- ನೀವು ನನ್ನ ಮೇಲೆ ಒತ್ತಡ ಹೇರುತ್ತಿದ್ದೀರಿ
- ರಾಮಮಂದಿರ ಹುಂಡಿ ಕಳವು ರಾಜ್ಯದ ವಿಚಾರ- ನಾನು ಜಾರ್ಖಂಡ್ ವಿಚಾರಕ್ಕೂ ಅವಕಾಶ ನೀಡಿಲ್ಲ
- ರಾಜ್ಯಗಳ ವಿಚಾರ ಇಲ್ಲಿ ಪ್ರಸ್ತಾಪಿಸಲು ಅವಕಾಶ ಇಲ್ಲ- ರಾಜ್ಯಸಭೆ ಸಭಾಧ್ಯಕ್ಷ ರಾಧಾಕೃಷ್ಣನ್ ಅಸಮಾಧಾನ
ಪಿಟಿಐ ನವದೆಹಲಿ
‘ಅಯೋಧ್ಯೆ ರಾಮಮಂದಿರದ ಹುಂಡಿ ಕಳವು ಪ್ರಕರಣ ವಿಚಾರ ಚರ್ಚೆಗೆ ಕೋರಿ ನೀವು ಪ್ರತಿ ಬಾರಿಯೂ ನನ್ನ ಮೇಲೆ ಒತ್ತಡ ಹೇರುತ್ತೀರಿ’ ಎಂದು ಉಪರಾಷ್ಟ್ರಪತಿಗಳೂ ಆಗಿರುವ ರಾಜ್ಯಸಭಾ ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅವರು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆಗೆ ರಾಜ್ಯಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ ಕಲಾಪ ಸೇರಿದ ಬಳಿಕ ಉಂಟಾದ ಗದ್ದಲದಿಂದಾಗಿ ರಾಜ್ಯಸಭೆ ಕಲಾಪವು ಮಧ್ಯಾಹ್ನಕ್ಕೆ ಮುಂದೂಡಲ್ಪಟ್ಟಿದ್ದು, 12 ಗಂಟೆಗೆ ಮತ್ತೆ ಕಲಾಪ ಆರಂಭವಾದಾಗ ಸಭಾಧ್ಯಕ್ಷರು ಪ್ರಶ್ನೋತ್ತರ ಅವಧಿ ಆರಂಭಿಸಿದರು. ಆಗ ಪ್ರತಿಪಕ್ಷ ನಾಯಕ ಖರ್ಗೆ ಅವರು ರಾಮ ಮಂದಿರ ವಿಚಾರದ ಚರ್ಚೆಗೆ ಅನುಮತಿ ಕೋರಿದರು. ಇದಕ್ಕೆ ಅವಕಾಶ ನಿರಾಕರಿಸಿದ ರಾಧಾಕೃಷ್ಣನ್, ‘ಇಲ್ಲಿ ರಾಜ್ಯದ ವಿಚಾರಗಳನ್ನು ಎತ್ತಲು ಪ್ರೋತ್ಸಾಹಿಸುವುದಿಲ್ಲ. ಪ್ರತಿ ದಿನ ಅದೇ ವಿಚಾರ ಎತ್ತುತ್ತೀರಿ, ಕಲಾಪ ಹಾಳುಗೆಡವುತ್ತೀರಿ. ಇಂಥದ್ದಕ್ಕೆ ನಾನು ಅವಕಾಶ ನೀಡುವುದಿಲ್ಲ, ನೀವು ಪದೇ ಪದೇ ನನ್ನ ಮೇಲೆ ಒತ್ತಡ ಹೇರುತ್ತೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.‘ಜಾರ್ಖಂಡ್ ಗಲಾಟೆ ಮತ್ತು ಅಯೋಧ್ಯೆ ಪ್ರಕರಣ ಎರಡೂ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ. ಆಡಳಿತ ಪಕ್ಷದವರು ಜಾರ್ಖಂಡ್ ವಿಚಾರ ಪ್ರಸ್ತಾಪಿಸಿದಾಗಲೂ ನಾನು ಚರ್ಚೆಗೆ ಅವಕಾಶ ನೀಡಲಿಲ್ಲ, ನೀವು ಅಯೋಧ್ಯೆ ವಿಚಾರ ಪ್ರಸ್ತಾಪಿಸಿದರೂ ಅವಕಾಶ ನೀಡುವುದಿಲ್ಲ. ಪದೇ ಪದೆ ನೀವು ಈ ವಿಚಾರ ಎತ್ತಿ ಗದ್ದಲ ಎಬ್ಬಿಸಬೇಡಿ’ ಎಂದು ರಾಧಾಕೃಷ್ಣನ್ ತಿಳಿಸಿದರು.