ಧಾರವಾಡ:

ಕೇಂದ್ರ ಸರ್ಕಾರದ ಅನುದಾನ ಬರುವುದಕ್ಕೂ, ಧಾರವಾಡ ಪ್ರತ್ಯೇಕ ಪಾಲಿಕೆಗೂ ಸಂಬಂಧ ಏನು?. ಧಾರವಾಡ ಪ್ರತ್ಯೇಕ ಪಾಲಿಕೆ ಕುರಿತು ಬಿಜೆಪಿ ನಾಯಕರು ಏತಕ್ಕೆ ಇಚ್ಛಾಶಕ್ತಿ ತೋರುತ್ತಿಲ್ಲ. ಇಲ್ಲಿನ ಜನರ, ಈ ಪ್ರದೇಶದ ಅಭಿವೃದ್ಧಿ ಬಗ್ಗೆ ಬಿಜೆಪಿ ನಾಯಕರು ಏಕೆ ಒಲವು ತೋರುತ್ತಿಲ್ಲವೆಂದು ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆ ಅಧ್ಯಕ್ಷ ಮನೋಜ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಜಿಲ್ಲೆಯ ಬಿಜೆಪಿ ನಾಯಕರು ವಿರೋಧಿಸುತ್ತಿರುವುದು ಸರಿಯಲ್ಲ. ಪ್ರತ್ಯೇಕ ಪಾಲಿಕೆಯ ರಚನೆಗೆ 6 ವರ್ಷದಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಹೋರಾಟದ ಫಲವಾಗಿ ವಿಧಾನಸಭೆ ಒಪ್ಪಿಗೆ ಬಳಿಕ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ವರ್ಷವೇ ಗಳೆದಿದೆ. ಪ್ರತ್ಯೇಕ ಪಾಲಿಕೆಗೆ ರಾಜ್ಯಪಾಲರ ಅಂಕಿತ ಬಿತ್ತೋ? ಇಲ್ಲವೋ? ಎಂಬ ಬಗ್ಗೆ ರಾಜ್ಯ ಸರ್ಕಾರವೂ ತಿಳಿಸಲಿಲ್ಲ, ರಾಜ್ಯಭವನವೂ ಮಾಹಿತಿ ನೀಡಲಿಲ್ಲ. ಇದೀಗ ಏಕಾಏಕಿ ಧಾರವಾಡ ಪ್ರತ್ಯೇಕ ಪಾಲಿಕೆ ಬೇಡ ಎಂಬ ಅಪಸ್ವರ ಎದ್ದಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.

ರಾಜ್ಯ ಸರ್ಕಾರ ಪ್ರತ್ಯೇಕ ಪಾಲಿಕೆ ಘೋಷಿಸಿದ ಬಳಿಕ ತಾವೇ ಈ ಕಾರ್ಯ ಮಾಡಿಸಿದ್ದಾಗ ಬ್ಯಾನರ್ ಹಾಕಿಸಿಕೊಂಡ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಇದೀಗ ವಿರೋಧ ಮಾಡುವುದು ಏಕೆ? ಎಂದು ಪ್ರಶ್ನಿಸಿದರು. ಅಲ್ಲದೇ, ವೇದಿಕೆಯೊಂದಿಗೆ ಸಕಾರತ್ಮವಾಗಿಯೂ ಸ್ಪಂದಿಸದ ಬಗ್ಗೆ ದೂರಿದರು.

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ವಿಷಯದಲ್ಲಿ ಮಧ್ಯಪ್ರವೇಶಿಸಿ ಧಾರವಾಡದ ನಾಗರಿಕರಿಗೆ ನ್ಯಾಯ ಒದಗಿಸುವಂತೆ ರಾಜ್ಯಪಾಲರಿಗೆ, ಪ್ರಧಾನಿಗೆ ಹಾಗೂ ರಾಷ್ಟ್ರಪತಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಪ್ರತ್ಯೇಕ ಪಾಲಿಕೆ ರಚನೆಗೆ ಅಂಕಿತ ಹಾಕುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ರಾಜ್ಯಪಾಲರಿಗೆ ಒತ್ತಡ ಹಾಕದಿದ್ದರೆ ಮುಂಬರುವ ದಿನಗಳಲ್ಲಿ ಉಭಯ ನಾಯಕರ ಮನೆ ಮುಂಭಾಗ ಧರಣಿ ನಡೆಸುವುದಾಗಿ ಎಚ್ಚರಿಸಿದರು.


ಸುದ್ದಿಗೋಷ್ಠಿಯಲ್ಲಿ ಹೋರಾಟ ವೇದಿಕೆ ಉಪಾಧ್ಯಕ್ಷ ಡಾ.ಷಡಕ್ಷರಯ್ಯ, ಕಾರ್ಯದರ್ಶಿ ಡಾ. ಎಂ.ಬಿ.ಕಟ್ಟಿ ಇದ್ದರು.