ಸಾರಾಂಶ
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪಂಚ ಪೀಠದ ಶ್ರೀಗಳ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಪಂಚಮಸಾಲಿ ಸಮಾಜ ಒಪ್ಪಿಗೆ ಇಲ್ಲ. ಆ.10ರಂದು ಪಂಚಮಸಾಲಿ ಪೀಠದಲ್ಲಿ ಸಮಾಜದ ಸಭೆ ಸೇರಿ ಅದರ ನಿರ್ಣಯವನ್ನು ಸಮಾಜಕ್ಕೆ ತಿಳಿಸುತ್ತೇವೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ತಿಳಿಸಿದರು
ಚಿತ್ರದುರ್ಗ : ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪಂಚ ಪೀಠದ ಶ್ರೀಗಳ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಪಂಚಮಸಾಲಿ ಸಮಾಜ ಒಪ್ಪಿಗೆ ಇಲ್ಲ. ಆ.10ರಂದು ಪಂಚಮಸಾಲಿ ಪೀಠದಲ್ಲಿ ಸಮಾಜದ ಸಭೆ ಸೇರಿ ಅದರ ನಿರ್ಣಯವನ್ನು ಸಮಾಜಕ್ಕೆ ತಿಳಿಸುತ್ತೇವೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ತಿಳಿಸಿದರು. ಚಿತ್ರದುರ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಗಳು, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತಗೊಂಡಿದೆ. ಆದ್ದರಿಂದ ಉಳಿದ ಮಠಗಳನ್ನು ಜಾತಿ ಮಠಗಳು ಎಂದು ಕರೆದಿದ್ದಾರೆ. ಹೀಗೆ ಕರೆಯಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಕಿಡಿ ಕಾರಿದರು. ಜಾತಿ ಪೀಠಗಳು ಜ್ಯೋತಿಯಾಗಿ ಜಾತ್ಯತೀತ ತತ್ವ ಅಳವಡಿಸಿಕೊಂಡು ಸೇವೆ ಸಲ್ಲಿಸುತ್ತಿವೆ ಎಂದರು.
2003ರಲ್ಲಿ ಪಂಚಪೀಠದವರು ಬೇಡ- ಜಂಗಮರು ಮತ್ತು ದಲಿತರು ಪರಿಶಿಷ್ಟ ಜಾತಿ ಎಂದು ಹೇಳಿದ್ದರು. ವೀರಶೈವರಿಗೆ ಬೇಡ- ಜಂಗಮರ ಪ್ರಮಾಣ ಪತ್ರ ಕೊಡಿಸಲು ಮುಂದಾಗಿದ್ದರು. ವೀರಶೈವ ಲಿಂಗಾಯಿತರಿಗೆ ಮೀಸಲಾತಿ ಕೊಡಿಸುವ ಕೆಲಸಕ್ಕೆ ಮುಂದಾಗದೆ ತಮ್ಮ ಸಮಾಜದ ಜನರಿಗೆ ಬೇಡ- ಜಂಗಮ ಮೀಸಲಾತಿ ಕೊಡಿಸಲು ಪ್ರಧಾನಿ ವಾಜಪೇಯಿ ಮತ್ತು ಅಡ್ವಾಣಿ ಅವರಲ್ಲಿ ಮನವಿ ಮಾಡಿದ್ದರು. ಇದರ ಬಗ್ಗೆ ರಂಭಾಪುರಿ ಶ್ರೀ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಛೇಡಿಸಿದರು.
ಸಮಾಜದಲ್ಲಿ ಈಗ ಎರಡು ಪ್ರಬೇಧಗಳು ಕಾಣಿಸಿಕೊಂಡಿವೆ. ಪಂಚಪೀಠದವರದ್ದು ಮೈಕ್ರೋ ಜನಾಂಗವಾಗಿದ್ದರೆ, ಪಂಚಮಸಾಲಿ ಸಮಾಜದ್ದು ಮ್ಯಾಕ್ರೋ ಜನಾಂಗವಾಗಿದೆ ಎಂದು ವಚನಾನಂದ ಶ್ರೀ ಹೇಳಿದರು.
ವೀರಶೈವ, ಲಿಂಗಾಯತ ಒಳ ಪಂಗಡಗಳ ಗೋಜು ಗದ್ದಲ ಬಿಟ್ಟು ನಾವೆಲ್ಲ ಒಂದಾಗಬೇಕು ಎನ್ನುವುದನ್ನು ಮೊದಲು ಹೇಳಿದ್ದೇ ನಾವು. ಒಟ್ಟಾಗಿ ಹೋದರೆ ಸಾಮಾಜಿಕವಾಗಿ, ರಾಜಕೀಯವಾಗಿ ಲಿಂಗಾಯತರಿಗೆ ಮತ್ತು ವೀರಶೈವರಿಗೆ ಅಸ್ತಿತ್ವ ಇದೆ. ಆದರೆ ಪೀಠದಲ್ಲಿ ಕುಳಿತವರ ತಪ್ಪು ಹೇಳಿಕೆ, ಮಾರ್ಗದರ್ಶನಗಳಿಂದ ಒಳ ಪಂಗಡಗಳು ಆಗುತ್ತವೆ. ಇನ್ಮುಂದೆ ಆಗಬಾರದು. ನಾವೆಲ್ಲ ಒಂದಾಗಬೇಕು. ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಸಮಾಜವನ್ನು ಮೇಲಕ್ಕೆ ಎತ್ತಲು ಎಲ್ಲ ಒಳಪಂಗಡಗಳನ್ನು ಮರೆತು ಒಂದಾಗಿ ಹೋಗಬೇಕು ಎಂದು ಹೇಳಿದರು. ==
ನಮ್ಮದು ವಿರಕ್ತ- ಗುರುಪರಂಪರೆಗೆ ಮೂಲ ಭಕ್ತರು. ಹಾಗಾಗಿ ನಾವು ಭಕ್ತ ಪರಂಪರೆಯ ಪೀಠಾಧ್ಯಕ್ಷರು ನಾವು. ಜಗದ್ಗುರು ಬಸವಣ್ಣನವರ ಕಾಯಕ, ದಾಸೋಹ ಪರಂಪರೆ ಸಮುದಾಯ ನಮ್ಮದು ಎಂದು ಎಂದು ಇದೇ ವೇಳೆ ಅವರು ತಿಳಿಸಿದರು.