ಸಾರಾಂಶ
ಜಮ್ಮು/ವೈಷ್ಣೋದೇವಿ : ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚಿನಾಬ್ ನದಿಗೆ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ, ಜಮ್ಮುವಿವ ಶ್ರೀಕ್ಷೇತ್ರ ವೈಷ್ಣೋದೇವಿ ನಿಹದ ಕಟ್ರಾದಲ್ಲಿ ಕಟ್ರಾ-ಶ್ರೀನಗರ ವಂದೇಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಸುಮಾರು 1,400 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ಚಿನಾಬ್ ಸೇತುವೆಯು ವಿಶ್ವದ ಅತಿ ಎತ್ತರದ ರೈಲು ಮತ್ತು ಕಮಾನು ಸೇತುವೆಯಾಗಿದ್ದು, ನದಿಯ ತಳದಿಂದ 359 ಮೀಟರ್ ಎತ್ತರವಿದೆ. ಇದು ಪ್ಯಾರಿಸ್ನ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ. 1,315 ಮೀ. ಉದ್ದದ ಸೇತುವೆ ಇದಾಗಿದ್ದು, ಸಿವಿಲ್ ಎಂಜಿನಿಯರಿಂಗ್ನಲ್ಲಿ ಭಾರತದ ಇತ್ತೀಚಿನ ಅದ್ಭುತವೆಂದು ಪರಿಗಣಿಸಲಾಗಿದೆ.
ವಂದೇಭಾರತ್ ರೈಲು:
ಮೋದಿ ಅವರು ಕಟ್ರಾದಲ್ಲಿ ಕಟ್ರಾ-ಶ್ರೀನಗರದ ನಡುವಿನ ವಂದೇಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಈ ಮಾರ್ಗವು 272 ಕಿ.ಮೀ. ಉದ್ದದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕ (ಯುಎಸ್ಬಿಆರ್ಎಲ್) ಯೋಜನೆಯ ಬಹುಮುಖ್ಯ ಭಾಗವಾಗಿದ್ದು, ದೇಶದ ರೈಲ್ವೆ ಜಾಲಕ್ಕೆ ಕಾಶ್ಮೀರ ಕಣಿವೆಯನ್ನು ನೇರವಾಗಿ ಸಂಪರ್ಕಿಸಲಿದೆ.
ಈ ಮೊದಲು ಯುಎಸ್ಬಿಆರ್ಎಲ್ ಯೋಜನೆಯಡಿ 2009ರಲ್ಲಿ ಖಾಜಿಗುಂಡ್-ಬಾರಾಮುಲ್ಲಾ ಮಾರ್ಗ, 2014ರಲ್ಲಿ ಉಧಂಪುರ-ಕಟ್ರಾ ಮಾರ್ಗ ಹಾಗೂ 2024ರ ಫೆಬ್ರವರಿಯಲ್ಲಿ ಬನಿಹಾಲ್-ಸಂಗಲ್ದನ್ ಮಾರ್ಗ ನಿರ್ಮಾಣವಾಗಿತ್ತು. ಆದರೆ ಈ ಯಾವುದೇ ಮಾರ್ಗಗಳು ಕಾಶ್ಮೀರವನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುತ್ತಿರಲಿಲ್ಲ
ಪಹಲ್ಗಾಂ ದಾಳಿ ಬಳಿಕಇಂದು ಮೊದಲ ಸಲ
ಮೋದಿ ಕಾಶ್ಮೀರ ಭೇಟಿ
ನವದೆಹಲಿ: ಪಹಲ್ಗಾಂ ದುರಂತದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಜೂ.6ರಂದು ಜಮ್ಮುಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಕಲ ಭದ್ರತಾ ಏರ್ಪಾಡು ಮಾಡಲಾಗಿದೆ, ಈ ವೇಳೆ ಅವರು ಜಮ್ಮು-ಕಾಶ್ಮೀರದ ಒಟ್ಟು 46 ಸಾವಿರ ಕೋಟಿ ರು. ಮೌಲ್ಯದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.