ಸಾರಾಂಶ
ಬೇಲೂರು: ಪಟ್ಟಣದ ಜೆಪಿ ನಗರದ ಫೈವ್ ಸ್ಟಾರ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಬುಧವಾರ ಸಂಜೆ ೭-೩೦ರ ಸಮಯದಲ್ಲಿ ಅಂಬೇಡ್ಕರ್ ನಗರದ ಯುವಕರ ಗುಂಪೊಂದು ಕುಡಿದು ಬಿಲ್ ಕೇಳಿದ ಕ್ಯಾಶಿಯರ್ ಹಾಗೂ ಬಾರ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಾಯಗೊಂಡ ಕರ್ಣ ಎಂಬುವವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗಾಯಾಳು ಕರ್ಣ, ಎಂದಿನಂತೆ ಸಂಜೆ ಬಾರ್ನಲ್ಲಿ ಲೆಕ್ಕಾಚಾರ ಮಾಡಲು ಬಂದಿದ್ದೆ. ಈ ವೇಳೆ ಒಂದಿಬ್ಬರು ಬಾರ್ನಲ್ಲಿ ಮದ್ಯ ಸೇವನೆ ಮಾಡಿ ನಂತರ ಬಿಲ್ ನೀಡಲು ಸತಾಯಿಸಿ, ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿದ್ದರು. ಮದ್ಯಪಾನ ಮಾಡಿದ ಮೇಲೆ ಹಣ ನೀಡಿ ಸುಮ್ಮನೆ ಗಲಾಟೆ ಮಾಡಬೇಡಿ, ಬೇರೆ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂದು ನಾನು ಅವರಿಗೆ ಹೇಳಿದಾಗ ಏಕಾಏಕಿ ಕೌಂಟರ್ ನಲ್ಲಿ ಇದ್ದ ಬಾಟಲಿಯಿಂದ ನನ್ನ ಮುಖಕ್ಕೆ ಹಲ್ಲೆ ಮಾಡಿ ನಂತರ ದೊಣ್ಣೆಯಿಂದ ಹೊಡೆದರು. ಬಲವಾದ ಪೆಟ್ಟು ಬಿದ್ದ ಕಾರಣ ಮುಖದಲ್ಲಿ ದೊಡ್ಡ ಗಾಯವಾಗಿದ್ದು, ತುಟಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದರು. ಸ್ಥಳಕ್ಕೆ ಸಿಪಿಐ ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಮೂರು ಜನರನ್ನು ಬಂಧಿಸಿದ್ದು ಇತರರಿಗೆ ಪೊಲೀಸರು ಬಲೆ ಬೀಸಿದ್ದಾರೆ.