ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ವಾರ್ಷಿಕ ಕನಿಷ್ಠ 20 ರಿಂದ 25 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಪ್ರತ್ಯೇಕವಾಗಿ ಕಾಯ್ದಿರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯ ಅನುಷ್ಠಾನಕ್ಕೆ ಕೇವಲ ಇಚ್ಛಾಶಕ್ತಿ ಮಾತ್ರವಲ್ಲದೆ, ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣವೂ ಅಷ್ಟೇ ಮುಖ್ಯವಾಗಿದೆ. ಇದನ್ನು ಮಾಡದಿದ್ದರೆ ಕೃಷ್ಣಾ ಮೇಲ್ದಂಡೆ ಯೋಜನೆ ಕೇವಲ ಕಾಗದದ ಮೇಲಿನ ಇಚ್ಛೆಯಾಗಿ ಉಳಿಯಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

₹ 75,000 ಕೋಟಿ ಸಂಕಲ್ಪದ ನೆನಪು: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ₹ 75,000 ಕೋಟಿ ಅನುದಾನ ಮೀಸಲಿಡುವುದಾಗಿ ಈ ಹಿಂದೆ ನೀವೇ (ಕಾಂಗ್ರೆಸ್ ಸರ್ಕಾರ) ಸಂಕಲ್ಪ ಮಾಡಿದ್ದಿರಿ. ಈಗ ಮೂರು ವರ್ಷಗಳು ಕಳೆದಿವೆ, ಆ ಭರವಸೆಯನ್ನು ನಾನು ನೆನಪು ಮಾಡಲು ಬಯಸುತ್ತೇನೆ " ಎಂದು ಸಿ.ಟಿ.ರವಿ ಹೇಳಿದರು.

ಯೋಜನೆಗೆ ಶತಮಾನೋತ್ಸವ ಬರುವುದು ಬೇಡ: ನಾವು ಇಲ್ಲಿ ಯಾವುದೇ ಆ ಪಕ್ಷ-ಈ ಪಕ್ಷ ಎಂದು ರಾಜಕೀಯ ಮಾಡಲು ಬಯಸುವುದಿಲ್ಲ. ಆದರೆ ಯೋಜನೆ ಪೂರ್ಣಗೊಳ್ಳದೆ ಅದಕ್ಕೆ ಶತಮಾನೋತ್ಸವ ಆಚರಿಸುವ ಪರಿಸ್ಥಿತಿ ಬಂದರೆ ಅದು ಯಾರಿಗೂ ಗೌರವ ತರುವ ಸಂಗತಿಯಲ್ಲ. ಜನರು ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳದಂತೆ ಸರ್ಕಾರ ಶೀಘ್ರವಾಗಿ ಸಂಪನ್ಮೂಲ ಕ್ರೋಢೀಕರಿಸಬೇಕು ಎಂದು ಎಚ್ಚರಿಸಿದರು.


ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ: ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲೇ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಕುರಿತು ನೀಡಿದ್ದ ಭರವಸೆಯನ್ನು ಸಹ ನಾಯಕರು ನೆನಪಿಸಿದರು.

ಬಾಗಲಕೋಟೆ ಕ್ಷೇತ್ರದಲ್ಲಿ ಬಾಕಿ ಇರುವ ವಿವಿಧ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದ ಅವರು, ಭರವಸೆ ನೀಡಿರುವ ಯೋಜನೆಗಳನ್ನು ಸರ್ಕಾರ ಮರೆಯಬಾರದು. "ರಾಜಕಾರಣದ ಜಂಜಾಟದಲ್ಲಿ ರಾಜಕಾರಣಿಗಳು ಜನರ ಬದುಕಿನ ಸಮಸ್ಯೆಗಳನ್ನು ಹಾಗೂ ಅಭಿವೃದ್ಧಿ ವಿಚಾರಗಳನ್ನು ಮರೆ0ುುವುದು ಸ್ವಾಭಾವಿಕ. ಅದಕ್ಕಾಗಿಯೇ ನಾವು ಈ ಯೋಜನೆಗಳನ್ನು ನೆನಪಿಸುತ್ತಿದ್ದೇವೆ ಎಂದರು.ಪ್ರಸ್ತಾಪಿತ ಸರ್ಕಾರಿ ವೈದ್ಯಕೀಯ ಕಾಲೇಜು ಶೀಘ್ರದಲ್ಲೇ ಪ್ರಾರಂಭವಾಗಬೇಕು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳು ವೇಗವಾಗಿ ನಡೆಯಬೇಕು. ಈ ಹಿಂದೆ ನೀಡಲಾಗಿದ್ದ ಭರವಸೆಯಂತೆ ಜವಳಿ ಪಾರ್ಕ ಸ್ಥಾಪನೆಯ ಕೆಲಸ ಯಾವಾಗ ಪೂರ್ಣಗೊಳ್ಳುತ್ತದೆ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಬೀಳಗಿ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಅನುಮೋದನೆ ನೀಡಬೇಕು. ನೂತನ ಮುಖ್ಯಮಂತ್ರಿಗಳು ಈ ಯೋಜನೆಗೆ ಅಗತ್ಯ ಅನುಮೋದನೆ ನೀಡಿ ರೈತರಿಗೆ ನೆರವಾಗಬೇಕು. ಕೈಗಾರಿಕಾ ಹಬ್ಗಳ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿಯ ಭರವಸೆಗಳು ಕೇವಲ ಪ್ರಣಾಳಿಕೆ ಅಥವಾ ಪುಸ್ತಕಕ್ಕೆ ಸೀಮಿತವಾಗಬಾರದು. ಇದು ವಾಸ್ತವ ನೆಲೆಯಲ್ಲಿ ಕಾರ್ಯಾರಂಭ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ಮಾಜಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ರಾಜಶೇಖರ ಶೀಲವಂತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಸೇರಿದಂತೆ ಇತರರು ಇದ್ದರು.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಳುಗಡೆ ಸಂತ್ರಸ್ತರ ಪರಿಹಾರ ಮೊತ್ತವನ್ನು ₹ 1.40 ಲಕ್ಷದಿಂದ ₹ 25 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಪ್ರಸ್ತುತ ಅದನ್ನು ₹ 40 ಲಕ್ಷಕ್ಕೆ ಏರಿಸಿರುವುದು ಸಂತೋಷದ ವಿಷಯ. ಆದರೆ ಕೇವಲ ಪರಿಹಾರ ನೀಡಿದರೆ ಸಾಲದು, ಇಡೀ ಯೋಜನೆ ಮುಕ್ತಾಯಗೊಳ್ಳಬೇಕು. ವರದಿಗಳ ಪ್ರಕಾರ ಇಡೀ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸಲು ಸದ್ಯ ಸುಮಾರು ₹ 1.20 ಲಕ್ಷ ಕೋಟಿಗೂ ಅಧಿಕ ಮೊತ್ತದ ಅವಶ್ಯಕತೆ ಇದೆ. ಈ ಬೃಹತ್ ಮೊತ್ತವನ್ನು ಸರಿದೂಗಿಸಲು ಸರ್ಕಾರ ಪ್ರತಿ ವರ್ಷ ಕನಿಷ್ಠ ₹ 20,000 ದಿಂದ ₹ 25,000 ಕೋಟಿಯನ್ನು ಈ ಯೋಜನೆಗಾಗಿಯೇ ಮೀಸಲಿಡಬೇಕು.

-ಸಿ.ಟಿ.ರವಿ, ಮಾಜಿ ಸಚಿವರು, ಹಾಲಿ ವಿಧಾನ ಪರಿಷತ್‌ ಸದಸ್ಯ