ಸಾರಾಂಶ
ಸಿಂಧನೂರಿನ ಸಂಕೇತ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡಿದ್ದ ರಕ್ತ ದಾನಿಗಳ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು
ಸಿಂಧನೂರು: ರಕ್ತದಾನ ಮಾಡುವದರಿಂದ ಒಬ್ಬರ ಜೀವ ಉಳಿಸಬಹುದು. ದೇವರ ಸೃಷ್ಟಿಯಲ್ಲಿ ದಾನ ಮಹತ್ವದ್ದು, ಅದರಲ್ಲಿ ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠ ಎಂದು ಅನ್ನದಾನೇಶ್ವರ ಆಸ್ಪತ್ರೆ ಮುಖ್ಯಸ್ಥ ಡಾ.ಬಿ.ಎನ್.ಪಾಟೀಲ್ ಹೇಳಿದರು.
ನಗರದ ಸಂಕೇತ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡಿದ್ದ ರಕ್ತ ದಾನಿಗಳ ದಿನಾಚರಣೆಯಲ್ಲಿ ಮಾತನಾಡಿ, ಅಪಘಾತದಲ್ಲಿ ಸಿಲುಕಿ ತೀವ್ರ ರಕ್ತಸ್ರಾವವಾಗಿ ಜೀವನ್ಮರಣದ ಜೊತೆ ಹೋರಾಡುವಾಗ ರಕ್ತ ದಿವ್ಯ ಸಂಜೀವಿನಿಯಾಗಿ ಕಾಣುತ್ತದೆ. ರಕ್ತದಾನ ಮಾಡುವದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. 18 ವರ್ಷದಿಂದ 60 ವರ್ಷದವರೆಗೂ ರಕ್ತದಾನ ಮಾಡಬಹುದು. ವರ್ಷಕ್ಕೆ ನಾಲ್ಕರಿಂದ ಆರು ಬಾರಿ ರಕ್ತದಾನ ಮಾಡಬಹುದು. ಪ್ರತಿಯೊಬ್ಬರು ರಕ್ತದಾನ ಮಾಡಲು ಮುಂದೆ ಬರಬೇಕಾಗಿದೆ ಸಲಹೆ ನೀಡಿದರು.ಸಂಕೇತ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಅನಿಲರಾಜ ವಕೀಲ ಮಾತನಾಡಿ, ರಕ್ತದಾನ ಮಾಡಿದರೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎನ್ನುವ ತಪ್ಪು ಕಲ್ಪನೆ ಜನರಲ್ಲಿವೆ. ರಕ್ತದಾನ ಮಾಡುವದರಿಂದ ಉತ್ತಮ ಆರೋಗ್ಯ ಹೊಂದಬಹುದು. ಎಲ್ಲರೂ ರಕ್ತದಾನ ಮಾಡಿ ಅಮೂಲ್ಯ ಜೀವಿ ಉಳಿಸಿ ಎಂದರು.
ಅನ್ನದಾನೇಶ್ವರ ಸ್ವಯಂ ಪ್ರೇರಿತ ರಕ್ತಕೇಂದ್ರದ ಕಾರ್ಯದರ್ಶಿ ಪಂಪಾಪತೆಪ್ಪ, ಎನ್ಎಸ್ಎಸ್ ಅಧಿಕಾರಿ ರವಿಕುಮಾರ ಇದ್ದರು. ಇದೇ ವೇಳೆ ಅನೇಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.