ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘಕ್ಕೆ ರೂ. 5.05 ಕೋಟಿ ಲಾಭ

| Published : Apr 24 2025, 12:06 AM IST

ಸಾರಾಂಶ

ಬಂಟ್ವಾಳ ಬೈಪಾಸ್‌ನಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ. 1159 ಕೋಟಿ ವ್ಯವಹಾರ ನಡೆಸಿದ್ದು ರೂ. 5.05 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಇಲ್ಲಿನ ಬೈಪಾಸ್‌ನಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ. 1159 ಕೋಟಿ ವ್ಯವಹಾರ ನಡೆಸಿದ್ದು ರೂ. 5.05 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.ಸಂಘದ ಪ್ರಧಾನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ ಆರ್ಥಿಕ ವರ್ಷ 2024-25ರ ಅಂತ್ಯಕ್ಕೆ ಸಂಘದಲ್ಲಿ 9047 ‘ಎ’ ತರಗತಿ, 5556 ‘ಬಿ’ ತರಗತಿ ಸದಸ್ಯರಿದ್ದು ರೂ. 8.09 ಕೋಟಿ ಪಾಲು ಬಂಡವಾಳ ಹೊಂದಿರುತ್ತದೆ. 19.77 ಕೋಟಿ ರೂ. ನಿಧಿಗಳು, 55.35ಕೋಟಿ ರೂ. ವಿನಿಯೋಗಗಳು, 229.47 ಕೋಟಿ ರೂ. ಠೇವಣಾತಿಗಳು ಇದ್ದು 215.21 ಕೋಟಿ ರೂ. ಹೊರ ಬಾಕಿ ಸಾಲಗಳು ಇರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. 259.66ಕೋಟಿ ಆಗಿರುತ್ತದೆ.ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ಎ ತರಗತಿ ಹೊಂದಿರುವ ಸಂಘವು ಸದಸ್ಯರ ಅನುಕೂಲಕ್ಕಾಗಿ ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯವನ್ನು, ಕೆಲವು ಶಾಖೆಗಳಲ್ಲಿ ಸೇಪ್ ಲಾಕರ್ ಸೌಲಭ್ಯವನ್ನು, ಮಣಿಪಾಲ ಆರೋಗ್ಯಕಾರ್ಡ್ ಸೌಲಭ್ಯ, ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು, ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ, ಸದಸ್ಯರ ಗಂಭೀರವಾದ ಕಾಯಿಲೆಗೆ ಆರ್ಥಿಕ ಸಹಾಯ ಧನ ಹೀಗೆ ಹಲವಾರು ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತ ಬಂದಿದೆ. 2023-24 ನೇ ಸಾಲಿನಲ್ಲಿ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ ಸಾಧನಾ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಈಗಾಗಲೇ ಮೂರು ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿದೆ ಎಂದರು.2025-26 ನೇ ಸಾಲಿನಲ್ಲಿ ಸಂಘದ ವ್ಯವಹಾರವನ್ನು ವಿಸ್ತರಿಸುವ ಸಲುವಾಗಿ ಮತ್ತು ಸಮಾಜದ ಕಟ್ಟಕಡೆಯ ಹಿಂದುಳಿದ ವ್ಯಕ್ತಿಯು ಆರ್ಥಿಕವಾಗಿ ಸದೃಡರಾಗ ಬೇಕೆನ್ನುವ ಹಾಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಆಶಯದೊಂದಿಗೆ ಹೊಸ ಶಾಖೆಯನ್ನು ತೆರೆಯುವ ಇರಾದೆಯು ಆಡಳಿತ ಮಂಡಳಿಯದ್ದಾಗಿದೆ. ಅಂತೆಯೆ ಮೆಲ್ಕಾರ್ ಶಾಖೆಗೆ ಸ್ವಂತ ಕಟ್ಟಡವನ್ನು ಖರೀದಿಸುವ ಪ್ರಸ್ತಾವನೆಯು ಆಡಳಿತ ಮಂಡಳಿಯ ಮುಂದಿದೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಜನಾರ್ದನ ಬೊಂಡಾಲ, ನಿರ್ದೇಶಕರಾದ ಅರುಣ್ ಕುಮಾರ್ ಕೆ., ರಮೇಶ್ ಸಾಲ್ಯಾನ್, ಜಗನ್ನಿವಾಸ ಗೌಡ, ರಮೇಶ್ ಸಾಲ್ಯಾನ್ ಸಂಚಯಗಿರಿ, ಭೋಜ ಸಾಲ್ಯಾನ್, ಕಿರಣ್ ಅಟಲೂರು, ಪ್ರೇಮನಾಥ ಬಂಟ್ವಾಳ, ಸತೀಶ್ ಪಲ್ಲಮಜಲು, ಹರೀಶ್ ಜಾರಾಬೆಟ್ಟು, ಮಾಲತಿ ಮಚ್ಚೇಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೋಜ ಮೂಲ್ಯ ಉಪಸ್ಥಿತರಿದ್ದರು.