ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ 9 ಕಂದಾಯ ಗ್ರಾಮಗಳ ಪೈಕಿ 3 ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶಗೊಂಡಿರುವ ರೈತರು ಬೈರಮಂಗಲ ಚಲೋ ಮೂಲಕ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

ರಾಮನಗರದ ಎಪಿಎಂಸಿ ಮಾರುಕಟ್ಟೆಯ ಸಭಾಂಗಣದಲ್ಲಿ ರಾಜ್ಯ ರೈತಸಂಘದ ನೇತೃತ್ವದಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗದ ರೈತ ಮುಖಂಡರು ಸಭೆ ನಡೆಸಿ ಜೂನ್ 22ರಂದು ಬಿಡದಿ ಬಿಜಿಎಸ್ ವೃತ್ತದಿಂದ ಬೈರಮಂಗಲ ವೃತ್ತದವರೆಗೆ ಸಹಸ್ರಾರು ರೈತರೊಂದಿಗೆ ಪಾದಯಾತ್ರೆ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.

ರೈತರು ಯಾವುದೇ ಕಾರಣಕ್ಕೂ ಒಂದಿಂಚು ಭೂಮಿಯನ್ನು ಯೋಜನೆಗೆ ಕೊಡಬಾರದು. ಯಾವುದೇ ಅಧಿಕಾರಿಗಳು ಗ್ರಾಮ ಪ್ರವೇಶ ಮಾಡದಂತೆ ತಡೆಯುವುದು. ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲು ಸಭೆಯಲ್ಲಿ ರೈತ ನಾಯಕರು ನಿರ್ಧರಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಮಲ್ಲಯ್ಯ, ನಮ್ಮ ಜಿಲ್ಲೆಯ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದು ಸಂಸತ, ಆದರೆ, ಬಿಡದಿ ಟೌನ್ ಶಿಪ್ ಯೋಜನೆಯನ್ನು ರಾಜಕೀಯ ಪ್ರತಿಷ್ಠೆಯಾಗಿ ತೆಗೆದುಕೊಂಡು ರೈತರ ಬದುಕು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.

ಬೈರಮಂಗಲ- ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತ ವ್ಯಾಪ್ತಿಯ ರೈತರ ಭೂಮಿ ಸ್ವಾಧೀನ ಸಂಬಂಧ ಮೂರು ಕಂದಾಯ ಗ್ರಾಮಗಳ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸಮಂಜಸವಲ್ಲ‌, ಇದನ್ನು ಖಂಡಿಸಿ ನಡೆಸುತ್ತಿರುವ ಹೋರಾಟಕ್ಕೆ ರೈತ, ದಲಿತ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರೆಲ್ಲರೂ ಬೆಂಬಲ ನೀಡಬೇಕು ಎಂದು ಹೇಳಿದರು.


5 ಸಾವಿರ ರೈತರು ಭಾಗಿ :

ಜಯಕರ್ನಾಟಕ ಜನಪರ ವೇದಿಕೆ ರಾಜ್ಯಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಬಿಡದಿಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯಲಿರುವ ಬೈರಮಂಗಲ ಚಲೋ ಪಾದಯಾತ್ರೆಯಲ್ಲಿ 7 ಜಿಲ್ಲೆಗಳಿಂದ 5 ಸಾವಿರಕ್ಕೂ ಅಧಿಕ ಹೋರಾಟಗಾರರು ಹಾಗೂ ಪ್ರಮುಖ ರೈತ ನಾಯಕರು ಭಾಗವಹಿಸಲಿದ್ದಾರೆ ಎಂದರು.

ತವರು ಜಿಲ್ಲೆಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ಹೋರಾಟ ಮಾಡುವ ಪರಿಸ್ಥಿತಿ ರೈತರಿಗೆ ಎದುರಾಗಿರುವುದು ಶೋಚನೀಯ. ಈಗಾಗಲೇ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ರೈತರು ಕೊಟ್ಟ ಆಕ್ಷೇಪಣೆ ಅರ್ಜಿಗಳು ಏನಾದವು. ಈ ಯೋಜನೆಗೆ ಶೇಕಡ 80ರಷ್ಟು ರೈತರ ವಿರೋಧವಿದೆ. ಹೀಗಿದ್ದರೂ ಮೂರು ಗ್ರಾಮಗಳ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದನ್ನು ಖಂಡಿಸಿದರು.

ರೈತ ಮುಖಂಡ ನಾಗರಾಜು ಮಂಡಲಹಳ್ಳಿ ಮಾತನಾಡಿ, ರಾಜ್ಯಸರ್ಕಾರ ರೈತರ ಕೂಗಿಗೆ ಬೆಲೆ ಕೊಡದೆ ವಾಮಮಾರ್ಗದಿಂದ ಭೂಮಿಯಲು ಕಬಳಿಸಲು ಮುಂದಾಗಿದೆ. ಇದನ್ನು ತಡೆಗಟ್ಟದಿದ್ದಲ್ಲಿ ರೈತ ಮತ್ತು ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗುತ್ತವೆ. ಕೃಷಿಯನ್ನೇ ನಂಬಿರುವ ರೈತರು ಜೀವನಕ್ಕಾಗಿ ಏನು ಮಾಡಬೇಕು. ಜಾನುವಾರುಗಳಿಗೆ ಎಲ್ಲಿಂದ ಮೇವು ತರಬೇಕು ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಚೀಲೂರು ಮುನಿರಾಜು, ಕೃಷ್ಣಯ್ಯ, ಚಂದ್ರಶೇಖರ್‌, ರಮ್ಯಾ ರಾಮಣ್ಣ, ಲಕ್ಷ್ಮಿ ನಾರಾಯಣರೆಡ್ಡಿ, ಕುಮಾರ್, ನಿಂಗಪ್ಪಾಜಿ, ರತ್ನಮ್ಮ, ರವಿ, ಬೋರಾಪುರ ಶಂಕರಪ್ಪ, ನೇತ್ರ, ವಿಜಿ ಕುಮಾರ್, ಕುಮಾರ್, ಪುಟ್ಟಸ್ವಾಮಿ ಇತರರಿದ್ದರು.

13ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಎಪಿಎಂಸಿ ಮಾರುಕಟ್ಟೆಯ ಸಭಾಂಗಣದಲ್ಲಿ ರೈತ ಮುಖಂಡರು ಸಭೆ ನಡೆಸಿದರು.