ಹೊಸಪೇಟೆ: ಬಾಳೆ ಬೆಳೆ ಕಟಾವ್ ನಂತರ ಬಾಳೆ ದಿಂಡು ಕೃಷಿ ತ್ಯಾಜ್ಯವಾಗುತ್ತದೆ. ಇದನ್ನೇ ಜೀವನಕ್ಕೆ ಪ್ರಮುಖ ಆಧಾರ ಸ್ತಂಭವಾಗಿ ಪರಿವರ್ತನೆ ಮಾಡಿಕೊಳ್ಳಬಹುದು ಎಂದು ಆನಂದ್ ಧಾರವಾರ್ ಹೇಳಿದರು.
ಇಲ್ಲಿನ ಅನಂತಶಯನಗುಡಿಯ ಯು.ಎಸ್. ಪ್ರಸನ್ನ ಅವರ ಜಮೀನಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 18ನೇ ಹಸಿರಿನೊಂದಿಗೆ ಮಾತುಕತೆಯಲ್ಲಿ ಬಾಳೆ ನಾರಿನ ಉಪಯೋಗಗಳ ಕುರಿತು ಅವರು ಮಾತನಾಡಿದರು.ಬಾಳೆ ಬೆಲೆಯಲ್ಲಿ ಏರಿಳಿತ ಸಹಜ. ಇಲ್ಲಿ ಕೃಷಿಕ ನಿರಂತರ ಲಾಭ ನಿರೀಕ್ಷಿಸುವುದು ಕಷ್ಟಸಾಧ್ಯ. ಆದರೆ ತ್ಯಾಜ್ಯ ದಿಂಡಿನಿಂದ ನಿರಂತರವಾಗಿ ಆದಾಯ ಗಳಿಸಬಹುದು. ಬಾಳೆ ನಾರಿಗೆ ಮತ್ತು ಅದರಿಂದ ಮಾಡಬಹುದಾದ ಉತ್ಪನ್ನಗಳಿಗೆ ಬಹು ಬೇಡಿಕೆ ಇದೆ. ಕರಕುಶಲ, ಗೃಹಪಯೋಗಿ ವಸ್ತುಗಳನ್ನು ನಿರ್ಮಿಸುವಲ್ಲಿ ಬಾಳೆ ನಾರು ಬಳಸಲಾಗುತ್ತದೆ. ಇಂತಹ ಉದ್ಯಮಕ್ಕೆ ಬಾಳೆ ರೈತ ಮತ್ತು ಆಸಕ್ತರು ತೆರೆದುಕೊಂಡರೆ ಬದುಕಿನಲ್ಲಿ ಬೆಳಕು ಕಾಣುವುದು ನಿಶ್ಚಿತವೆಂದರು.ಕೀಟಶಾಸ್ತ್ರಜ್ಞ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ಮುಖ್ಯಸ್ಥ ಡಾ.ಬದರಿ ಪ್ರಸಾದ್ ಮಾತನಾಡಿ, ಬಾಳೆ ಬೆಳೆಗೆ ಸಾಕಷ್ಟು ಸವಾಲುಗಳಿವೆ. ಪೀಡೆಗಳಿಂದ ಬಾಳೆ ಬೆಳೆ ಸಂರಕ್ಷಣೆಗೆ ಬೆಳೆಗಾರರು ಸರಳ ತಂತ್ರಗಳನ್ನು ಅನುಸರಿಸುವುದರ ಜೊತೆಗೆ ಅದನ್ನು ಮೌಲ್ಯವರ್ಧನೆ ಮತ್ತು ಮಾರಾಟ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದರು. ಪ್ರಗತಿಪರ ಕೃಷಿಕ ಹುಲಿಕೇರಿಯ ಎಚ್.ವಿ ಸಜ್ಜನ್ ಮಾತನಾಡಿ, ಇಲ್ಲಿ ಬಾಳೆ ಬೆಳೆಗಾರರ ಸಂಘ ಜನ್ಮ ತಾಳಬೇಕು. ಅದರಿಂದ ನಷ್ಟ ತಪ್ಪಿಸಿಕೊಂಡು ರೈತ ಸುಸ್ಥಿರ ಅಗಲಿಕ್ಕೆ ಸಾಧ್ಯವೆಂದರು.
ಸಹಾಯಕ ಕೃಷಿ ನಿರ್ದೇಶಕ ಮನೋಹರಗೌಡ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಸಾಕಷ್ಟು ಸೌಲಭ್ಯಗಳಿವೆ. ಇದನ್ನು ಬಳಸಿಕೊಂಡು ರೈತರು ಕೃಷಿ ಮತ್ತು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಿ ಎಂದು ಕರೆ ನೀಡಿದರು.ಪ್ರಸನ್ನ ಮಾತನಾಡಿದರು. ಸಚಿನ್, ಬಸವರಾಜ ಕನಕಗಿರಿ, ಶಿವರಾಜ್ ಬಿ, ಬುಡ್ಡೆ ಯಲ್ಲಪ್ಪ, ಸ್ವರೂಪ್ ಕೊಟ್ಟೂರು, ಪಂಪಯ್ಯಸ್ವಾಮಿ ಮಳಿಮಠ್, ರಾಜೀವ್ ಕಂಪ್ಲಿ, ಕೃಷ್ಣ ಹೊಸೂರು, ಕೊಟ್ರಗೌಡ ಹಂಪಾಪಟ್ಟಣ, ಬಸವರಾಜ್ ಹೂಗಾರ್, ಬಂಡ್ರಿ ದುರುಗಪ್ಪ, ವಿಶ್ವನಾಥ್ ಬುಕ್ಕಸಾಗರ, ರಾಘವೇಂದ್ರ, ಸಣ್ಣಕ್ಕಿ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.