ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ರೈಲು ನಿಲ್ದಾಣಕ್ಕೆ ಕೇಂದ್ರ ಭಾರೀ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗುರುವಾರ ಆಗಮಿಸಿ ಪರಿಶೀಲನೆ ನಡೆಸಿ ಮೈಸೂರಿಗೆ ತೆರಳಿದರು.

ಗುರುವಾರ ಮಧ್ಯಾಹ್ನ 2.15 ರ ವೇಳೆಗೆ ರೈಲಿನ ಮೂಲಕ ಆಗಮಿಸಿದ ಸಚಿವರನ್ನು ಪ್ರತ್ಯೇಕವಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಹೂ ಗುಚ್ಚ ನೀಡಿ ಸ್ವಾಗತಿಸಲು ನಿಂತಿದ್ದರು.

ಆದರೆ, ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ, ಅಲ್ಲೇ ನಿಂತಿದ್ದು ಮಾಜಿ ಶಾಸಕರಾದ ನಾಗಮಂಗಲ ಸುರೇಶ್ ಗೌಡ, ಶ್ರೀರಂಗಪಟ್ಟಣ ರವೀಂದ್ರ ಶ್ರೀಕಂಠಯ್ಯ ಹಾಗೂ ಹಾಲಿ ಕೆಆರ್‌ಪೇಟೆ ಶಾಸಕ ಎಚ್.ಟಿ ಮಂಜು ಅವರನ್ನು ಗಮನಿಸದೇ ರೈಲಿನ ಮೂಲಕ ಮೈಸೂರು ಕಡೆಗೆ ತೆರಳಲು ಮುಂದಾದ ಸಚಿವರನ್ನು ಕಾರ್ಯಕರ್ತರು ಕೂಗಿ ಕರೆದರು. ಆ ವೇಳೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರೈಲು ನಿಲ್ಲಿಸಲು ಸೂಚಿಸಿದರು.

ಈ ವೇಳೆ ಜೆಡಿಎಸ್ ಕಾರ್ಯಕರ್ತರು ರೈಲು ಬಳಿ ತೆರಳಿ ಬೆಳಗ್ಗಿನಿಂದ ಹುರಿ ಬಿಸಿಲನ್ನು ಲೆಕ್ಕಿಸದೆ ಮನವಿ ಸಲ್ಲಿಸಲು ಕಾಯ್ದು ನಿಂತಿದ್ದ ನಮ್ಮನ್ನು ಸೌಜನ್ಯಕ್ಕೂ ಮಾತನಾಡಿಸದೇ ತೆರಳುತ್ತಿದ್ದೀರಿ. ಒಂದೆರಡು ನಿಮಿಷವೂ ರೈಲ್ವೆ ನಿಲ್ದಾಣವನ್ನು ವೀಕ್ಷಿಸದೇ ತೆರಳುತ್ತಿದ್ದೀರಿ ಎಂದು ಪ್ರಶ್ನಿಸಿದರು.


ನಾವು 30-40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡುಯುತ್ತಿದ್ದೇವೆ. ನಮ್ಮನ್ನು ಕುರಿತು ಎರಡು ಮಾತನಾಡದೇ ಕನಿಷ್ಠ ನಮ್ಮ ಕಡೆಗೆ ತಿರಗಿಯೂ ನೋಡದೆ ತೆರಳುತ್ತಿದ್ದೀರಾ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಈ ವೇಳೆ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಬದಲಿಗೆ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಸೀಲನೆಗೆ ಆಗಮಿಸಿದ್ದೇನೆ ಎಂದು ಹೇಳಿ ಮೈಸೂರು ಕಡೆಗೆ ತೆರಳಿದರು.