ಹುಬ್ಬಳ್ಳಿ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ನಗರದಲ್ಲಿ ನೂತನ ಎಂಜಿನಿಯರಿಂಗ್ ಕಾಲೇಜು ಆರಂಭಿಸಲಾಗುತ್ತಿದೆ. ಭವಿಷ್ಯದಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ನುರಿತ ತಂತ್ರಜ್ಞರನ್ನು ರೂಪಿಸುವುದು ಸಂಸ್ಥೆಯ ಪ್ರಮುಖ ಗುರಿ ಎಂದು ವೇಮನ ವಿದ್ಯಾವರ್ಧಕ ಸಂಘದ ಮಹಾಪೋಷಕ, ಶಾಸಕ ಎಚ್.ಕೆ. ಪಾಟೀಲ ಹೇಳಿದರು.ಇಲ್ಲಿನ ವಿದ್ಯಾನಗರದ ಕೆ.ಎಚ್. ಪಾಟೀಲ ಕಾಲೇಜು ಆವರಣದಲ್ಲಿ ವೇಮನ ವಿದ್ಯಾವರ್ಧಕ ಸಂಘದಿಂದ ಪ್ರಾರಂಭಿಸಿರುವ ನೂತನ ಫ್ಯೂಚರ್ ಪೋರ್ಜ್ ಎಂಜಿನಿಯರಿಂಗ್ ಕಾಲೇಜಿನ ನೂತನ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ರಾಜಧಾನಿಯಾಗಿದೆ. ಈ ಪ್ರದೇಶದಲ್ಲಿ ಮತ್ತೊಂದು ಗುಣಮಟ್ಟದ ಎಂಜಿನಿಯರಿಂಗ್ ಕಾಲೇಜಿನ ಅಗತ್ಯವಿದ್ದು, ವೇಮನ ವಿದ್ಯಾವರ್ಧಕ ಸಂಘ ಆ ಕೊರತೆ ನೀಗಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ ಎಂದರು.ಸಂಘವು ಕಳೆದ ವರ್ಷ ಕಾನೂನು ಮಹಾವಿದ್ಯಾಲಯ ಆರಂಭಿಸಿದ್ದು, ಈ ಶೈಕ್ಷಣಿಕ ವರ್ಷದಿಂದ ಫ್ಯೂಚರ್ ಪೋರ್ಜ್ ಎಂಜಿನಿಯರಿಂಗ್ ಅಕಾಡೆಮಿ ಮೂಲಕ ಎಂಜಿನಿಯರಿಂಗ್ ಕಾಲೇಜನ್ನು ಆರಂಭಿಸುತ್ತಿದೆ. ಒಟ್ಟು 300 ವಿದ್ಯಾರ್ಥಿಗಳು ಸಾಮರ್ಥ್ಯ ಒಳಗೊಂಡಿದೆ. ಈ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್ ಆರಂಭಿಸಲಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ವಿಭಾಗಕ್ಕೂ 60 ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯವಿದ್ದು, ಒಟ್ಟು 300 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಕಾಲೇಜಿನ ಮೊದಲ ಹಂತದ ಕಟ್ಟಡ ನಿರ್ಮಾಣಕ್ಕೆ ಸುಮಾರು ₹ 3 ಕೋಟಿ ವೆಚ್ಚ ಅಂದಾಜಿಸಿದ್ದು ಆಡಳಿತ ಭವನ, ವಿದ್ಯಾರ್ಥಿ ವಸತಿ ನಿಲಯ ಸೇರಿದಂತೆ ಇತರೆ ಮೂಲಸೌಕರ್ಯಗಳ ನಿರ್ಮಾಣ ಕಾರ್ಯ ಹಂತ-ಹಂತವಾಗಿ ನಡೆಯಲಿದೆ. ಸುಮಾರು 6 ತಿಂಗಳೊಳಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಈ ವೇಳೆ ಶಾಸಕರಾದ ಎನ್.ಎಚ್. ಕೋನರಡ್ಡಿ, ಜೆ.ಟಿ. ಪಾಟೀಲ, ಮಾಜಿ ಸಚಿವ ಡಾ. ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಹೆಸ್ಕಾಂ ಅಧ್ಯಕ್ಷ ಅಜೀಂಫೀರ್ ಖಾದ್ರಿ, ಮಾಜಿ ಮೇಯರ್ ಪಾಂಡುರಂಗ ಪಾಟೀಲ, ವಿ.ಡಿ. ಕಾಮರಡ್ಡಿ, ವಿ.ಆರ್. ಹನುಮರಡ್ಡಿ, ಚೇರಮನ್ ರಮೇಶ ಜಂಗಲ, ಗೌರವ ಕಾರ್ಯದರ್ಶಿ ಆರ್.ಕೆ. ಪಾಟೀಲ, ಪ್ರೊ. ವಿ.ಕೆ. ರಡ್ಡೇರ, ಅಶೋಕ ಇಟಗಿ, ರವಿ ಮೂಲಿಮನಿ, ಆರ್.ಆರ್. ಓದುಗೌಡರ, ದಾನಪ್ಪ ಕಬ್ಬೇರ, ಎಂ. ನಾರಾಯಣ, ಪ್ರಾಚಾರ್ಯ ಡಾ. ಪ್ರಭು ರಕರಡ್ಡಿ ಸೇರಿದಂತೆ ಹಲವರಿದ್ದರು.