ಹೋಳಿ ಹುಣ್ಣಿಮೆಗೆ ಭೂಸಪೇಟೆ, ಮುಳಮುತ್ತಲ ಕಾಮಣ್ಣ ಸಿದ್ಧ

| Published : Mar 23 2024, 01:04 AM IST

ಹೋಳಿ ಹುಣ್ಣಿಮೆಗೆ ಭೂಸಪೇಟೆ, ಮುಳಮುತ್ತಲ ಕಾಮಣ್ಣ ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಮಾರ್ಚ್‌ 25ರಂದು ಹೋಳಿ ಹುಣ್ಣಿಮೆ ಇದ್ದು, ಅಂದು ಕಾಮಣ್ಣನನ್ನು ಕೂರಿಸಿ ಪೂಜೆ ಮಾಡಿ ಮಾ. 26ರ ಕರಿ ದಿನ ಮಂಗಳವಾರ ಕಾಮದಹನ ನಡೆಯಲಿದೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಗಂಡು ಮಕ್ಕಳ ಹಬ್ಬವೆಂದೇ ಖ್ಯಾತಿ ಪಡೆದಿರುವ ಹೋಳಿ ಹುಣ್ಣಿಮೆ ಸಮೀಪಿಸುತ್ತಿದೆ. ಪೂಜೆಗೊಳ್ಳಲು ವಿವಿಧೆಡೆ ಕಾಮಣ್ಣನ ಸಹ ಸಿದ್ಧಗೊಳ್ಳುತ್ತಿದ್ದು ಬಿರು ಬಿಸಿಲಿನ ಕಾವಿನೊಂದಿಗೆ ಹಬ್ಬವನ್ನಾಚರಿಸಲು ಧಾರವಾಡದ ಮಂದಿ ಸನ್ನದ್ಧರಾಗಿದ್ದಾರೆ. ಧಾರವಾಡ ನಗರ ಹಾಗೂ ಗ್ರಾಮೀಣದ ಪ್ರತಿ ಬೀದಿ ಬೀದಿಗಳಲ್ಲಿ ಸಾಮಾನ್ಯವಾಗಿ ಕಾಮಣ್ಣನನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ.

ಈ ಬಾರಿ ಮಾರ್ಚ್‌ 25ರಂದು ಹೋಳಿ ಹುಣ್ಣಿಮೆ ಇದ್ದು, ಅಂದು ಕಾಮಣ್ಣನನ್ನು ಕೂರಿಸಿ ಪೂಜೆ ಮಾಡಿ ಮಾ. 26ರ ಕರಿ ದಿನ ಮಂಗಳವಾರ ಕಾಮದಹನ ನಡೆಯಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲಿಗೆ, ಬಣ್ಣ ಎರಚುವ ವಸ್ತುಗಳು ಸೇರಿದಂತೆ ಹಬ್ಬದಾಚರಣೆಗೆ ಬೇಕಾದ ಎಲ್ಲ ವಸ್ತುಗಳು ಮಾರಾಟಕ್ಕಿವೆ.

ಸುಪ್ರಸಿದ್ಧ ಭೂಸಪೇಟೆ ಕಾಮಣ್ಣ

ಹಲವಾರು ವರ್ಷಗಳ ಹಿಂದೆ ಯಾವನಾದರೂ ಆಜಾನುಬಾಹು ಸ್ಫುರದ್ರೂಪಿ ವ್ಯಕ್ತಿ ಮುಖದ ಮೇಲೆ ಹುರಿಕಟ್ಟಿ ಮೀಸೆಹೊಂದಿ, ತಲೆಗೆ ಜರಿ ರುಮಾಲು ಸುತ್ತಿ, ಮೈಮೇಲೆ ರೇಷ್ಮೆ ಜುಬ್ಬ ಧರಿಸಿ, ಜರಿ ಧೋತರ ಉಟ್ಟು, ಕಾಲಲ್ಲಿ ಜಿರ್ ಜಿರ್ ಅನ್ನುವ ಕೆರವು ತೊಟ್ಟವನನ್ನು ಕಂಡರೆ ಜನರು ‘ಭೂಸಪ್ಯಾಟಿ ಕಾಮಣ್ಣ ಆಗ್ಯಾನ, ಮಗ’ ಅನ್ನುವ ರೂಢಿಯಿತ್ತು. ಅಷ್ಟು ಸುಪ್ರಸಿದ್ಧ ಧಾರವಾಡದ ಭೂಸ ಪೇಟೆ ಕಾಮಣ್ಣ.

ಧಾರವಾಡ ಸಂಗೀತ, ಸಾಹಿತ್ಯ, ಕಲೆ, ನಾಟಕ, ವಿಜ್ಞಾನ ಯಾವುದೇ ಕ್ಷೇತ್ರವಿದ್ದರೂ ತನ್ನದೇ ಆದ ವಿಶಿಷ್ಟ ಮೆರಗನ್ನು ಹೊಂದಿದೆ. ಹೋಳಿ ಹುಣ್ಣಿಮೆಯ ಕಾಮಣ್ಣನ ವಿಷಯಕ್ಕೂ ಅದೇ ಅನ್ವಯ. ಇಲ್ಲಿಯ ಮಂಗಳವಾರ ಪೇಟೆಯಲ್ಲಿಯ ಭೂಸಪೇಟೆಯ ಅನೇಕ ಹಿರಿಯರು ಸುಮಾರು 154 ವರ್ಷಗಳ ಹಿಂದೆ ಹೋಳಿ ಹಬ್ಬವನ್ನು ಆಚರಿಸಬೇಕೆಂಬ ಉದ್ದೇಶದಿಂದ ಸುಂದರವಾದ ಕಾಮ, ರತಿಯರ ಕಟ್ಟಿಗೆಯ ಮೂರ್ತಿಗಳನ್ನು ಮಾಡಿಸಿದರು. ಕಾಮಣ್ಣನ ಮೂರ್ತಿ ಆರು ಅಡಿ ಎತ್ತರವಿದ್ದು, ಐದು ಅಡಿ ಅಗಲವಿದೆ. ರತಿಯ ಮೂರ್ತಿ ಐದು ಅಡಿ ಎತ್ತರ, ಮೂರು ಅಡಿ ಅಗಲದಲ್ಲಿ ಜಾನಪದ ಪರಂಪರೆಯ ಶೈಲಿಯಲ್ಲಿವೆ. ಮೂರ್ತಿಗಳ ಅಂಗಾಂಗಳನ್ನು ಬೇರೆ ಬೇರೆಯಾಗಿ ಬಿಡಿಸಿ ಮತ್ತೆ ಜೋಡಿಸಬಹುದಾಗಿದೆ. ಹೋಳಿ ಹುಣ್ಣಿಮೆಯಂದು ಈ ಕಾಮಣ್ಣನ ದಹನವಿಲ್ಲ. ಸಾಂಕೇತಿಕವಾಗಿ ಬೇರೆ ಕಾಮಣ್ಣನ ದಹನ ಮಾಡಲಾಗುವುದು. ಹೀಗಾಗಿ 154 ವರ್ಷಗಳಿಂದ ಅದೇ ಕಾಮಣ್ಣ ಸುಸ್ಥಿತಿಯಲ್ಲಿದ್ದಾನೆ.

ವಿಶಿಷ್ಟ ತರಹದ ಕಟ್ಟಿಗೆಯಿಂದ ಮಾಡಿರುವುರಿಂದ ಮೂರ್ತಿಗಳು ಬಿರುಕು ಬಿಟ್ಟಿಲ್ಲ. ಹುಳಗಳ ಪೀಡೆಯೂ ಇಲ್ಲ. ಮೂರ್ತಿಯ ಕಾಯಂ ಕಟ್ಟಡದ ನೆಲಕ್ಕೆ ಟೈಲ್ಸ ಕೂಡಿಸಲಾಗಿದೆ. ಸುತ್ತಲು ಆಕರ್ಷಕ ಮಂಟಪವನ್ನು ನಿರ್ಮಿಸಿದ್ದು ಕಣ್ಮನ ಸೆಳೆಯುವಂತಿದೆ. ಹೋಳಿ ಹಬ್ಬ ಮುಗಿದ ನಂತರ ಮೂರ್ತಿಗಳನ್ನು ಬಟ್ಟೆಯಲ್ಲಿ ಸುತ್ತಿ ಇಡಲಾಗುತ್ತದೆ. ಕಾಮಣ್ಣನಿಗೆ ಪ್ರತಿವರ್ಷ ರೇಷ್ಮೆ ಧೋತರ, ರೇಶ್ವೆ ಜುಬ್ಬ, ಭರ್ಜರಿ ಶಾಲು, ರತಿಗೆ ಚಂದ್ರಕಾಳಿ ಸೀರೆ, ಜರಿಕುಪ್ಪಸ ಹಾಕಲಾಗುತ್ತದೆ. ಹುರಕಡ್ಲಿ ಮನೆತನದವರು ಈ ಮೂರ್ತಿಗಳಿಗೆ ಪ್ರತಿವರ್ಷ ಹೋಳಿಹಬ್ಬದಂದು ಎರಡು ಕಿಲೊ ಭಾರದ ಸಕ್ಕರೆ ಸರವನ್ನು ನೀಡುವರು. ಅಲಂಕೃತ ಮೂರ್ತಿಯನ್ನು ನೋಡಲು ಹೋಳಿಹಬ್ಬದಲ್ಲಿ ಇಡೀ ಊರಿನ ಜನರೇ ಹರಿದು ಬರುತ್ತಾರೆ.

ಈ ವರ್ಷ ಮಾ. 23ರ ರಾತ್ರಿಯಿಂದ ಮಾರ್ಚ್ 25ರ ಸೋಮವಾರ ರಾತ್ರಿ 12ರ ವರೆಗೆ ಇಂತಹ ಅಪರೂಪದ ರತಿ-ಕಾಮರ ಮೂರ್ತಿಗಳನ್ನು ನೋಡುವದೇ ಕಣ್ಣಿಗೆ ಒಂದು ಹಬ್ಬ. ಬಹುಶಃ ಇಂತಹ ಸುಂದರ ಮತ್ತು ಭವ್ಯವಾದ ಮೂರ್ತಿಗಳನ್ನು ಸತತವಾಗಿ 154 ವರ್ಷಗಳಿಂದ ಪೂಜಿಸುತ್ತ ಬಂದಿರುವುದು ಮತ್ತೆಲ್ಲಿಯೂ ಇಲ್ಲ ಎನ್ನಬಹುದು. ಈ ಮೂರ್ತಿಗಳ ಮತ್ತು ಹಬ್ಬದ ಉಸ್ತುವಾರಿಗಾಗಿ ಪಂಚರ ಒಂದು ಕಮಿಟಿಯಿದೆ. ಇಂತಹ ಅಮೋಘ ಪರಂಪರೆಯುಳ್ಳ ಈ ಕಾಮಣ್ಣನನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದೆಂದು ಸದ್ಯ ಕಮಿಟಿಯ ಅಧ್ಯಕ್ಷರಾಗಿರುವ ಈರಣ್ಣ ಆಕಳವಾಡಿ ವಿನಂತಿಸಿದರು.

ಮುಳಮುತ್ತಲ ವಿಶೇಷ

ಭಕ್ತರ ಇಷ್ಟಾರ್ಥ ಸಿದ್ಧಿಸುವ ಕಾಮಣ್ಣ ಎಂದೇ ಪ್ರಸಿದ್ಧಿ ಪಡೆದಿರುವ ಮುಳಮುತ್ತಲ ಕಾಮಣ್ಣನ ಹಬ್ಬ ಈಗಿನಿಂದಲೇ ಶುರುವಾಗಿದೆ. ಮಾ. 21ರಿಂದ 23ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಅಲ್ಲಿ ನಡೆಯುತ್ತಿವೆ. ಈಗಾಗಲೇ ಗ್ರಾಮದ ಬಡಿಗೇರ ಮನೆಯಿಂದ ಅಗಸಿಯ ಮಂಟಪದ ವರೆಗೆ ಕಾಮದೇವರ ಪ್ರತಿಮೆಯನ್ನು ಡೊಳ್ಳು, ಕರಡಿ ಮಜಲು, ಇತರ ಕಲಾಮೇಳಗಳ ಮೆರವಣಿಗೆಯೊಂದಿಗೆ ತರಲಾಗಿದ್ದು, ಪ್ರತಿಷ್ಠಾಪನೆ ಮಾಡಲಾಗಿದೆ. ಮಾ. 22ರ ಶುಕ್ರವಾರ ಬೆಳಗ್ಗೆ 6 ರಿಂದ ಸಾರ್ವಜನಿಕರಿಗೆ ಕಾಮದೇವರ ದರ್ಶನವಿತ್ತು. ಸಂಜೆ 5ಕ್ಕೆ ಪೂಜ್ಯರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಿತು. ಮಾ. 23ರ ಶನಿವಾರ ಬೆಳಗ್ಗೆ 5ಕ್ಕೆ ಕಾಮದಹನ ನೆರವೇರುವುದು.

ಪರೀಕ್ಷೆ

ಭಾರತದಲ್ಲಿ ಆಚರಿಸಲ್ಪಡುವ ಅನೇಕ ಹಬ್ಬ-ಹರಿದಿನ ಉತ್ಸವಗಳಲ್ಲಿ ಹೋಳಿಹಬ್ಬವೂ ಪ್ರಮುಖ ಹಬ್ಬ. ಹೋಳಿಹಬ್ಬ ಸಂತಸದ ಜೊತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಜ್ವರವನ್ನೂ ಸಹ ಹೊತ್ತು ತಂದಿದೆ. ಜನಸ್ನೇಹಿಯಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಲೆಕ್ಕಿಸದೆ ಕಂಡ ಕಂಡಲ್ಲಿ ತಾಸುಗಟ್ಟಲೆ ಹಲಗೆ ಬಾರಿಸದೆ ಸೂಕ್ತವಾಗಿ ಹಲಗೆ ಬಾರಿಸುವುದು ಯೋಗ್ಯ. ಹೋಳಿ ಆಚರಣೆಯು ಸಾಂಸ್ಕೃತಿಕ ಆಧ್ಯಾತ್ಮಿಕ ಬೇರುಗಳನ್ನು ಬಲಪಡಿಸುವಂತಾಗಲಿ. ಹೋಳಿಹಬ್ಬ ಮತ್ತೊಮ್ಮೆ ತನ್ನ ಹಳೇ ವೈಭವವನ್ನು ಕಂಡುಕೊಳ್ಳಲಿ. ಸೌಹಾರ್ದ ಬೆಸೆಯಲಿ.

- ಉದಯ ಯಂಡಿಗೇರಿ, ಸಂಸ್ಕೃತಿ ಚಿಂತಕರು