- - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಮೋಫಿಲಿಯಾ ರೋಗವು ಅತ್ಯಂತ ವಿರಳವಾಗಿದ್ದು, ಇನ್ನು ಹೆಚ್ಚಿನ ರೋಗಿಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕಿದೆ. ಈ ಹಿನ್ನೆಲೆ ಇಲಾಖೆ ವತಿಯಿಂದ ಎಲ್ಲ ಸಹಾಯ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯಲ್ಲಿ ಶನಿವಾರ ಆಯೋಜಿಸಿದ 37ನೇ ವಿಶ್ವ ಹಿಮೊಫಿಲಿಯಾ ದಿನ ಕಾರ್ಯಕ್ರಮವನ್ನು ಬಲೂನು ಹಾರಿಬಿಡುವ ಮೂಲಕ ಉದ್ಘಾಟಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಥೆಯ ಎಲ್ಲ ಚಟುವಟಿಕೆಗಳನ್ನು ಮೆಚ್ಚಿ ಇನ್ನಷ್ಟು ಹೆಚ್ಚಿನ ಸೇವೆಗಳು ಎಲ್ಲ ರಕ್ತಸಂಬಂಧಿ ರೋಗಿಗಳಿಗೆ ಲಭಿಸಲಿ ಎಂದು ಆಶಿಸಿದರು.

ಹಿಮೊಫಿಲಿಯಾ ಸೊಸೈಟಿ ಸಂಸ್ಥಾಪಕ, ಪದ್ಮಶ್ರೀ ಪುರಸ್ಕೃತರಾದ ಡಾ.ಸುರೇಶ ಹನಗವಾಡಿ ಮಾತನಾಡಿ, ಸರ್ಕಾರವು ಹಿಮೊಫಿಲಿಯಾ ಬಾಧಿತರ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಉತ್ಕೃಷ್ಟ ಚಿಕಿತ್ಸೆ ನೀಡುವ ಸಂಬಂಧ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.


ಹಿಮೊಫಿಲಿಯಾ, ಥೆಲೆಸ್ಸೆಮಿಯಾ ಮತ್ತು ಸಿಕಲ್ ಸೆಲ್ ರೋಗವನ್ನು 2016ರಲ್ಲಿ ಅಂಗವಿಕಲರ ಕಾಯ್ದೆಯಲ್ಲಿ ಸೇರಿಸಿದ್ದರೂ ಈ ರೋಗಿಗಳಿಗೆ ಉದ್ಯೋಗ ಮೀಸಲಾತಿ ಲಭ್ಯವಾಗಿಲ್ಲ. ಈ ಬಗ್ಗೆ ಸರ್ಕಾರವು ಇದನ್ನು ಪರಿಗಣಿಬೇಕೆಂದು ಅವರು ವಿನಂತಿಸಿದರು.

ಈ ವರ್ಷದ ಥೀಮ್ ಹಿಮೊಫಿಲಿಯಾ ರಕ್ತಪರೀಕ್ಷೆ:

ಚಿಕಿತ್ಸೆಯ ಮೊದಲ ಹೆಜ್ಜೆ ಎಂಬ ಉದ್ದೇಶವೆಂದರೆ ಹಿಮೊಫಿಲಿಯಾ ರೋಗವನ್ನು ಶೀಘ್ರವಾಗಿ ಗುರುತಿಸುವ ಮಹತ್ವವನ್ನು ಒತ್ತಿಹೇಳುವುದು. ಜಗತ್ತಿನಾದ್ಯಂತ ಹಲವಾರು ಜನರು ಇನ್ನೂ ಸರಿಯಾದ ಪರೀಕ್ಷೆಗಳಿಲ್ಲದೇ ಹಿಮೊಫಿಲಿಯಾ ರೋಗದಿಂದ ಬಳಲುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ದೊರೆಯದೇ ಇರುವುದೇ ದೊಡ್ಡ ಸವಾಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆ ಗೌರವಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ, ಅಧ್ಯಕ್ಷ (ಅಭಿವೃದ್ಧಿ) ಡಾ. ಬಿ.ಟಿ.ಅಚ್ಯುತ, ಡಾ.ಅಭಿಷೇಕ, ಡಾ.ಮೀರಾ ಹನಗವಾಡಿ, ನಿವೃತ್ತ ಡಿವೈಎಸ್‌ಪಿ ರವಿನಾರಾಯಣ, ಡಾ. ಜಿ.ಸಿ.ಸದಾಶಿವಪ್ಪ, ಡಾ. ಎಂ.ಎಂ.ದೊಡ್ಡಿಕೊಪ್ಪ, ಡಾ.ಶಾಂತಾ ಭಟ್, ನವೀನ್ ಹವಳಿ, ಶಿವಕುಮಾರ ಮೇತ್ರಿ, ಈಶ್ವರ ತಳವಾರ, ಎ.ಎಂ.ಕೊಟ್ರೇಶ್ವರ, ಪೋಷಕರು ಇತರರು ಇದ್ದರು.

- - -

-19ಕೆಡಿವಿಜಿ33, 34:

ದಾವಣಗೆರೆಯಲ್ಲಿ ವಿಶ್ವ ಹಿಮೊಫಿಲಿಯಾ ದಿನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಬಲೂನು ಹಾರಿಬಿಡುವ ಮೂಲಕ ಉದ್ಘಾಟಿಸಿದರು. ಡಾ.ಸುರೇಶ ಹನಗವಾಡಿ, ಡಾ.ಬಿ.ಟಿ.ಅಚ್ಯುತ ಇತರರು ಇದ್ದರು.