ಕನ್ನಡಪ್ರಭ ವಾರ್ತೆ ಮೈಸೂರು
ಅಂಬೇಡ್ಕರ್ ಈ ದೇಶದ ದೊಡ್ಡಶಕ್ತಿಯಾಗಿದ್ದು, ಅವರ ಹೆಸರಿನಲ್ಲಿ ನಾವೆಲ್ಲರು ಸಂಘಟಿತರಾಗಿ ಈ ದೇಶವನ್ನು ಭೀಮದೇಶವನ್ನಾಗಿ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ ಹೇಳಿದರು.ವಿಜಯನಗರ 3ನೇ ಹಂತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯ ಜ್ಞಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ನೊಂದವರ ಅಸ್ಮಿತೆಯಾಗಿದ್ದು, ತಮಗಾಗಿ ಏನನ್ನೂ ಮಾಡಿಕೊಳ್ಳದೆ ಜ್ಞಾನವನ್ನು ಮಾತ್ರ ಸಂಪಾದಿಸಿದರು ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟರು ಸುಮಾರು 100 ದೇಶಗಳಲ್ಲಿ ಅಂಬೇಡ್ಕರ್ ಹುಟ್ಟಿದ ದಿನವನ್ನು ಜ್ಞಾನದ ದಿನವಾಗಿ ಆಚರಿಸುತ್ತಾರೆ. ಇಂತಹ ಮಹಾನ್ ನಾಯಕನಿಗೆ ನಾವೆಲ್ಲರೂ ಚಿರಋಣಿಯಾಗಿರಬೇಕು. ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಹೆಚ್ಚು ಹೆಚ್ಚು ಜ್ಞಾನ ಸಂಪಾದನೆ ಮಾಡಿ ಅಭಿವೃದ್ಧಿ ಹೊಂದಬೇಕು ಎಂದ ಅವರು, ಸಮಾಜ ಕಲ್ಯಾಣ ಇಲಾಖೆ ಬಾಬಾಸಾಹೇಬರ ತತ್ವಗಳನ್ನು ಚಾಚುತಪ್ಪದೆ ಅನುಷ್ಠಾನಗೊಳಿಸುತ್ತಿದೆ ಎಂದರು.ಅಂಬೇಡ್ಕರ್ ವಿಚಾರವಾದಿಯಾದ ಡಾ. ಸುರೇಶ್ ಗೌತಮ್ ಮಾತನಾಡಿ, ಅಂಬೇಡ್ಕರ್ ಕನಸಿನ ಸಂವಿಧಾನ ಇಂದು ಅಪಾಯದಲ್ಲಿದ್ದು, ಎಸ್.ಸಿ., ಎಸ್.ಟಿ. ಎಂಬ ಕಾಂಪೌಂಡ್ ಒಳಗೆ ಅಂಬೇಡ್ಕರ್ ನಿಲ್ಲಿಸಲು ಪಟ್ಟಭದ್ರ ಹಿತಾಶಕ್ತಿಗಳು ಪ್ರಯತ್ನ ನಡೆಸುತ್ತಿದೆ ಇದರಿಂದ ನಾವೆಲ್ಲ ಜಾಗೃತರಾಗಿ ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸಂವಿಧಾನದ ಆಶಯಗಳನ್ನು ಉಳಿಸಿಕೊಂಡು ಪ್ರಬುದ್ಧ ಭಾರತವನ್ನು ಕಟ್ಟಬೇಕು. ಅಂಬೇಡ್ಕರ್ ಹೇಳಿದಂತೆ ವಿದ್ಯಾರ್ಥಿಗಳು ಜಗತ್ತೇ ಬೆರಗಾಗುವಂತೆ ಓದಿ ಗುರಿ ತಲುಪಬೇಕು ಎಂದರು.
ಅಹಿಂದ ಮುಖಂಡ ಜವರಪ್ಪ ಮಾತನಾಡಿ, ಸಮಾಜದಲ್ಲಿರುವ ಮೌಢ್ಯ ಕಂದಾಚಾರಗಳನ್ನು ದಿಕ್ಕರಿಸಿ ವೈಜ್ಞಾನಿಕವಾಗಿ ಚಿಂತನೆ ಮಾಡಿ ಸಮಾಜದಲ್ಲಿರುವ ಅಸಮಾನತೆ, ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿ ಮಾತನಾಡಿ, ಪ್ರಶ್ನೆ ಮಾಡಿ ಪರಿಣಾಮಕಾರಿಯಾಗಿ ಶಿಕ್ಷಣ ಪಡೆದು ಜ್ಞಾನವಂತರಾಗಿ ಸ್ವಾಭಿಮಾನಿಗಳಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ನಿರ್ದೇಶಕ ಎ.ಎಸ್. ಜನಾರ್ಧನ್, ಅಬಕಾರಿ ಉಪನಿರೀಕ್ಷಕ ಪಿ. ರಾಘವೇಂದ್ರ, ನಿಲಯಪಾಲಕರಾದ ಪ್ರದೀಪ್, ಕೆ. ಮಹೇಶ್, ಕಾರ್ತಿಕ್, ಚಿಕ್ಕೀರಯ್ಯಾ, ರಾಜೇಶ್ವರಿ, ಚಂದ್ರಮ್ಮ, ಮಹೇಶ್, ಶಿವಮಲ್ಲಯ್ಯ, ಗುರುಪ್ರಸಾದ್, ಮಹಾಂತೇಶ್ ಮಾಟೋಳಿ, ಜಗದೀಶ್, ಮಹೇಶ್, ಚೇತನ್ದೊಡ್ಡಯ್ಯ ನಿರೂಪಿಸಿದರು. ಪ್ರದೀಪ್ ಸ್ವಾಗತಿಸಿದರು. ಅಮ್ಮರಾಮಚಂದ್ರ ಪ್ರಾರ್ಥಿಸಿದರು.