ಕನ್ನಡಪ್ರಭ ವಾರ್ತೆ ತುಮಕೂರು

ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಹೊರಡಿಸಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳ ನಿಯಮಾವಳಿಗಳ ಅಧಿಸೂಚನೆಯನ್ನು ತೀವ್ರವಾಗಿ ಖಂಡಿಸಿ ಸಿಐಟಿಯು ತುಮಕೂರು ಜಿಲ್ಲಾ ಸಮಿತಿಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು. ಈ ವೇಳೆ ಕಾರ್ಮಿಕರ ಬೆವರಿನ ಮೇಲೆ ಕಣ್ಣಿಟ್ಟಿರುವ ಈ ಸಂಹಿತೆಗಳು ಮತ್ತೆ ಗುಲಾಮಗಿರಿಯನ್ನು ತರಲು ಹೊರಟಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿದ ಬಳಿಕ, ಪ್ರತಿಭಟನಾಕಾರರು ನಾಲ್ಕೂ ಸಂಹಿತೆಗಳ ನಿಯಮಾವಳಿಗಳ ಅಧಿಸೂಚನೆಯನ್ನು ಬೆಂಕಿಗೆ ಆಹುತಿ ಮಾಡಿ ತಮ್ಮ ಪ್ರತಿರೋಧವನ್ನು ಸೂಚಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರನ್ನು ಮತ್ತೆ ಗುಲಾಮರಾಗಿಸಲು ಈ ಸಂಹಿತೆಗಳನ್ನು ಜಾರಿಗೊಳಿಸುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯದ ಮುಖ್ಯಮಂತ್ರಿಗಳ ದುಡಿವ ಜನರ ಕಾಳಜಿ ಮೇ ದಿನದ ಭಾಷಣಗಳಿಗೆ ಸೀಮಿತವಾಗದೆ, ಸಂವಿಧಾನಾತ್ಮಕ ಅಧಿಕಾರ ಬಳಸಿ ಕಾರ್ಮಿಕ ಪರ ತಿದ್ದುಪಡಿಗಳೊಂದಿಗೆ ಸಂಹಿತೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಖಜಾಂಚಿ ಎ. ಲೋಕೇಶ್, ಮುನಿಸಿಪಲ್ ಕಾರ್ಮಿಕ ಚಳುವಳಿ ಮುಖಂಡ ಮಾರುತಿ, ಸಿಐಟಿಯು ಎನ್.ಕೆ. ಸುಬ್ರಮಣ್ಯ ಮಾತನಾಡಿದರು. ಸಮಿತಿಯ ಮಿನಾಕ್ಷಿ, ಗಣಪತಿ, ರಂಗಧಾಮಯ್ಯ, ಪೌರ ಕಾರ್ಮಿಕರ ಸಂಘದ ಮಂಜುನಾಥ್ ಖಲಿಲ್, ಟಿ.ಆರ್. ಕಲ್ಪನಾ, ಹುಚ್ಚೆಗೌಡ, ಮಧುಸೂಧನ್, ಆನಂದ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.