ಸಾರಾಂಶ
ನೇಪಾಳದ ಕಠ್ಮಂಡುವಿನ ಬುದ್ಧ ನಿಲ್ಕಾಂತ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಏಷ್ಯನ್ ಮಿಕ್ಸ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಜಿಲ್ಲೆಯ ನಾಲ್ವರು ಪಾಲ್ಗೊಂಡು ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ನೇಪಾಳದ ಕಠ್ಮಂಡುವಿನ ಬುದ್ಧ ನಿಲ್ಕಾಂತ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಏಷ್ಯನ್ ಮಿಕ್ಸ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಜಿಲ್ಲೆಯ ನಾಲ್ವರು ಪಾಲ್ಗೊಂಡು ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಅಧ್ಯಕ್ಷ ಹಾಗೂ ಕೋಚ್ ಸುದರ್ಶನ್ ನೇತೃತ್ವದಲ್ಲಿ ಕರ್ನಾಟಕ ವಿದ್ಯಾರ್ಥಿಗಳ ತಂಡ ನೇಪಾಳದಲ್ಲಿ ನಡೆದ ಏಷ್ಯನ್ ಮಿಕ್ಸ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.ಪಂದ್ಯಾವಳಿಯಲ್ಲಿ ೯ ರಾಷ್ಟ್ರಗಳ ತಂಡಗಳು ಭಾಗವಹಿಸಿದ್ದವು. ಕ್ರೀಡಾಪಟುಗಳಾದ ಎಂ.ಕೆ. ಮೋಹನ್ ಹಾಗೂ ಸುನಿತಾ ದಂಪತಿಯ ಪುತ್ರ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿ ಮನ್ವಿತ್ ಮೋಹನ್, ಆನಂದ ಟಿ. ಶೆಟ್ಟಿ ಮತ್ತು ನಿಶ್ಚಲ ದಂಪತಿಯ ಪುತ್ರಿ ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿ ಶರಣ್ಯ ಎ. ಶೆಟ್ಟಿ, ಅಶೋಕ ಮತ್ತು ನಿರ್ಮಲ ದಂಪತಿಯ ಪುತ್ರಿ ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿ ವಿವಕ್ತ ಚೋಂದಮ್ಮ ಚಿನ್ನದ ಪದಕ ಜಯಿಸಿದ್ದಾರೆ.ಆಶಾ ಮತ್ತು ಚಂಗಪ್ಪ ದಂಪತಿಯ ಪುತ್ರ ಕಾಜೂರು ಸರ್ಕಾರಿ ಶಾಲೆಯ ವಿದ್ಯಾರ್ಥಿ ಕೌಶಿಕ್ ಕುಮಾರ್ ಬೆಳ್ಳಿಯ ಪದಕ ಪಡೆದುಕೊಂಡರು.ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಏಷ್ಯನ್ ಮಿಕ್ಸ್ ಬಾಕ್ಸಿಂಗ್ನ ಅಧ್ಯಕ್ಷ ನನೌಂತ ಕುಮಾರ್, ನೇಪಾಳದ ಮಿಕ್ಸ್ ಬಾಕ್ಸಿಂಗ್ ಅಧ್ಯಕ್ಷ ಸುಖ್ಯನ್ ಲಾಮ ಮತ್ತು ತರಬೇತುದಾರ ಎನ್.ಸಿ. ಸುದರ್ಶನ್ ಭಾಗವಹಿಸಿದ್ದರು.