ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳಲ್ಲಿ ಒಳ್ಳೆಯ ಗುಣ, ಕೌಶಲ್ಯ ಮತ್ತು ಸಮಾಜಕ್ಕೆ ಕೊಡುಗೆ ನೀಡುವಂತೆ ಪ್ರಾಧ್ಯಾಪಕರು ಉತ್ತೇಜನ ನೀಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಿ.ಎಸ್. ಪ್ರತಿಮಾ ಅಭಿಪ್ರಾಯಪಟ್ಟರು.

ವಿಜಯನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಸಿ. ಹೇಮಾವತಿ ಅವರ ‘ಸಸ್ಯ ಸಂರಕ್ಷಣೆ’ ಪುಸ್ತಕ ಬಿಡುಗಡೆ ಮತ್ತು ನಿವೃತ್ತರಾದ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಪ್ರಾಧ್ಯಾಪಕ ಕಾಯಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಇಲಾಖೆಗೆ ಪ್ರೊ.ಸಿ. ಹೇಮಾವತಿ ಅವರು ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡಲು ಪ್ರೊ.ಸಿ. ಹೇಮಾವತಿ ದತ್ತಿ ಇಟ್ಟು ಇತರರಿಗೂ ಸ್ಫೂರ್ತಿಯಾಗಿದ್ದಾರೆ. ಸಮಾಜ ಮತ್ತು ಶೈಕ್ಷಣಿಕ ವಲಯದಲ್ಲಿ ಅವರ ಸೇವೆ ಮುಂದುವರೆಯಲಿ ಮತ್ತು ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಪ್ರೊ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಪ್ರೊ.ಸಿ. ಹೇಮಾವತಿ ಅವರು ನ್ಯಾಯಸಮ್ಮತ ಮತ್ತು ಪ್ರಾಮಾಣಿಕತೆಯಿಂದ ವೃತ್ತಿ ನಿರ್ವಹಿಸಿದ್ದಾರೆ. ಪ್ರಸ್ತುತದಲ್ಲಿ ಗುಣಮಟ್ಟ ಮತ್ತು ಅನುಭವಿ ಪ್ರಾಧ್ಯಾಪಕರು ಕಡಿಮೆಯಾಗುತ್ತಿದ್ದಾರೆ. ಪ್ರವೃತ್ತಿಯಿಂದ ನಿವೃತ್ತಿಯಾಗಲ್ಲ. ಪ್ರೊ.ಹೇಮಾವತಿ ಅವರ ಸೇವೆ ಮುಂದುವರೆಯಲಿ ಎಂದರು.


ಲೋಕರ್ಪಣೆಗೊಂಡ ಸಸ್ಯ ಸಂರಕ್ಷಣೆ ಪುಸ್ತಕ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಾ. ವಿಜಯ್ ಅವರು, ಅಳಿವಿನಂಚಿನ ಸಸ್ಯಗಳನ್ನು ಹೇಗೆ ಮತ್ತು ಏಕೆ ಸಂರಕ್ಷಣೆ ಮಾಡಬೇಕು ಎಂದು ತಮ್ಮ ಪ್ರಾಯೋಗಿಕ ಅನುಭವದಿಂದ ಪುಸ್ತಕದಲ್ಲಿ ಸುದೀರ್ಘವಾಗಿ ಪ್ರೊ.ಸಿ. ಹೇಮಾವತಿ ಅವರು ದಾಖಲಿಸಿದ್ದಾರೆ ಎಂದರು.

ಪ್ರೊ.ಸಿ. ಹೇಮಾವತಿ ಮಾತನಾಡಿ, 34 ವರ್ಷಗಳ ಸೇವೆ ಸಂತೋಷ ಹಾಗೂ ತೃಪ್ತಿ ಕೊಟ್ಟಿದೆ. ವಿದ್ಯಾರ್ಥಿಗಳು ಎಲ್ಲೇ ಸಿಕ್ಕರೂ ಪ್ರೀತಿ–ಗೌರವದಿಂದ ಕಾಣುತ್ತಾರೆ. ನನ್ನ ಸೇವಾವಧಿಯಲ್ಲಿ ಎಲ್ಲಾ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ನೀಡಿರುವ ಪ್ರೀತಿ ಮತ್ತು ವಿಶ್ವಾಸವನ್ನು ಸಿಹಿಯಾಗಿ ನೆನೆಯುತ್ತೇನೆ ಎಂದರು.

ಕಾಲೇಜಿನ ಪ್ರಾಂಶುಪಾಲ ಕೆ.ಸಿ.ಭದ್ರಗಿರಿಯಯ್ಯ ಅಧ್ಯಕ್ಷತೆ ವಹಿಸಿದ್ದರು. ಜಂಟಿ ನಿರ್ದೇಶಕರ ಕಚೇರಿಯ ನಾಗೇಂದ್ರ ಪ್ರಸಾದ್, ಕಾಲೇಜಿನ ಡಾ. ಮೋಹನ್ ಕುಮಾರ್, ಡಾ.ಮಲ್ಲಮ್ಮ, ಪ್ರೊ. ರಶ್ಮಿ ಚೆನ್ನಯ್ಯ, ಪ್ರೊ.ಎಂ.ವೀಣಾ, ಪ್ರೊ.ಎಚ್‌.ಪಿ. ಗೀತಾ, ಪ್ರೊ.ಡಿ.ಸುಮಂಗಲಾ, ಎ.ರಾಘವೇಂದ್ರ, ಆರ್.ರಶ್ಮಿ ಆರ್, ಡಾ.ರಾಜೇಂದ್ರ, ಡಾ.ಜಿ.ಆರ್‌.ನಟರಾಜ್ , ಆರೀಫ ಸುಲ್ತಾನ, ಆರ್‌.ರಘು, ಡಾ.ವೀಣಾ, ಡಾ.ಸ್ವರೂಪ ರಾಣಿ, ಡಾ.ದೇವಿಕಾ, ಡಾ.ಶೋಭಾ ಜಗನ್ನಾಥ್, ಡಾ.ಮಾಧವಿ, ಡಾ. ಮಲ್ಲಿಕಾರ್ಜುನ್ ಸ್ವಾಮಿ, ಡಾ.ವೀಣಾ, ಡಾ.ರಾಘವೇಂದ್ರ, ಡಾ.ದಿಲೀಪ್ ನರಸಯ್ಯ, ಡಾ.ಗೌತಮ್ ದೇವನೂರು, ಡಾ. ಸಂಜಯ್ ಮೊದಲಾದವರು ಇದ್ದರು.