ಸಮಾಜದಲ್ಲಿ ಮಹಿಳಾ ಸುರಕ್ಷತೆ ಮತ್ತು ಜಾಗೃತಿಯ ಕಿರುಸೇತುವೆಯಾಗಿ ಅಕ್ಕಪಡೆ ಕಾರ್ಯನಿರ್ವಹಿಸುತ್ತಿದ್ದು, ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅಕ್ಕಪಡೆಯ ರಾಜ್ಯ ಸಲಹೆಗಾರರಾದ ಶೈನಿ ಪ್ರದೀಪ್ ಗುಂಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೀದರ್
ಸಮಾಜದಲ್ಲಿ ಮಹಿಳಾ ಸುರಕ್ಷತೆ ಮತ್ತು ಜಾಗೃತಿಯ ಕಿರುಸೇತುವೆಯಾಗಿ ಅಕ್ಕಪಡೆ ಕಾರ್ಯನಿರ್ವಹಿಸುತ್ತಿದ್ದು, ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅಕ್ಕಪಡೆಯ ರಾಜ್ಯ ಸಲಹೆಗಾರರಾದ ಶೈನಿ ಪ್ರದೀಪ್ ಗುಂಟಿ ಹೇಳಿದರು.ಅವರು ನಗರದ ನಯಾ ಕಮಾನ್ ಹತ್ತಿರದ ಹೋಲಿ ಫೇತ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಆರಂಭಿಸಿರುವ ಬೀದರ್ ಜಿಲ್ಲಾ ಪೊಲೀಸ್ ಅಕ್ಕಪಡೆ ಈಗಾಗಲೇ ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಹಿಳೆಯರು ಸುರಕ್ಷಿತರಾಗಿದ್ದರೆ ಜಿಲ್ಲೆ ಸುರಕ್ಷಿತವಾಗಿರುತ್ತದೆ’ಎಂಬ ಆಲೋಚನೆಯೊಂದಿಗೆ ಅಕ್ಕಪಡೆಯನ್ನು ರಚಿಸಿ, ವ್ಯವಸ್ಥಿತವಾಗಿ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ನೀಡಿದ ಸಂದರ್ಭಗಳಲ್ಲಿ ಅವರನ್ನು ರಕ್ಷಿಸುವ ಕಾರ್ಯವನ್ನು ಅಕ್ಕಪಡೆ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ವಿವರಿಸಿದ ಅವರು ಮಹಿಳೆಯರು ಮತ್ತು ಮಕ್ಕಳಿಗೆ ತ್ವರಿತ ಸಹಾಯ, ಧೈರ್ಯ ಮತ್ತು ವಿಶ್ವಾಸ ಮೂಡಿಸುವ ಉದ್ದೇಶದಿಂದ ಅಕ್ಕಪಡೆ ಕಾರ್ಯನಿರ್ವಹಿಸುತ್ತಿದೆ ಎಂದರು.ಈ ಸಂದರ್ಭದಲ್ಲಿ ಅಕ್ಕಪಡೆಯಿಂದ ಮಹಿಳಾ ಸುರಕ್ಷತೆ ಜಾಗೃತಿ ಕಾರ್ಯಾಗಾರ ನಡೆಸಲಾಯಿತು. ಶಾಲೆಯ ಅಧ್ಯಕ್ಷರಾದ ಮೊಹಮ್ಮದ್ ಖಾದ್ರಿ ಶರೀಫ್, ಮುಖ್ಯೋಪಾಧ್ಯಾಯರಾದ ತಲತ್ ಹಾಗೂ ಅಕ್ಕಪಡೆಯಿಂದ ತರಬೇತಿ ನೀಡಿದ ಪೊಲೀಸ್ ಅಧಿಕಾರಿ ಸಂಗೀತಾ ಅವರು ಉಪಸ್ಥಿತರಿದ್ದರು.