-ಚಳ್ಳಕೆರೆ ತಾಲೂಕು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಶಾಸಕ ರಘುಮೂರ್ತಿ ತಾಕೀತು । ಮೈಯೆಲ್ಲಾ ಕಣ್ಣಾಗಿರಲು ಸೂಚನೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆತಾಲೂಕಿನಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಆಡಳಿತ ನಡೆಸಬೇಕಿದೆ. ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಶಾಸಕ ಟಿ. ರಘುಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ತ್ರೈಮಾಸಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೃಷಿ-ತೋಟಗಾರಿಕೆ ಅಧಿಕಾರಿಗಳ ಕಾರ್ಯವ್ಯಾಪ್ತಿ ದೊಡ್ಡದಿದೆ. ರೈತರು ವಿಮೆ ಪಾವತಿಸುವ ಮುನ್ನ ಅರಿವು ಮೂಡಿಸಬೇಕು. ವಿಮೆ ಕಟ್ಟಿದ ಮೇಲೆ ರೈತರಿಗೆ ಅನುಕೂಲವಾಗುವಂತೆ ಮಾರ್ಗದರ್ಶನ ನೀಡಬೇಕು. ವಿಮೆಯ ಹಣ ಅರ್ಹರಿಗಷ್ಟೇ ಸಿಗುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕಳೆದ ಬಾರಿ ಬಂದ ಮಧ್ಯಂತರ ಪರಿಹಾರ 12 ಪಂಚಾಯತಿಗಳಿಗೆ ಬಂದಿಲ್ಲದೆ ಇರುವುದಕ್ಕೆ ಅಧಿಕಾರಿಗಳೇ ಕಾರಣ ಎಂಬ ಆರೋಪ ಇದೆ. ಈ ಸಮಸ್ಯೆ ಮುಂದೆ ತಲೆದೋರದಂತೆ ಎಚ್ಚರಿಕೆ ವಹಿಸಬೇಕು ಎಂದರು.ಜಿಲ್ಲೆಗೆ ಬಿಡುಗಡೆಯಾದ 81 ಕೋಟಿ ಪರಿಹಾರದಲ್ಲಿ 54 ಕೋಟಿ ಚಳ್ಳಕೆರೆ ತಾಲೂಕಿಗೆ ಬಂದಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಅಡಿಕೆ, ಮಾವು ದಾಳಿಂಬೆ ಬೆಳೆಗೆ 2025 -26ನೇ ಸಾಲಿನಲ್ಲಿ 1521 ರೈತರು 46 ಲಕ್ಷ ಸಂದಾಯ ಮಾಡಿದ್ದರು. ಅವರಿಗೆ 68 ಕೋಟಿ ಪರಿಹಾರದ ಹಣ ಬಂದಿರುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿ ರಮೇಶ್ ಮಾಹಿತಿ ನೀಡಿದರು. ಈ ಮಾತಿಗೆ ಆಕ್ಷೇಪಣೆ ವ್ಯಕ್ತಪಡಿಸಿದ ಕೆಡಿಪಿ ಸದಸ್ಯ ವಿಶ್ವನಾಥ್ ರೆಡ್ಡಿ , ಯಾವುದೇ ಬೆಳೆ ಇಲ್ಲದಿದ್ದರೂ ಹಲವಾರು ರೈತರಿಗೆ 44 ಲಕ್ಷದಷ್ಟು ಹಣ ಖಾತೆಗಳಿಗೆ ಜಮಾ ಆಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಸಿದ ಶಾಸಕರು, ಕೃಷಿ ಇಲಾಖೆ ಅನುಮತಿ ಇಲ್ಲದೆ ವಿಮಾ ಕಂಪನಿಯವರು ರೈತರಿಗೆ ನೇರವಾಗಿ ಹಣ ಹಾಕಲು ಹೇಗೆ ಸಾಧ್ಯ? ಅದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.ತುಂಗಭದ್ರಾ ಹಿನ್ನೀರು ಯೋಜನೆಯು ಪ್ರತಿಯೊಂದು ಮನೆಗೆ ತಲುಪಿಸುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಗ್ರಾಮದ ಎಲ್ಲಾ ಮನೆಗೂ ನೀರಿನ ಯೋಜನೆ ಸೌಲಭ್ಯ ಪಡೆಯುವಂತಾಗಬೇಕು. ಇನ್ನು ಕೆಲವೊಂದು ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಮಾಹಿತಿ ಇದ್ದು, ಅವುಗಳನ್ನು ಪೂರ್ಣಗೊಳಿಸಬೇಕು. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಿಸುವ ಯೋಜನೆ ಇದೆ ಎಂದು ಶಾಸಕರು ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್ ತಿಪ್ಪೇಸ್ವಾಮಿ ಹಾಗೂ ಕೆಲವು ಪಿಡಿಒಗಳು, ತುಂಗಾ ಹಿನ್ನೀರು ಹಾಗೂ ಜಲಜೀವನ್ ಯೋಜನೆಯಲ್ಲಿ ಹಾಕಿರುವ ನಲ್ಲಿ ಹಾಗೂ ಮೀಟರ್‌ಗಳನ್ನು ಗ್ರಾಮದ ಜನರು ಕಿತ್ತು ಹಾಕುತ್ತಿದ್ದು ಇದರಿಂದ ಹಲವಾರು ಸಮಸ್ಯೆಗಳು ಉಂಟಾಗಿವೆ ಎಂದು ಆತಂಕ ತೋಡಿಕೊಂಡರು. ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ ಎಂದು ಶಾಸಕರು ತಿಳಿಸಿದರು.321 ಹಳ್ಳಿಗಳಿಗೆ ತುಂಗಭದ್ರ ನೀರಿನ ಕಲೆಕ್ಷನ್ ನೀಡಲಾಗಿದ್ದು 458 ಓವರ್ ಟ್ಯಾಂಕ್ ಗಳು ನಿರ್ಮಾಣಗೊಂಡಿವೆ. ಇನ್ನೂ 30 ಹಳ್ಳಿಗಳಿಗೆ ಬಾಕಿ ಇದ್ದು, ಅದನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸುವ ಭರವಸೆ ನೀಡಿದರು.ಇತ್ತೀಚೆಗೆ ಅಪ್ರಾಪ್ತ ಬಾಲಕಿಯ ಮೇಲೆ ಶಿಕ್ಷಕ ನಡೆಸಿದ ಕ್ರೌರ್ಯವನ್ನು ಸಹಿಸಲಾಗದು. ಇಂತಹ ಘಟನೆಗಳು ಮರುಕಳಿಸದಂತೆ ಶಿಕ್ಷಣ ಇಲಾಖೆ ಹಾಗೂ ಸಿಡಿಪಿಓ ಇಲಾಖೆ ಎಚ್ಚರವಹಿಸಬೇಕು ಎಂದು ತಾಕೀತು ಮಾಡಿದರು. ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಕ್ರೌರ್ಯದ ಬಗ್ಗೆ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಹಕರಿಸಿದ ಎಲ್.ಎಸ್ ನರ್ಸಿಂಗ್ ಹೋಂ ಮುಚ್ಚಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಕಾಶಿ ಸಭೆಗೆ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ತಹಸೀಲ್ದಾರ್ ರೇಹಾನಾ ಪಾಷಾ, ಇಓ ಶಶಿಧರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಕೆಡಿಪಿ ಸದಸ್ಯರಾದ ಸುರೇಶ್, ರಮೇಶ್ ಮತ್ತಿತರರು ಇದ್ದರು.--------------ಪೋಟೋಕ್ಯಾಪ್ಸನ್ ಚಳ್ಳಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಟಿ. ರಘುಮೂರ್ತಿ ಮಾತನಾಡಿದರು.----ಪೋಟೋ ಫೈಲ್ ನೇಮ್-18 ಸಿಟಿಡಿ1--