಕು ಎಂದರು.
ಸಚಿವ ಶಿವರಾಜ ತಂಗಡಗಿ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಬಳಿಕ ಮಾತನಾಡಿದ ಸಚಿವರು, ಹಬ್ಬವು ಮುಸ್ಲಿಂ ಸಮಾಜ ಬಾಂಧವರ ಜೀವನದಲ್ಲಿ ಸುಖ, ಸಮೃದ್ಧಿ, ಸಂತೋಷ ಮತ್ತು ನೆಮ್ಮದಿ ತರಲಿ ಎಂದು ಹೇಳಿದರು.
ಈ ವೇಳೆ ಪ್ರಮುಖರಾದ ಎಸ್.ಎಂ. ಜಿಲಾನಿಸಾಬ್, ಡಾ. ಎಂ.ಐ. ಮುದಗಲ್, ಖಾಜಾಹುಸೇನ್ ಮುಲ್ಲಾ, ಅಮ್ಜದ್ಕಪಾಲಿ, ಅಮೃಲ್ ಹುಸೇನ್, ಬಾಬು ಬಳಿಗಾರ, ರಜ್ಜಬ್ ಅಲಿ ಬಿ, ಜಿಂದಾಸಾಬ್, ಗನಿ ಸಾಬ್, ಗೌಸ್ ಮೋಹಿದೀನ್, ಇಬ್ರಾಹಿಂ ಸಾಬ್, ಮೆಹಬೂಬ ಬಳಿಗಾರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಸದಸ್ಯರಾದ ಮಂಜುನಾಥ ಮೇಗೂರು, ಬಸವರಾಜ ಕೊಪ್ಪದ, ಆನಂದ, ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸೂಗೂರು, ಮಂಜುನಾಥ ಮಸ್ಕಿ, ಚೆನ್ನಬಸಪ್ಪ ಸುಂಕದ, ಶರಣಪ್ಪ ಗದ್ದಿ, ಉದಯ ಈಡಿಗೇರ, ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ಬಕ್ರೀದ್ ಹಬ್ಬ ಆಚರಿಸಲಾಯಿತು.
ಶಾದಿ ಮಹಲ್ ನಿರ್ಮಾಣಪಟ್ಟಣದಲ್ಲಿ ₹ 2.5 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲಿಯೇ ಶಾದಿಮಹಲ್ ನಿರ್ಮಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಘೋಷಿಸಿದರು. ಈ ಮುಂಚೆ ₹ ೨೫ ಲಕ್ಷ ವೆಚ್ಚದಲ್ಲಿ ಶಾದಿ ಮಹಲ್ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಈ ಬಾರಿ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲಿಯೇ ಸಮಾಜಕ್ಕೆ ನೀಡಿದ ಭರವಸೆ ಈಡೇರಿಸುವೆ. ಮುಸ್ಲಿಂ ಕಾಲನಿಗಳಿಗೆ ₹ ೫ ಕೋಟಿ ಅನುದಾನ ನೀಡಲಾಗಿದೆ ಎಂದರು.