135ನೇ ಅಂಬೇಡ್ಕರ್‌ ಜಯಂತಿ ಅಂಗವಾಗಿ 135 ಮಂದಿ ಸಾಧಕರಿಗೆ ಸನ್ಮಾನ

ದಲಿತ ಸಂಘಟನೆ ಸಮನ್ವಯ ಸಮಿತಿಯಿಂದ ದಲಿತ ಚಳವಳಿ-ಸಾಹಿತ್ಯ ಕುರಿತ ಸಂವಾದ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನ ಇಡೀ ವಿಶ್ವಕ್ಕೆ ಶ್ರೇಷ್ಠವಾಗಿದ್ದು, ಏಕತೆ, ಸಾರ್ವಭೌಮತ್ವ ಹಾಗೂ ಅಖಂಡತೆಯನ್ನು ಹೊಂದಿದೆ ಎಂದು ಮಾಜಿ ಸಚಿವ ಬಿ. ಸೋಮಶೇಖರ್‌ ತಿಳಿಸಿದರು.

ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ನಡೆದ ಡಾ. ಅಂಬೇಡ್ಕರ್‌ರವರ 135ನೇ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 135 ಮಂದಿ ಸಾಧಕರಿಗೆ ಸನ್ಮಾನ ಮತ್ತು ದಲಿತ ಕವಿ ನಾಡೋಜ ಡಾ. ಸಿದ್ದಲಿಂಗಯ್ಯ ಮತ್ತು ಕ್ರಾಂತಿಕವಿ ಮುಳ್ಳೂರು ನಾಗರಾಜುರವರ ನೆನಪು ಹಾಗೂ ದಲಿತ ಚಳವಳಿ -ಸಾಹಿತ್ಯ ಕುರಿತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಬಾಬಾ ಸಾಹೇಬ್ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನದ ರಚನೆ ಮಾಡಿ ಎಲ್ಲ ವರ್ಗದವರಿಗೂ ಅಧಿಕಾರ ಸಮಾನವಾಗಿ ಅಧಿಕಾರ ಹಂಚಿಕೆ ಆಗಬೇಕು ಎಂಬ ಉದ್ದೇಶ ಹೊಂದಿದ್ದರು. ಅವರು ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಒತ್ತು ನೀಡಿದ್ದರು. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಅರಿತು ಇದ್ದರು. ಶಿಕ್ಷಣ ಪಡೆದವರು ಮುಂದಿನ ದಿನಗಳಲ್ಲಿ ಅಧಿಕಾರ ನಡೆಸುವ ಜಾಗದಲ್ಲಿ ಕೂರುತ್ತಾರೆ ಎಂಬ ವಿಶ್ವಾವನ್ನು ಹೊಂದಿದ್ದರು. ಇದನ್ನು ಸಕಾರಗೊಳಿಸುವುದು ನಮ್ಮೆಲ್ಲರ ಮೇಲಿದೆ ಎಂದರು.

ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಎಲ್ಲಾ ಕಡೆಯು ಕೂಡ ಅಂಬೇಡ್ಕರ್‌ ಅವರ ಪುತ್ಥಳಿಗಳು ಎತ್ತರಕ್ಕೆ ಬೆಳೆಯುತ್ತಿವೆ. ಆದರೆ, ಅವರ ಮೌಲ್ಯಗಳು ಕುಸಿಯುತ್ತಿವೆ. ಅವರ ತತ್ವ ಅದರ್ಶಗಳನ್ನು ಪಾಲನೆ ಮಾಡಿ, ಅವರಂತೆ ನಾವು ಸಹ ಸಾಧನೆ ಮಾಡುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದರು.

ಅಂಬೇಡ್ಕರ್‌ ವಾದಿಗಳು ಅವಕಾಶವಾದಿಗಳಲ್ಲ. ಅವಕಾಶವಾದಿಗಳು ಅಂಬೇಡ್ಕರ್‌ ವಾದಿಗಳು ಸಾಧ್ಯವಿಲ್ಲ. ಸಾಧಕರು ಸಮಯ ಸಾಧಕರಾಗಬಾರದು. ಅಂಬೇಡ್ಕರ್‌ ಅವರು ಸಾಧಕರಾಗಿ ಎಂದು ಹೇಳಿದ್ದರು. ನಾವು ಸಮಯ ಸಾಧಕರಾಗುತ್ತಿದ್ದೇವೆ. ಅವಕಾಶವಾದಿಗಳಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದು ಹೇಳಿದ್ದರು.

ಕಾರ್ಯಕ್ರಮದ ಆಯೋಜಕರಾದ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಧಾರೆಗಳು ವಿಶ್ವ ಮಟ್ಟದಕ್ಕೇರಿವೆ. ಅಂಬೇಡ್ಕರ್‌ ಅವರನ್ನು ಎಲ್ಲಾ ವರ್ಗದ ಜನರು ಅಪ್ಪಿಕೊಳ್ಳುತ್ತಿದ್ದಾರೆ. ಅವರ ಸಂವಿಧಾನದಡಿಯಲ್ಲಿ ಸವಲತ್ತುಗಳನ್ನು ಪಡೆದುಕೊಂಡು ಅಭಿವೃದ್ಧಿಯಾಗುತ್ತಿದ್ದಾರೆ. ಇಂಥ ಸರ್ವ ಶ್ರೇಷ್ಠವಾದ ಸಂವಿಧಾವನ್ನು ಅಂಬೇಡ್ಕರ್‌ ಅವರು ನಮಗೆ ನೀಡಿದ್ದಾರೆ ಎಂದರು.

ಬಿ. ಸೋಮಶೇಖರ್‌ ಅವರು ಓರ್ವ ಅಂಬೇಡ್ಕರ್‌ ವಾದಿಗಳಾಗಿದ್ದರು. ಅವರು ಸಿಕ್ಕ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡರು. ಕಂದಾಯ ಹಾಗೂ ಶಿಕ್ಷಣ ಇಲಾಖೆಯಲ್ಲಿ ಅವರು ತಂದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಬಡವರಿಗೆ ಹೆಚ್ಚು ಪ್ರಯೋಜನವಾಗಿತ್ತು. ಅವರ ಸೇವೆಯನ್ನು ಗುರುತಿಸಿ ಇನ್ನು ಹೆಚ್ಚಿನ ರಾಜಕೀಯ ಸ್ಥಾನಮಾನ ನೀಡಬೇಕಾಗಿತ್ತು. ಇಂಥವರಿಗೆ ಅಧಿಕಾರ ಸಿಗುವುದು ಕಷ್ಟ ಎಂದು ಅವರ ಸೇವೆಯನ್ನು ಗುಣಗಾನ ಮಾಡಿದರು.

135 ಮಂದಿಗೆ ಸನ್ಮಾನ:

ಅಂಬೇಡ್ಕರ್‌ ಅವರ 135ನೇ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 135 ಮಂದಿಯನ್ನು ವೇದಿಕೆಗೆ ಆಹ್ವಾನಿಸಿ, ಶಾಲು ಹೊದಿಸಿ, ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಲ್ಯಾಣಸಿರಿ ಬಂತೇಜಿ ಸಾನಿಧ್ಯ ವಹಿಸಿದ್ದರು. ರಮಾ ಸಿದ್ದಲಿಂಗಯ್ಯ, ಸಾಹಿತಿ ಸೋಮಶೇಖರ ಬಿಸಲವಾಡಿ, ಮಲ್ಕುಂಡಿ ಮಹದೇವಸ್ವಾಮಿ, ಮುಖಂಡರಾದ ಅರಕಲವಾಡಿ ನಾಗೇಂದ್ರ, ಬಸವಣ್ಣ ಮೂಕಳ್ಳಿ, ಪ್ರಾಧ್ಯಾಪಕ ಗುರುರಾಜು ಯರಗನಹಳ್ಳಿ ಮಾತನಾಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್‌, ನಂಜುಂಡಸ್ವಾಮಿ, ಕೆಸಿಆರ್‌ ರಂಗಸ್ವಾಮಿ, ದೊಡ್ಡಿಂದುವಾಡಿ ಸಿದ್ದರಾಜು, ನಾಗು ರಮೇಶ್, ಡಿಎಸ್‌ಎಸ್ ಶಿವಣ್ಣ ಇತರರು ಹಾಜರಿದ್ದರು.