- ದೇಶದೆಲ್ಲೆಡೆ ಶಾಂತಿ ನೆಮ್ಮದಿ ನೆಲಸಲು ಬಸವಾದಿ ಶರಣರ ತತ್ವಗಳು, ಸಂದೇಶಗಳು ಆದರ್ಶ: ದಿನೇಶ ಕೆ. ಶೆಟ್ಟಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಬ್ರಹ್ಮಾಂಡದ ಕತ್ತಲೆಯನ್ನು ಓಡಿಸುವ ಶಕ್ತಿ ಸೂರ್ಯನಿಗಿದೆ. ಅದೇ ರೀತಿ ಈ ಸಮಾಜದಲ್ಲಿನ ಕತ್ತಲು ಎಂಬ ಮೂಢನಂಬಿಕೆ, ಅಜ್ಞಾನ, ಜಾತಿಯತೆ ಎಂಬ ಕತ್ತಲು ಇತ್ತು. ಈ ರೀತಿಯಾದ ಅನೇಕ ಸಮಸ್ಯೆಗಳು ಇದ್ದವು. ಇಂತಹ ಜಗತ್ತಿನ ಸಮಸ್ಯೆ ಎನ್ನುವ ಕತ್ತಲನ್ನು ಹೊಡೆದೋಡಿಸಿ ಇಡೀ ಜಗತ್ತಿಗೆ ಜ್ಞಾನದ ದೀಪವನ್ನು ಹಚ್ಚಿದರು. ಈ ಹಿನ್ನೆಲೆ ಬಸವಣ್ಣ ಅವರಿಗೆ ಬ್ರಿಟಿಷರು ಜಗಜ್ಯೋತಿ ಬಸವೇಶ್ವರ ಎಂದು ಬಿರುದು ನೀಡಿದರು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಪಿ.ಜೆ. ಬಡಾವಣೆಯ ವನಿತಾ ಸಮಾಜದಿಂದ ಅಮೃತಾನಂದಮಯಿ ಶಾಲೆವರೆಗೆ ಭಾನುವಾರ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ ತರುಣ ಸಂಘ, ಯೋಗ ಬಳಗದ ಸಹಯೋಗದಲ್ಲಿ 114ನೇ ವರ್ಷದ ಬಸವ ಜಯಂತ್ಯುತ್ಸವ ಅಂಗವಾಗಿ ನಡೆದ 6ನೇ ದಿನದ ಬಸವ ಪ್ರಭಾತ್ ಪೇರಿಯಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.ಬಸವ ಜಯಂತಿ ಎಂದರೆ ಮನೆಯಲ್ಲಿರುವ ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಸಂಜೆ ಮೆರವಣಿಗೆ ಮಾಡುತ್ತಿದ್ದರು. ಬಸವಣ್ಣ ಎಂದರೆ ಎತ್ತು, ನಂದಿ ವಿಗ್ರಹ ಅಲ್ಲ. ಸಮಾಜದಲ್ಲಿ ಸಂಕಷ್ಟದಲ್ಲಿದ್ದ ಎಲ್ಲರನ್ನೂ ಮೇಲಕ್ಕೆತ್ತಿದ ಮಹಾನ್ ವ್ಯಕ್ತಿ. ಹಿಂದೆ ಮೇಲು ಕೀಳು, ಗರಿಷ್ಠ ಕನಿಷ್ಠ, ಲಿಂಗಬೇಧ, ಅಸ್ಪೃಶ್ಯತೆ, ಜಾತಿಯತೆ ಇತ್ತು. ಈ ರೀತಿಯ ತಾರತಮ್ಯವನ್ನು ಬಸವಣ್ಣನವರು ಯಾರು ಅಂಗದ ಮೇಲೆ ಲಿಂಗವನ್ನು ಧರಿಸುತ್ತಾರೋ, ಧರಿಸಿದ ಮೇಲೆ ಮಾನವರೆಲ್ಲರೂ ಸರಿಸಮಾನರು ಎಂದರು. ಸಮ ಸಮಾಜವನ್ನು ಕಟ್ಟಿದ ದಾರ್ಶನಿಕರೆಂದರೆ ಅದು 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರು ಎಂದು ತಿಳಿಸಿದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಇಂದು ಬಸವಾದಿ ಶರಣರ ತತ್ವಗಳು, ಸಂದೇಶಗಳು ಇರದ ಕಾರಣ ಸಣ್ಣ ಸಣ್ಣ ವಿಷಯಗಳಿಗೆ ದೇಶ ದೇಶಗಳ ಮಧ್ಯೆ ಯುದ್ಧ ಸಂಭವಿಸುತ್ತಿವೆ. ಇದರಿಂದ ಇಂಧನ, ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೆ ಏರಿ ಜನರಿಗೆ ಬಹಳ ತೊಂದರೆ ಆಗುತ್ತಿದೆ. ಅಂತಹ ಪ್ರದೇಶಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ನಡೆದರೆ ಯಾವುದೇ ತೊಂದರೆ, ಅನಾಹುತಗಳು, ಯುದ್ಧಗಳು ಸಂಭವಿಸುವುದಿಲ್ಲ. ದೇಶದೆಲ್ಲೆಡೆ ಶಾಂತಿ ನೆಲೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಇದರಿಂದ ಜನರು ಎಲ್ಲರೂ ಒಂದೇ ಎಂದು ಸಹಬಾಳ್ವೆಯಿಂದ ಎಲ್ಲ ಜನಾಂಗದವರೂ ಒಂದಾಗಿ ನಡೆಯಲು ಸಾಧ್ಯ. ಈ ಪ್ರಭಾತ್ ಪೇರಿ ಇನ್ನು ನೂರಾರು ವರ್ಷಗಳು ನಡೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕಿ ಲತಿಕಾ ದಿನೇಶ ಶೆಟ್ಟಿ, ಕೆ.ಪಿ.ರಾಜೇಶ್ವರಿ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶ, ವಿಜಯ ಜಾಧವ್, ಕೆ.ಕರಿಬಸಪ್ಪ, ಚನ್ನಬಸವ ಶೀಲವಂತ್, ಮಹಾಲಿಂಗೇಶ, ಯುವರಾಜ್, ಅಕ್ಕಮ್ಮ, ಯೋಗ ಬಳಗದ ಪ್ರಕಾಶ, ಮಹಾಂತೇಶ, ರೇವಣಸಿದ್ದಯ್ಯ ಹಿರೇಮಠ, ಬೇಕರಿ ಕೊಟ್ರೇಶ, ಉತ್ತಂಗಿ ವೀರಣ್ಣ, ಕೆ.ಜೆ.ನಾಗರಾಜ, ಉತ್ತಂಗಿ ಪ್ರಕಾಶ, ಜವಳಿ ಜಯಣ್ಣ, ನಿರಂಜನ, ಶೋಭಾ ಕುರ್ಡೆಕರ್, ಬಕ್ಕೇಶ್ವರ, ವಿರಕ್ತಮಠದ ಶಾಲೆ ಶಿಕ್ಷಕರು, ಮಕ್ಕಳು ಇದ್ದರು.
- - --19ಕೆಡಿವಿಜಿ36, 37:
ದಾವಣಗೆರೆಯಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಬಸವ ಪ್ರಭಾತ್ ಪೇರಿಯಲ್ಲಿ ಡಾ.ಬಸವಪ್ರಭು ಸ್ವಾಮೀಜಿ, ದಿನೇಶ ಕೆ.ಶೆಟ್ಟಿ, ಲತಿಕಾ ಶೆಟ್ಟಿ, ಎ.ನಾಗರಾಜ, ಇತರರು ಇದ್ದರು.