ಹುಬ್ಬಳ್ಳಿ: ಕಾನೂನುಬಾಹಿರವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಿದ್ದು, ಅವುಗಳನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಕಾರ್ಯಕರ್ತರು ಶನಿವಾರ ರಾತ್ರಿ ಕಸಬಾಪೇಟೆ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಮಹಾನಗರ ಪಾಲಿಕೆ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ತಕ್ಷಣ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸ್‌ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹಾಗೂ ಪೊಲೀಸರು ಜಾನುವಾರು ಕೂಡಿಟ್ಟಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಳೇಹುಬ್ಬಳ್ಳಿಯ ಇಸ್ಲಾಂಪುರದಲ್ಲಿರುವ ಅಕ್ರಮ ಕಸಾಯಿಖಾನೆಯಲ್ಲಿ 500 ಹೆಚ್ಚು ಆಕಳು, ಕರುಗಳನ್ನು ಕೂಡಿ ಹಾಕಿರುವ ಕುರಿತು ಶನಿವಾರ ಮಧ್ಯಾಹ್ನ ಮಾಹಿತಿ ಬಂದಿತ್ತು. ಪೊಲೀಸರಿಗೆ ವಿಷಯ ತಿಳಿಸಿ ಸ್ಥಳಕ್ಕೆ ತೆರಳಿದಾಗ ಸಮುದಾಯದ ನೂರಾರು ಮಂದಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಪೊಲೀಸರೂ ಲಾಠಿ ಬೀಸಿ ಬೆದರಿಸಿದ್ದಾರೆ ಎಂದು ಹಿಂದೂ ಸಂಘಟನೆ ಮುಖಂಡ ಜಯತೀರ್ಥ ಕಟ್ಟಿ ಆರೋಪಿಸಿದ್ದಾರೆ.

ಪಾಲಿಕೆ ಜಾಗದಲ್ಲಿ ಅಕ್ರಮವಾಗಿ ಹೇಗೆ ಗೋವುಗಳನ್ನು ಕೂಡಿಹಾಕಿದ್ದಾರೆ ಎಂದು ತಿಳಿಯುತ್ತಿಲ್ಲ. ಪಾಲಿಕೆ ಆಯುಕ್ತರಿಗೆ ಈ ಹಿಂದೆಯೇ ಕಸಾಯಿಖಾನೆಗಳ ಸಮೀಕ್ಷೆ ನಡೆಸಲು ವಿನಂತಿಸಲಾಗಿತ್ತು. ಪೊಲೀಸರ ವರ್ತನೆಯೂ ಭಯ ತರಿಸುತ್ತಿದೆ. ಸುಮೊಟೊ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳುತ್ತ ವಿಳಂಬ ಮಾಡುತ್ತಿದ್ದಾರೆ. ಪ್ರಕರಣ ದಾಖಲಾಗುವ ವರೆಗೆ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಪೊಲೀಸರು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು.

ಈ ಸಂದರ್ಭದಲ್ಲಿ ಹನುಮಂತಸಾ ನಿರಂಜನ, ರಘು ಯಲ್ಲಕನವರ, ವಿಜಯ ಕ್ಷೀರಸಾಗರ, ಸುನೀಲ ಕಟ್ಟಿಮನಿ, ಮಲ್ಲಿಕಾರ್ಜುನ ಸತ್ತಿಗೇರಿ, ಚೇತನ ರಾವ್, ದೀಪಕ ಬೊಮ್ಮಸಾಗರ ಸೇರಿದಂತೆ ಹಲವರಿದ್ದರು.