ಹೊಸಕೋಟೆ: ಕಾಳಪ್ಪನಹಳ್ಳಿ ಸಮಾಜ ಸೇವಕ ಷಡಕ್ಷರಿ ಶಾಸ್ತ್ರಿ ತಂದೆ ರಾಚೂಟಪ್ಪ ಸ್ಮರಣಾರ್ಥ ಸರ್ಕಾರಿ ಶಾಲೆಗೆ ನೂತನ ಕೊಠಡಿ ನಿರ್ಮಾಣ ಮಾಡಿಕೊಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ನಂದಗುಡಿ ಹೋಬಳಿಯ ಕಾಳಪ್ಪನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಈ ಭಾಗದ ಮಕ್ಕಳಿಗೆ ಅನುಕೂಲವಾಗಲೆಂದು ದಾನಿಗಳಾದ ಷಡಕ್ಷರಿ ಶಾಸ್ತ್ರಿಗಳು ಹಾಗೂ ಅವರ ಕುಟುಂಬ ಸರ್ಕಾರಿ ಶಾಲೆಗೆ ಕೊಠಡಿ ನಿರ್ಮಾಣ ಮಾಡಿಕೊಡುತ್ತಿರುವುದು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ. ಈಗಾಗಲೇ ತಾಲೂಕಿನಲ್ಲಿ ಸ್ಥಳೀಯ ಖಾಸಗಿ ಕಂಪನಿಗಳು ಸಿಎಸ್ಆರ್ ಅನುದಾನದಡಿ ಶೈಕ್ಷಣಿಕ, ಆರೋಗ್ಯ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಜೊತೆಗೆ ಪಂಚಾಯತಿ ಸೇರಿದಂತೆ ದಾನಿಗಳ ಸಹಾಯದಿಂದ ಖಾಸಗಿ ಶಾಲೆಯಷ್ಟೇ ಗುಣಮಟ್ಟದಾಗಿ ಸರ್ಕಾರಿ ಶಾಲೆಗಳನ್ನು ಸಹ ಅಭಿವೃದ್ಧಿ ಮಾಡಿ ಅಗತ್ಯ ಆಟೋಟದ ಸಲಕರಣೆಗಳನ್ನು ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಎಲ್ಲರೂ ಒತ್ತು ನೀಡಬೇಕು. ಶಿಕ್ಷಣ ಪ್ರತಿ ಮಗುವಿನ ಹಕ್ಕು. ಈ ಗ್ರಾಮದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕೆಲಸಗಳನ್ನು ನಡೆಸಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 30 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೂ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.ಮಾತೃಕ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕರು ಹಾಗೂ ಶಾಲಾ ಕಟ್ಟಡದ ದಾನಿ ಕೆ.ಆರ್.ಷಡಕ್ಷರಿಶಾಸ್ತ್ರಿ ಮಾತನಾಡಿ, ನಮ್ಮ ತಂದೆ ರಾಚೂಟಪ್ಪ ಸ್ವಾಮಿ ಸ್ಮರಣಾರ್ಥ ಗ್ರಾಮದಲ್ಲಿ 30 ಲಕ್ಷ ವೆಚ್ಚದಲ್ಲಿ ಸರ್ಕಾರಿ ಶಾಲೆಯಲ್ಲಿ ಕೊಠಡಿ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ ತಾಲೂಕಾದ್ಯಂತ ಶಾಸಕ ಶರತ್ ಬಚ್ಚೇಗೌಡರು ಸರ್ಕಾರಿ ಶಾಲೆಗಳ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇದೇ ನಿಟ್ಟಿನಲ್ಲಿ ನಾವು ನಮ್ಮ ಗ್ರಾಮಕ್ಕೆ ಶಾಲಾ ಕೊಠಡಿ ಅವಶ್ಯಕತೆ ಇರುವುದನ್ನು ಮನಗಂಡು ಶಾಲಾ ಕೊಠಡಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಬಿ.ವಿ.ರಾಜಶೇಖರಗೌಡ, ಟಿಎಸ್ಆರ್ ರಾಜಶೇಖರ್, ಭೂ ಮಂಜೂರಾತಿ ಸಮಿತಿ ಸದಸ್ಯ ನಾರಾಯಣಸ್ವಾಮಿ, ಕೆ.ಆರ್.ಶಿವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ದೇವರಾಜ್, ಗ್ರಾಪಂ ಮಾಜಿ ಅಧ್ಯಕ್ಷರಾದ ಪ್ರಿಯಾಂಕ ರಮೇಶ್, ಮಂದೀಪ್ಗೌಡ, ಗುರುಬಸಪ್ಪ, ಮಂಜುನಾಥ್, ಈಶ್ವರಪ್ಪ, ನರಸಿಂಹಯ್ಯ, ನಂಜುಂಡಪ್ಪ, ಲಕ್ಷ್ಮಣ್, ಪಿಡಿಒ ಮುನಿಗಂಗಯ್ಯ ಇತರರು ಉಪಸ್ಥಿತರಿದ್ದರು.ಫೋಟೋ : 12 ಹೆಚ್ಎಸ್ಕೆ 1
ಹೊಸಕೋಟೆ ತಾಲೂಕಿನ ಕಾಳಪ್ಪನಹಳ್ಳಿ ಸರ್ಕಾರಿ ಶಾಲೆಯಲ್ಲ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ, ದಾನಿ ಷಡಕ್ಷರಿ ಶಾಸ್ತ್ರಿ ಗುದ್ದಲಿಪೂಜೆ ನೆರವೇರಿಸಿದರು.