ಮರಳು, ಕೆಂಪುಕಲ್ಲು ಸಮಸ್ಯೆಗೆ ಬಿಜೆಪಿ ನಿರ್ಲಕ್ಷ್ಯ ಕಾರಣ: ರಮಾನಾಥ ರೈ

| Published : Jul 18 2025, 12:45 AM IST

ಮರಳು, ಕೆಂಪುಕಲ್ಲು ಸಮಸ್ಯೆಗೆ ಬಿಜೆಪಿ ನಿರ್ಲಕ್ಷ್ಯ ಕಾರಣ: ರಮಾನಾಥ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗೆ ಸರ್ಕಾರದ ನೀತಿ ಕಾರಣ ಇಲ್ಲ. ಬಿಜೆಪಿ ಶಾಸಕರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಮರಳು ಮತ್ತು ಕೆಂಪು ಕಲ್ಲು ಕಾನೂನಾತ್ಮಕವಾಗಿ ಜನರಿಗೆ ಸಿಗಬೇಕು. ಈ ಸಮಸ್ಯೆ ಪರಿಹರಿಸಲು ಶಾಸಕರು ಜವಾಬ್ದಾರಿಯುತವಾಗಿ ಕೆಲಸ ಮಾಡುವುದು ಬಿಟ್ಟು ರಾಜಕೀಯ ಮಾಡಿ ಬೀದಿಯಲ್ಲಿ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಲ್ಲಿ ಮರಳು ಮತ್ತು ಕೆಂಪುಕಲ್ಲು ಸಮಸ್ಯೆಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ. ಬಿಜೆಪಿ ಅವಧಿಯಲ್ಲಿ ಮರಳುಗಾರಿಕೆಗೆ ಪರ್ಮಿಟನ್ನೇ ನೀಡದೆ ನಿರ್ಲಕ್ಷ್ಯ ವಹಿಸಿದ್ದರು. ಕೆಂಪು ಕಲ್ಲು ಪರವಾನಗಿ ನೀಡುವಲ್ಲೂ ಆಸಕ್ತಿ ವಹಿಸಿಲ್ಲ. ಈಗ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗೆ ಸರ್ಕಾರದ ನೀತಿ ಕಾರಣ ಇಲ್ಲ. ಬಿಜೆಪಿ ಶಾಸಕರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಮರಳು ಮತ್ತು ಕೆಂಪು ಕಲ್ಲು ಕಾನೂನಾತ್ಮಕವಾಗಿ ಜನರಿಗೆ ಸಿಗಬೇಕು. ಈ ಸಮಸ್ಯೆ ಪರಿಹರಿಸಲು ಶಾಸಕರು ಜವಾಬ್ದಾರಿಯುತವಾಗಿ ಕೆಲಸ ಮಾಡುವುದು ಬಿಟ್ಟು ರಾಜಕೀಯ ಮಾಡಿ ಬೀದಿಯಲ್ಲಿ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದರು.

ನಾನು ಉಸ್ತುವಾರಿ ಸಚಿವನಾಗಿದ್ದಾಗ ಸಿಆರ್‌ಝಡ್‌ ವ್ಯಾಪ್ತಿಯಲ್ಲೂ ರಾಜ್ಯ ಮತ್ತು ಕೇಂದ್ರದ ಅನುಮತಿ ಪಡೆದು ಮರಳುಗಾರಿಕೆಗೆ ಅವಕಾಶ ಕಲ್ಪಿಸಿದ್ದೆ. ನಂತರ ಪರಿಸರ ಇಲಾಖೆ ಅನುಮತಿ ದೊರೆಯದೆ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಂತಿತು. ಆಗ ನಾನ್‌ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು ಮರಳು ಬ್ಲಾಕ್‌ಗಳನ್ನು ಗುರುತಿಸಿ, ನನ್ನ ಅವಧಿಯಲ್ಲಿ ಪರ್ಮಿಟ್‌ಗಳನ್ನು ನೀಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ನಾನ್‌ ಸಿಆರ್‌ಝಡ್‌ನಲ್ಲೂ ಪರ್ಮಿಟ್‌ ನೀಡಲು ಆಸಕ್ತಿ ವಹಿಸಲಿಲ್ಲ. ಇದರ ಪರಿಣಾಮ ಅಕ್ರಮ ಮರಳುಗಾರಿಕೆ ದಂಧೆ ದೊಡ್ಡ ಮಟ್ಟದಲ್ಲಿ ಶುರುವಾಗಿತ್ತು ಎಂದರು.ಅಕ್ರಮ ದಂಧೆಗೆ ಬಿಜೆಪಿ ಸರ್ಕಾರವೇ ಪ್ರಮುಖ ಕಾರಣ. ಅವರ ಸರ್ಕಾರವಿದ್ದಾಗಲೂ ಕೆಲಸ ಮಾಡದೆ ಈಗಲೂ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡದೆ, ಪ್ರತಿಭಟನೆ ನಡೆಸಿ ಕಾಂಗ್ರೆಸ್‌ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ರಮಾನಾಥ ರೈ ಆಕ್ಷೇಪಿಸಿದರು.

ಕೆಂಪು ಕಲ್ಲು ರಾಯಲ್ಟಿ ಕೇರಳದಲ್ಲಿ 32 ರು. ಇದ್ದರೆ ರಾಜ್ಯದಲ್ಲಿ 280 ರು. ಇದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಗುರುತಿಸಿ ಇಡಲಾಗಿರುವ ಮರಳು ಬ್ಲಾಕ್‌ಗಳಲ್ಲಿ ಪರ್ಮಿಟ್‌ ನೀಡುವ ಕಾರ್ಯ ಆದರೆ ಸಮಸ್ಯೆ ನೀಗಲಿದೆ. ಬಿಜೆಪಿ ಶಾಸಕರಿಗೆ ಜನರ ಕಾಳಜಿ ಇದ್ದರೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿ ಎಂದರು.

ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಬ್ಲಾಕ್‌ ಅಧ್ಯಕ್ಷರಾದ ಅಬ್ದುಲ್‌ ಸಲೀಂ, ಪ್ರಕಾಶ್‌ ಸಾಲ್ಯಾನ್‌, ಶುಭೋದಯ ಆಳ್ವ, ಜಾರ್ಜ್‌ ಇದ್ದರು.