ಪರಿಷ್ಕೃತ ಮುಂಗಾರು ಪೂರ್ವ ಮಳೆಗೆ ಮತ್ತೆ ನಾಲ್ಕು ಬಲಿ

| Published : May 27 2024, 05:38 AM IST

tamilnadu rain

ಸಾರಾಂಶ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಯಾದಗಿರಿ, ಕಲಬುರಗಿ ಸೇರಿ ರಾಜ್ಯದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾನುವಾರವೂ ಮಳೆಯಾಗಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಬೆಂಗಳೂರು :  ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಯಾದಗಿರಿ, ಕಲಬುರಗಿ ಸೇರಿ ರಾಜ್ಯದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾನುವಾರವೂ ಮಳೆಯಾಗಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಕಲಬುರಗಿ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಸಿಡಿಲಿಗೆ ಮೂವರು ಮೃತಪಟ್ಟಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ಸತೀಶ ಪ್ರಹ್ಲಾದ ಶಳಕೆ (43) ಹಾಗೂ ದೊಂಡಿರಾಮ ಏಕನಾಥ ವಾಗಮೊರೆ (50) ಹಾಗೂ ಸೇಡಂ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮೋಹನ್‌ ನಾಯಕ್‌ (68) ಎಂಬುವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

 ಯಾದಗಿರಿ ಜಿಲ್ಲೆಯ ಹಲವೆಡೆ ಮಧ್ಯಾಹ್ನದ ನಂತರ ಸುಮಾರು 2 ತಾಸು ಬಿರುಗಾಳಿ ಸಹಿತ ಮಳೆಯಾಗಿದ್ದು, ಗುರುಮಠಕಲ್‌ ಪಟ್ಟಣದ ಚಪೇಟ್ಲಾದಲ್ಲಿ ಮನೆಯ ಪತ್ರಾಸ್‌ (ಟಿನ್‌ ಶೀಟ್‌) ಮೇಲೆ ಇಟ್ಟಿದ್ದ ಕಲ್ಲು ಬಿದ್ದು, ನಾಲ್ಕು ವರ್ಷದ ಬಾಲಕಿ ಮನಸ್ವಿ ಯಾದವ್‌ ಎಂಬಾಕೆ ಮೃತಪಟ್ಟಿದ್ದಾಳೆ. ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಮರಗಳು ಧರೆಗೆ ಉರುಳಿದ್ದು, ಶಹಾಪುರ-ಯಾದಗಿರಿ ಸಂಪರ್ಕ ರಸ್ತೆ ಸಂಪೂರ್ಣ ಬಂದ್‌ ಆಗಿದೆ. ರಾಯಚೂರು ತಾಲೂಕಿನ ಶಕ್ತಿನಗರದ ದತ್ತಾತ್ರೇಯ ದೇವಸ್ಥಾನದ ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ರಾಯಚೂರು ಜಿಲ್ಲೆ ಮುದಗಲ್‌ ಸಮೀಪದ ಕರೆಮರಡಿ ತಾಂಡಾದಲ್ಲಿ ಸಿಡಿಲಿಗೆ ಎಮ್ಮೆಯೊಂದು ಸಾವನಪ್ಪಿದೆ.

ಇದೇ ವೇಳೆ, ಕೊಪ್ಪಳ, ವಿಜಯಪುರ ಜಿಲ್ಲೆಯ ಹಲವೆಡೆಯೂ ಉತ್ತಮ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.