ಬಸವ ಭಾರತ ನಿರ್ಮಾಣ ಅಗತ್ಯ: ಸಚಿವ ಎಂ.ಬಿ.ಪಾಟೀಲ್

| Published : Jun 01 2025, 01:52 AM IST

ಬಸವ ಭಾರತ ನಿರ್ಮಾಣ ಅಗತ್ಯ: ಸಚಿವ ಎಂ.ಬಿ.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ಸಮುದಾಯದವರಿಗೂ ಅನ್ನ, ಅಕ್ಷರ, ಆರೋಗ್ಯ, ಆಶ್ರಯ ನೀಡುತ್ತಿರುವುದು ನಮ್ಮ ಸಮುದಾಯ. ವೀರಶೈವ-ಲಿಂಗಾಯತ ಪಕ್ಷಾತೀತವಾಗಿ, ಪ್ರಾಂತ್ಯ ಮೀರಿ ಒಗ್ಗೂಡಬೇಕು. ಸಮುದಾಯದಲ್ಲಿರುವ ಉಪ ಪಂಗಡಗಳನ್ನೂ ಒಗ್ಗೂಡಿಸಿಕೊಳ್ಳಬೇಕು. ನಾವು ಅವರಿಂದ ದೂರ ಆಗಿದ್ದೇವೆ ಎಂಬ ಮನೋಭಾವ ಬಿಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾನವೀಯ ರಾಷ್ಟ್ರವಾಗಿ ಭಾರತ ಬದಲಾಗಬೇಕಾದರೆ ಬಸವ ಭಾರತ ಆಗಬೇಕಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ನಗರದ ಮೈಷುಗರ್ ಮೈದಾನದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ಜಿಲ್ಲಾ ಬಸವರ ಸಮಿತಿ, ವೀರಶೈವ ಲಿಂಗಾಯತ ಸೌಹಾರ್ದ ಮತ್ತು ಸಹಕಾರಿ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರರ ೮೯೨ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೀರಶೈವ-ಲಿಂಗಾಯತ ಸಮುದಾಯ ರಾಜ್ಯದಲ್ಲಿ ೧ ಕೋಟಿಗೂ ಅಧಿಕ ಸಂಖ್ಯೆಯಲ್ಲಿದ್ದೇವೆ. ಬಸವಣ್ಣನವರನ್ನು ನಾವು ಕರ್ನಾಟಕ, ಮಹಾರಾಷ್ಟ್ರಕ್ಕಷ್ಟೇ ಮಾತ್ರ ಸೀಮಿತಗೊಳಿಸಿದ್ದೇವೆ. ಬಸವಣ್ಣನವರ ತತ್ವಾದರ್ಶ ಇಡೀ ಭಾರತಕ್ಕೆ ವಿಸ್ತರಿಸಬೇಕು.

ಪರಸ್ಪರ ಎಲ್ಲರನ್ನೂ ಅಪ್ಪಿಕೊಳ್ಳುವ ಸಮುದಾಯ ವೀರಶೈವ ಲಿಂಗಾಯತ ಸಮುದಾಯ ಎಂದು ನುಡಿದರು.

ಎಲ್ಲ ಸಮುದಾಯದವರಿಗೂ ಅನ್ನ, ಅಕ್ಷರ, ಆರೋಗ್ಯ, ಆಶ್ರಯ ನೀಡುತ್ತಿರುವುದು ನಮ್ಮ ಸಮುದಾಯ. ವೀರಶೈವ-ಲಿಂಗಾಯತ ಪಕ್ಷಾತೀತವಾಗಿ, ಪ್ರಾಂತ್ಯ ಮೀರಿ ಒಗ್ಗೂಡಬೇಕು. ಸಮುದಾಯದಲ್ಲಿರುವ ಉಪ ಪಂಗಡಗಳನ್ನೂ ಒಗ್ಗೂಡಿಸಿಕೊಳ್ಳಬೇಕು. ನಾವು ಅವರಿಂದ ದೂರ ಆಗಿದ್ದೇವೆ ಎಂಬ ಮನೋಭಾವ ಬಿಡಬೇಕು ಎಂದರು.

ಎಲ್ಲಾ ಕಾಯಕ ಸಮುದಾಯಗಳಿಗೆ ಅನುಭವ ಮಂಟಪದಲ್ಲಿ ಸ್ಥಾನ ಇತ್ತು. ಕಲ್ಯಾಣ ಕ್ರಾಂತಿ ಆಗಿದ್ದರೆ ಅರ್ಧ ಕರ್ನಾಟಕದಲ್ಲಿ ನಮ್ಮ ಸಮುದಾಯ ಇರುತ್ತಿತ್ತು. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ ಎಲ್ಲವೂ ಒಗ್ಗೂಡಬೇಕಿದೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಸಮುದಾಯದ ವಿಚಾರದಲ್ಲಿ ರಾಜಕಾರಣ ಬಿಟ್ಟು ಒಂದಾಗಬೇಕು. ಇಡೀ ಜಗತ್ತಿಗೆ ಬಸವ ತತ್ವ, ವಚನ ತಲುಪಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ ಹೋರಾಟ ನಡೆಸಬೇಕು. ನಾವೆಲ್ಲರೂ ಕೂಡಿ ಸಮಾಜದ ಸಂಘಟನೆ ಮಾಡಬೇಕಿದೆ. ಇತರರ ಜೊತೆಯೂ ಸೇರಿ ಸೌಹಾರ್ದತೆ ಮುನ್ನಡೆಯುವಂತೆ ತಿಳಿಸಿದರು.

ಹನ್ನೆರಡನೇ ಶತಮಾನದಲ್ಲಿ ಬಹಳ ಕ್ಲಿಷ್ಟಕರ ಸಮಯದಲ್ಲಿ ಶ್ರೇಷ್ಠವಾದ ಸಿದ್ಧಾಂತ ಪ್ರತಿಪಾದಿಸಿದ್ದು ಬಸವಣ್ಣ. ವಿಜಯಪುರದಲ್ಲಿ ಜನಿಸಿ, ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ರಚಿಸಿದವರು. ಆರ್ಥಿಕ ಸಚಿವರಾಗಿಯೂ ಕೆಲಸ ಮಾಡುವುದರೊಂದಿಗೆ ಮೌಢ್ಯ, ಅಸಮಾನತೆ ವಿರುದ್ಧ ಹೋರಾಡಿದರು. ಜಾತಿರಹಿತ ಧರ್ಮ ಸ್ಥಾಪಿಸಿದವರು ಅಣ್ಣ ಬಸವಣ್ಣ ಎಂದು ಬಣ್ಣಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಮಹದೇವ ಬಿದರಿ ಅವರು ಅಧ್ಯಕ್ಷತೆ ವಹಿಸಿದ್ದರು. ಸುತ್ತೂರು ಮಹಾಸಂಸ್ಥಾನ ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ, ಚಂದ್ರವನ ಆಶ್ರಮದ ಶ್ರೀತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್, ಮಾಜಿ ಶಾಸಕ ಕೆ.ಅನ್ನದಾನಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಬಸವೇಶ್ವರಿ ಮಾತಾಜಿ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಮುಕ್ತಾಂಭ ಬಸವರಾಜ್, ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ತಾಳಶಾಸನ, ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್, ಮುಖಂಡರಾದ ಡಾ.ಇಂದ್ರೇಶ್, ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಎಂ.ಎಸ್.ಶಿವಪ್ರಕಾಶ್ ಭಾಗವಹಿಸಿದ್ದರು.ಸಮುದಾಯ ರಾಜಕೀಯ ಷಡ್ಯಂತ್ರಕ್ಕೆ ಬಲಿ: ಬಿ.ವೈ.ವಿಜಯೇಂದ್ರ

ಕನ್ನಡಪ್ರಭ ವಾರ್ತೆ ಮಂಡ್ಯ

ವೀರ ಸಮುದಾಯ ಸಮಾಜವೆಂದರೆ ಬೃಹದಾಕಾರದ ಆಲದ ಮರವಿದ್ದಂತೆ. ಕೇವಲ ಇದು ನಮ್ಮ ಸಮಾಜಕ್ಕಷ್ಟೇ ಅಲ್ಲ ಬೇರೆ ಸಮುದಾಯಗಳಿಗೂ ನೆರಳನ್ನು ಕೊಡುವ ಶಕ್ತಿ ಇದೆ. ನಮ್ಮ ಸಮಾಜವು ಒಳಪಂಗಡಗಳಿಗೆ ಒಳಗಾಗಿ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಷಾದಿಸಿದರು.

ನಗರದ ಮೈಷುಗರ್ ಮೈದಾನದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಿಂದ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಸಮಾಜದ ನಡುವೆ ವೀರಶೈವ ಸಮಾಜ ಪ್ರತ್ಯೇಕ ಧರ್ಮವೆಂದು ಹೇಳಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಇದರ ಹಿಂದೆ ರಾಜಕೀಯ ಶಕ್ತಿಗಳ ಕೈವಾಡವಿದೆ. ರಾಜಕಾರಣದವರು ಇಂತಹ ವೇದಿಕೆ ಸಿಕ್ಕಂತ ಸಂದರ್ಭದಲ್ಲಿ ಸಮಾಜದ ಬಗ್ಗೆ ಮಾತನಾಡುತ್ತಾ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಾರೆ. ಆದರೆ, ನಡೆಗೂ ನುಡಿಗೂ ಬಹಳ ವ್ಯತ್ಯಾಸವಿರುವುದನ್ನು ನೋಡುತ್ತೇವೆ. ಇದರ ಬಗ್ಗೆ ನಮ್ಮ ಪ್ರಬುದ್ಧ ಸಮಾಜದ ಮುಖಂಡರು ಗಂಭೀರ ಚರ್ಚೆ ಮಾಡಬೇಕು ಎಂದರು.