ನಗರದಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಗಣೇಶ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಅಭಿಷೇಕ, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಗಣೇಶ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಅಭಿಷೇಕ, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಹಿಂಡಲಗಾ ಮಿಲಿಟರಿ ಗಣಪತಿ ಮಂದಿರ, ಚನ್ನಮ್ಮ ವೃತ್ತ ಗಣೇಶ ಮಂದಿರ ಸೇರಿದಂತೆ ನಗರದ ಪ್ರಮುಖ ದೇವಾಲಯಗಳಲ್ಲಿ ಬೆಳಗ್ಗೆ ಭಕ್ತರ ಸಂಚಾರ ಹೆಚ್ಚಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಗಣಪತಿ ದರ್ಶನ ಪಡೆದು, ವ್ರತ ಆಚರಿಸಿ ಪ್ರಾರ್ಥನೆ ಸಲ್ಲಿಸಿದರು.
ಅಂಗಾರಕ ಸಂಕಷ್ಟಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಗಣಪತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹೂವು, ಹಣ್ಣು ಮತ್ತು ನೈವೇದ್ಯಗಳಿಂದ ಶೃಂಗಾರಗೊಳಿಸಲಾಯಿತು. ಪೂಜಾ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಕೆಲವು ದೇವಾಲಯಗಳಲ್ಲಿ ದಿನಪೂರ್ತಿ ಭಜನೆ, ಕೀರ್ತನೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳು ಕೂಡ ಜರುಗಿದವು.ಸಂಜೆ ವೇಳೆಗೆ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿ, ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಆಗಮಿಸಿ ದೇವರ ಕೃಪೆ ಕೋರಿದರು. ವಿಶೇಷವಾಗಿ ಸಂಕಷ್ಟಿ ವ್ರತ ಆಚರಿಸುವವರು ಚಂದ್ರೋದಯದ ಬಳಿಕ ಉಪವಾಸ ಮುರಿದು, ಗಣಪತಿಗೆ ನೈವೇದ್ಯ ಸಮರ್ಪಿಸಿದರು. ನಗರಾದ್ಯಂತ ಭಕ್ತಿಮಯ ವಾತಾವರಣ ನಿರ್ಮಾಣವಾಗಿದ್ದು, ಅಂಗಾರಿಕಾ ಸಂಕಷ್ಟಿ ಹಬ್ಬವು ಶಾಂತಿ ಮತ್ತು ಭಕ್ತಿ ಭಾವದಲ್ಲಿ ನೆರವೇರಿತು.