ನಗರದ ಕಂಟೋನ್ಮೆಂಟಲ್ಲಿ 368 ಮರಗಳ ಹನನಕ್ಕೆ ತೀವ್ರ ವಿರೋಧ

| N/A | Published : Jun 06 2025, 10:45 AM IST

lalbagh tree collaps

ಸಾರಾಂಶ

ಕಂಟೋನ್ಮೆಂಟ್‌ ರೈಲ್ವೆ ಕಾಲೋನಿಯಲ್ಲಿ ಬಾಗ್ಮನೆ ಐಟಿ ಕಂಪನಿಯು ಕಟ್ಟಡ ನಿರ್ಮಾಣಕ್ಕಾಗಿ ನೂರಾರು ವರ್ಷಗಳಷ್ಟು ಹಳೆಯದಾದ 368 ಮರಗಳ ಹನನಕ್ಕೆ ಅವಕಾಶ ನೀಡಲಾಗಿದ್ದು, ಇದನ್ನು ವಿರೋಧಿಸಿ  ವಿವಿಧ ಕ್ಷೇತ್ರಗಳ ಗಣ್ಯರು ‘ವೃಕ್ಷ ರಕ್ಷಾ ಅಭಿಯಾನ’ ನಡೆಸಿದರು.

  ಬೆಂಗಳೂರು : ವಸಂತ ನಗರದ ಕಂಟೋನ್ಮೆಂಟ್‌ ರೈಲ್ವೆ ಕಾಲೋನಿಯಲ್ಲಿ ಬಾಗ್ಮನೆ ಐಟಿ ಕಂಪನಿಯು ಕಟ್ಟಡ ನಿರ್ಮಾಣಕ್ಕಾಗಿ ನೂರಾರು ವರ್ಷಗಳಷ್ಟು ಹಳೆಯದಾದ 368 ಮರಗಳ ಹನನಕ್ಕೆ ಅವಕಾಶ ನೀಡಲಾಗಿದ್ದು, ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಗಳು, ಮಠಾಧೀಶರು, ಪರಿಸರ ಪ್ರೇಮಿಗಳು, ಸಾಹಿತಿಗಳು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ‘ವೃಕ್ಷ ರಕ್ಷಾ ಅಭಿಯಾನ’ ನಡೆಸಿದರು.

ಗುರುವಾರ ಕಂಟೋನ್ಮೆಂಟ್‌ ರೈಲ್ವೆ ಕಾಲೋನಿಯಲ್ಲಿ ಪರಿಸರಕ್ಕಾಗಿ ನಾವು ಸಂಘಟನೆಯ ನೇತೃತ್ವದಲ್ಲಿ ನೂರಾರು ವರ್ಷ ಹಳೆಯದಾದ ಬೃಹತ್‌ ಮರವೊಂದಕ್ಕೆ ಸಾಂಕೇತಿಕವಾಗಿ ರಕ್ಷಾ ಬಂಧನದ ಮಾದರಿಯಲ್ಲಿ ‘ಕೆಂಪು ವಸ್ತ್ರ ಕಟ್ಟಿ’ ಪ್ರತಿಯೊಬ್ಬರು ಸಹಿ ಮಾಡುವ ಮೂಲಕ ‘ವೃಕ್ಷ ರಕ್ಷಾ ಅಭಿಯಾನ’ಕ್ಕೆ ಚಾಲನೆ ನೀಡಲಾಯಿತು.

ಲೋಕಾಯುಕ್ತ ವಿಶ್ರಾಂತ ನ್ಯಾ.ಸಂತೋಷ್‌ ಹೆಗ್ಡೆ ಮಾತನಾಡಿ, ಇಂದು ರಾಜಕಾಲುವೆಗಳು ಒತ್ತುವರಿಯಾಗಿದ್ದು ಅಧಿಕಾರದಲ್ಲಿ ಇರುವವರು ಕಣ್ಣು ಮುಚ್ಚಿಕೊಂಡು ಇತರರಿಗೆ ಒತ್ತುವರಿ ಮಾಡಲು ಬಿಟ್ಟಿದ್ದಾರೆ. ಇವತ್ತು ಆ ಕೆರೆಗಳ ಜಾಗದಲ್ಲಿ ಬಸ್‌ ನಿಲ್ದಾಣ. ಹಾಕಿ, ಫುಟ್‌ಬಾಲ್‌ ಸ್ಟೇಡಿಯಂಗಳು ಇವೆ. ಈ ಪರಿಸರವನ್ನು ರಕ್ಷಿಸುವ ಕರ್ತವ್ಯ ನಮ್ಮೆಲ್ಲರದ್ದು ಎಂಬ ಪಾಠ ಮಕ್ಕಳಿಂದ ಶುರುವಾಗಬೇಕು. ಶಾಲಾ, ಕಾಲೇಜುಗಳಲ್ಲಿ ಪ್ರತಿಯೊಂದು ತರಗತಿಯಲ್ಲಿ ಪರಿಸರದ ರಕ್ಷಣೆಯ ವಿಚಾರದ ಪಾಠ ಇರಬೇಕು. ಪೋಷಕರು, ಶಿಕ್ಷಕರು ಮಕ್ಕಳಿಗೆ ಹೇಳಿಕೊಡಬೇಕು. ರೈಲ್ವೆಯವರು ಇಲ್ಲಿರುವ 368 ಮರಗಳನ್ನು ಕಡಿಯಲು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಹೇಳಿದರು.

ಈ ಜಾಗ ಭಾರತೀಯ ರೈಲ್ವೆಗೆ ಸೇರಿದ್ದು. ರೈಲ್ವೆ ನಮ್ಮ ದೇಶದ ಅತೀ ದೊಡ್ಡ ಭೂಮಾಲೀಕ. ಎರಡನೇ ಸ್ಥಾನ ಭಾರತೀಯ ಸೇನೆಗೆ ಬರುತ್ತದೆ. ನಮ್ಮ ದೇಶದಲ್ಲಿ 5 ಲಕ್ಷ ಹೆಕ್ಟೇರ್‌ ಭೂಮಿಯನ್ನು ರೈಲ್ವೆ ತನ್ನ ಮಾಲೀಕತ್ವದಲ್ಲಿ ಇಟ್ಟುಕೊಂಡಿದೆ. ಅದರಲ್ಲಿ ಕೇವಲ ಶೇ.5ಕ್ಕಿಂತ ಕಡಿಮೆ ಜಾಗದಲ್ಲಿ ಹಸಿರನ್ನು ಉಳಿಸಿಕೊಂಡಿದೆ. ಇವತ್ತು ಯಾರಿಗಾದರೂ ಅಪರಾಧಿ ಪ್ರಜ್ಞೆ ಇದ್ದರೆ ಅದು ರೈಲ್ವೆ ಮಂಡಳಿಗೆ ಇರಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರ ಕೆಡವಿ ಕಾಂಕ್ರೀಟ್‌ ಕಟ್ಟಲು ಕಿಡಿ

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಅವರು, ಬ್ರಿಟಿಷರ ಕಾಲದಿಂದ 1854ರಿಂದಲೂ ರೈಲ್ವೆಗೆಂದು ಧ್ವಂಸ ಮಾಡಿದ ಗಿಡಮರಗಳು ಅತ್ಯಂತ ದಾಖಲೆ ಪ್ರಮಾಣದಲ್ಲಿ ಇವೆ. ಇವತ್ತಿನವರೆಗೆ ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚಿನ ಆಮ್ಲಜನಕ ತೆಗೆದುಕೊಂಡು ಕಾರ್ಬನ್‌ ಡೈಆಕ್ಸೆಡ್‌ ಕೊಟ್ಟಿದ್ದು ಈ ರೈಲ್ವೆಯವರು. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಸಿರನ್ನು ದ್ವಂಸ ಮಾಡಿದ್ದು ಈ ರೈಲ್ವೆಯವರು. ಆಗಾಗಿ ಅವರಿಗೆ ಪಾಪ ಪ್ರಜ್ಞೆ ಇರಬೇಕಾಗಿತ್ತು. ಈಗ ಐದು ಎಕರೆ ಜಾಗದಲ್ಲಿರುವ 368 ಮರಗಳನ್ನು ಕೆಡವಿ, ಕಾಂಕ್ರೀಟ್‌ ಕಟ್ಟಲು ಹೊರಟಿರುವವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಅಭಿಯಾನದಲ್ಲಿ ಸುಪ್ರೀಂ ಕೋರ್ಟ್‌ ವಿಶ್ರಾಂತ ನ್ಯಾ.ಸಂತೋಷ್‌ ಹೆಗ್ಡೆ, ಗೋಪಾಲಗೌಡ, ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌.ಹಿರೇಮಠ, ಬೇಲಿ ಮಠದ ಸ್ವಾಮೀಜಿ, ಸಾಣೇಹಳ್ಳಿ ಸ್ವಾಮೀಜಿ, ಕಪ್ಪದಗುಡ್ಡ ಸ್ವಾಮೀಜಿ, ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಕಾಳೇಗೌಡ ನಾಗವಾರ, ಪತ್ರಕರ್ತ ಇಂದೂಧರ ಹೊನ್ನಾಪುರ್‌, ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Read more Articles on