ಕನ್ನಡಪ್ರಭ ವಾರ್ತೆ ಮಧುಗಿರಿ
ಆಯುರ್ವೇದ ಚಿಕಿತ್ಸಾ ಪದ್ಧತಿ ಇಂದು ವಿಶ್ವಕ್ಕೆ ಮಾದರಿಯಾಗಿದ್ದು ರಾಸಾಯನಿಕ ಮುಕ್ತ ಔಷಧದೆಡೆಗೆ ಜನರ ವಲಸೆ ಮತ್ತೆ ಆರಂಭವಾಗಿರುವುದು ಸಂತಸ ಮೂಡಿಸಿದೆ ಎಂದು ಪಾವಗಡದ ಶ್ರೀ ಜಪಾನಂದಸ್ವಾಮೀಜಿ ತಿಳಿಸಿದರು.ಭಾನುವಾರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ರಾಘವೇಂದ್ರ ನರ್ಸಿಂಗ್ ಹೋಂನ ನೂತನ ಆಯುರ್ವೇದ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು. ಜನರಿಗೆ ಕೈಗೆಟಕುವ ಗಿಡಮೂಲಿಕೆಗಳಿಂದ ತಯಾರಾದ ಔಷಧೋಪಚಾರಗಳನ್ನು ಬಳಸಿ ಜನರ ಆರೋಗ್ಯ ಕಾಪಾಡಲು ಇದು ಸಹಕಾರಿ. ಪ್ರಸ್ತುತ ಇಡೀ ಜಗತ್ತು ಭಾರತದ ಇಂತಹ ವೈದ್ಯಕೀಯ ಪದ್ಧತಿಯತ್ತ ವಿಶೇಷ ಒಲವು ತೋರುತ್ತಿದೆ. ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯವಾದ ಸುಸಜ್ಜಿತ ವ್ಯವಸ್ಥೆ ಮತ್ತು ಉಪಚಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನದ ಎಸ್ಡಿಎಂ ಆಯುರ್ವೇದ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ.ಪ್ರಸನ್ನ ನರಸಿಂಹರಾವ್ ಮಾತನಾಡಿ, ಕಾಯಿಲೆಗಳನ್ನು ನಿವಾರಿಸುವ ಆಸ್ಪತ್ರೆಗಳು ಜನರ ದೇಗುಲಗಳಾಗಬೇಕು. ಪರಿಶ್ರಮದಿಂದ ಈ ಆಸ್ಪತ್ರೆ ಪ್ರಾರಂಭಿಸಿದ್ದು, ಜನರು ಇದರ ಸದುಪಯೋಗ ಪಡಿಸಿಕೊಂಡು ಆರೋಗ್ಯ ಕಾಪಾಡಿ ಕೊಳ್ಳಬೇಕೆಂದು ಮನವಿ ಮಾಡಿದರು.ಈ ವೇಳೆ ಡಾ.ಜಿ.ಕೆ. ಜಯರಾಂ, ಹುಲಿಕಲ್ ನಟರಾಜು, ಶಾಸಕ ಕೆ.ಎನ್.ರಾಜಣ್ಣ ಡಾ.ಶೈಲಾಜ, ಡಾ.ಉಲ್ಲಾಸ್, ಡಾ.ವೆಂಕಟರಮಣಯ್ಯ, ರಂಗನಾಥ್ , ವಿಮಲಾ ಜಯರಾಮ್, ಡಾ.ರಾಘವೇಂದ್ರ ಬಾಬು ಜೆ , ಡಾ.ರಂಜಿತ ಜೆ, ಡಾ.ಶಾಲಿನಿ, ಶ್ರೀನಾಥ್, ಮಾರುತಿ ಇತರರಿದ್ದರು.