ಅಮಿತ್ ಶಾ ಬಹಿರಂಗ ಕ್ಷಮೆಯಾಚಿಸಬೇಕು

| Published : Dec 24 2024, 12:50 AM IST

ಸಾರಾಂಶ

ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅಮಿತ್ ಶಾರನ್ನು ಕೂಡಲೇ ಸಂಪುಟದಿಂದ ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ಸಂವಿಧಾನ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ದಾವಣಗೆರೆ: ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅಮಿತ್ ಶಾರನ್ನು ಕೂಡಲೇ ಸಂಪುಟದಿಂದ ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ಸಂವಿಧಾನ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಪ್ರಾರಂಭಿಸಿ ಹದಡಿ ರಸ್ತೆ, ಜಯದೇವ ವೃತ್ತ, ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತದಲ್ಲಿ ಮೂಲಕ ಮತ್ತೆ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಸಭೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಮೂಲಕ ಅಮಿತ್ ಶಾ ನೀಡಿದ್ದಾರೆನ್ನಲಾದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಗೃಹ ಮಂತ್ರಿ ಅಮಿತ್ ಶಾ, ಈಗ ಅಂಬೇಡ್ಕರ್ ಎನ್ನುವುದು ಫ್ಯಾಷನ್ ಆಗಿದೆ ಎಂದು ಕೇವಲವಾಗಿ ಮಾತನಾಡಿರುವುದು ಇಡೀ ದೇಶದ ಜನತೆಗೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದೆ. ಆ ಮಾತುಗಳು ಅಮಿತ್ ಶಾರವರ ಅಂತರಾಳದಲ್ಲಿ ಅಂಬೇಡ್ಕರ್ ಅವರ ಮೇಲಿರುವ ದ್ವೇಷ ಭಾವನೆ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಲವೇ ದಿನಗಳ ಹಿಂದೆ ಸಂಸತ್ತಿನಿಂದ ಕೂಗಳತೆ ದೂರದಲ್ಲಿ ಕೆಲ ಸಂಘಟನೆಯವರು ಸಂವಿಧಾನದ ಪ್ರತಿಯನ್ನು ಹರಿದು, ಸುಟ್ಟು ಹಾಕಿ ಬಾಬಾ ಸಾಹೇಬ್ ಅಂಬೇಡ್ಕರವರ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ಸಂದರ್ಭದಲ್ಲಿ ಕೂಡ ಪ್ರಧಾನ ಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಶಾ ಚಕಾರವನ್ನೇ ಎತ್ತಲಿಲ್ಲ. ಈವರೆಗೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿರದೇ ಇರುವುದು ಖಂಡನೀಯ ಎಂದು ದೂರಿದರು.

ದೇಶ ಮಾತ್ರವಲ್ಲ ಇಡೀ ವಿಶ್ವಕ್ಕೆ ಅತ್ಯುತ್ತಮ ಸಂವಿಧಾನ ನೀಡಿರುವ ಅಂಬೇಡ್ಕರ್ ಅವರ ಘನತೆ, ಗೌರವವನ್ನು ಕಾಪಾಡಬೇಕಾಗಿದ್ದ ಗೃಹ ಮಂತ್ರಿಗಳೇ ಸದನದಲ್ಲೇ ಅವಮಾನವಾಗುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಕೂಡಲೇ ದೇಶದ ಜನರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ನಿವೃತ್ತ ಎಸ್ಪಿಗಳಾದ ರವಿನಾರಾಯಣ, ಎನ್.ಎಮ್. ಎನ್.ರುದ್ರಮುನಿ, ಗುಮ್ಮನೂರು ಮಲ್ಲಿಕಾರ್ಜುನಪ್ಪ, ಬಿ.ಎಂ.ಹನುಮಂತಪ್ಪ, ವಕೀಲ ಅನೀಸ್ ಪಾಷಾ, ಎಸ್.ಶೇಖರಪ್ಪ, ಅಬ್ದುಲ್ ಘನಿತಾಹೀರ್, ನಾಗಭೂಷಣ್, ಬಿ.ವೀರಣ್ಣ, ಹೆಗ್ಗೆರೆ ರಂಗಪ್ಪ, ಜಬೀನಾಖಾನಂ, ಕರಿಬಸಪ್ಪ, ಶಬ್ಬೀರ್ ಸಾಬ್, ಯಲ್ಲಮ್ಮ ಹಾವೇರಿ, ಎನ್.ಎಂ. ಆಂಜನೇಯ ಗುರೂಜಿ, ಜಬೀನಾ ಖಾನಂ ಇತರರು ಇದ್ದರು.