ಕನ್ನಡಪ್ರಭ ವಾರ್ತೆ ಬೆಳಗಾವಿ ಅನೈತಿಕ ಸಂಬಂಧದ ವಿಚಾರದ ಬಗ್ಗೆ ತಕರಾರು ಮಾಡಿದ ಪತಿಯನ್ನು ಸೋದರ ಮಾವನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿ, ಯಾರಿಗೂ ಗೊತ್ತಾಗದಂತೆ ಶವವನ್ನು ಜಮೀನಿನಲ್ಲಿ ಹೂತು ಹಾಕಿರುವ ಪ್ರಕರಣವನ್ನು ಖಡಕಲಾಟ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅನೈತಿಕ ಸಂಬಂಧದ ವಿಚಾರದ ಬಗ್ಗೆ ತಕರಾರು ಮಾಡಿದ ಪತಿಯನ್ನು ಸೋದರ ಮಾವನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿ, ಯಾರಿಗೂ ಗೊತ್ತಾಗದಂತೆ ಶವವನ್ನು ಜಮೀನಿನಲ್ಲಿ ಹೂತು ಹಾಕಿರುವ ಪ್ರಕರಣವನ್ನು ಖಡಕಲಾಟ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ಖಡಕಲಾಟ ಗ್ರಾಮದ ರಾಘು ಸಿದ್ದಪ್ಪ ಗಾವಡೆ (40) ಕೊಲೆಯಾದ ವ್ಯಕ್ತಿ. ಈತನ ಪತ್ನಿ ಬಂಗಾರಿ ರಾಘು ಗಾವಡೆ(35) ಹಾಗೂ ಆಕೆಯ ಸೋದರ ಮಾವ ರಾಮಾ ಮಾಯಪ್ಪ ರಾಣಗೆ (48) ಬಂಧಿತ ಆರೋಪಿಗಳು ಎಂದು ತಿಳಿಸಿದರು.

ರಾಘು ಗಾವಡೆ ಕಳೆದ 5-6 ತಿಂಗಳಿಂದ ಕಾಣುತ್ತಿರಲಿಲ್ಲ. ಈ ಕುರಿತು ಪತ್ನಿ ಬಂಗಾರಿಯನ್ನು ವಿಚಾರಿಸಿದಾಗ, ಆತ ಕಬ್ಬು ಕಡಿಯಲು ಅಥವಾ ಕುರಿ ಕಾಯಲು ಹೋಗಿದ್ದಾನೆ ಎಂದು ಹೇಳುತ್ತಿದ್ದಳು. ದೂರುದಾರರ ತಾಯಿಯ ಮರಣದ ಸಂದರ್ಭದಲ್ಲೂ ರಾಘು ಮನೆಗೆ ಬಾರದಿರುವುದು ಹಾಗೂ ಮಳೆಗಾಲ ಆರಂಭವಾದರೂ ವಾಪಸ್ ಮನೆಗೆ ಬರದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಘು ಕುಟುಂಬದವರು ಹಾಗೂ ಸಂಬಂಧಿಸಕರು ಬಂಗಾರಿಯನ್ನು ತೀವ್ರ ವಿಚಾರಿಸಿದಾಗ, ತಾನು ಮತ್ತು ರಾಮಾ ಮಾಯಪ್ಪ ರಾಣಗೆ ಸೇರಿ ರಾಘುವನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಜಮೀನಿನಲ್ಲಿ ಹೂತು ಹಾಕಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಗಿ ಎಂದು ಎಸ್ಪಿ ತಿಳಿಸಿದರು.

ಖಡಕಲಾಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದ್ದರು.

ಬಾಕ್ಸ್

ತಪ್ಪು ಒಪ್ಪಿಕೊಂಡ ಬಂಗಾರಿ

ಆರೋಪಿಗಳಿಬ್ಬರು ಅನೈತಿಕ ಸಂಬಂಧ ಹೊಂದಿರುವ ವಿಚಾರ ರಾಘುವಿಗೆ ತಿಳಿದಿತ್ತು. ಈ ವಿಚಾರವಾಗಿ ಆತ ಆರೋಪಿತರೊಂದಿಗೆ ತಂಟೆ-ತಕರಾರು ಮಾಡುತ್ತಿದ್ದ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಫೆ.7ರಂದು ರಾತ್ರಿ ರಾಘು ಮನೆಯಲ್ಲಿ ಮಲಗಿದ್ದಾಗ ಆತನ ಕೈ-ಕಾಲುಗಳನ್ನು ಕಟ್ಟಿ ಹಲ್ಲೆ ನಡೆಸಿದ್ದಾರೆ.

ನಂತರ ಟಾಟಾ ಏಸ್ ವಾಹನದಲ್ಲಿ ರಾಘುನನ್ನು ಆತನ ಜಮೀನಿಗೆ ಕರೆದೊಯ್ದು ಮತ್ತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಕೃತ್ಯ ಯಾರಿಗೂ ಗೊತ್ತಾಗಬಾರದು ಹಾಗೂ ಸಾಕ್ಷ್ಯ ನಾಶಪಡಿಸಬೇಕು ಎಂಬ ಉದ್ದೇಶದಿಂದ ಶವವನ್ನು ಜಮೀನಿನಲ್ಲಿ ಹೂತು ಹಾಕಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಹೇಳಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಟಾಟಾ ಏಸ್ ಗೂಡ್ಸ್ ವಾಹನ, ಬೈಕ್‌, ಗುದ್ದಲಿ, ಸಲಿಕೆ, ಬುಟ್ಟಿ ಹಾಗೂ ಹಗ್ಗವನ್ನು ವಶಪಡಿಸಿಕೊಳ್ಳಲಾಗಿದೆ.