ಸಾರಾಂಶ
ಬೆಂಗಳೂರು : ವಿಧಾನಸೌಧದ ಆವರಣದಲ್ಲಿ ಇನ್ನು ಮುಂದೆ ಪ್ರತಿ ವರ್ಷ ಪುಸ್ತಕ ಮೇಳವನ್ನು ಆಯೋಜಿಸಲು ಸರ್ಕಾರದಿಂದ ಅಗತ್ಯ ಸಹಕಾರ ಮತ್ತು ಧನಸಹಾಯವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ವಿಧಾನಸೌಧದಿಂದ ಇದೇ ಮೊದಲ ಬಾರಿಗೆ ಆಯೋಜಿಸಿರುವ ಮೂರು ದಿನಗಳ ಪುಸ್ತಕ ಮೇಳಕ್ಕೆ ಗುರುವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು. ವಿಧಾನಸೌಧದಲ್ಲಿ ಪುಸ್ತಕ ಮೇಳ ಆಯೋಜಿಸುವುದು ಒಳ್ಳೆಯ ಕೆಲಸ. ಪ್ರತಿ ವರ್ಷ ಪುಸ್ತಕ ಮೇಳ ಆಯೋಜನೆಗೆ ಸಭಾಧ್ಯಕ್ಷ ಮತ್ತು ಸಭಾಪತಿ ಅವರು ಬಯಸುವ ಎಲ್ಲ ರೀತಿಯ ಸಹಾಯ, ಸಹಕಾರವನ್ನು ಸರ್ಕಾರ ಒದಗಿಸುತ್ತದೆ ಎಂದು ತಿಳಿಸಿದರು.
ಜನರ ತೆರಿಗೆ ಹಣವನ್ನು ಯಾವ್ಯಾವುದಕ್ಕೆ ಖರ್ಚು ಮಾಡಬೇಕೆಂದು ಶಾಸಕರು ತೀರ್ಮಾನಿಸುತ್ತಾರೆ. ಹಾಗಾಗಿ, ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಪ್ರತಿ ವರ್ಷ ವಿಧಾನಸೌಧದಲ್ಲಿ ಪುಸ್ತಕ ಮೇಳ ಆಯೋಜನೆಗೆ ಅಗತ್ಯ ಧನಸಹಾಯ ನೀಡುತ್ತೇವೆ. ಜ್ಞಾನ ವಿಕಾಸದ ಜೊತೆಗೆ ಪುಸ್ತಕ ಮತ್ತು ಸಾಹಿತ್ಯದ ಓದು ಮನುಷ್ಯನಲ್ಲಿ ಹೆಚ್ಚೆಚ್ಚು ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ. ಪ್ರತಿಯೊಬ್ಬರೂ ಪುಸ್ತಕಗಳನ್ನು ಖರೀದಿಸಿ ಓದುವ ಅಭ್ಯಾಸ ಹೆಚ್ಚಿಸಿಕೊಳ್ಳಬೇಕು. ಮಕ್ಕಳು ಇತ್ತೀಚೆಗೆ ಮೊಬೈಲ್, ಟಿವಿ, ಸೋಷಿಯಲ್ ಮೀಡಿಯಾ ಚಟಗಳಿಗೆ ಒಳಗಾಗುತ್ತಿದ್ದಾರೆ. ಅದನ್ನು ತಪ್ಪಿಸಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅದ್ಯಾಕೋ ನನಗೆ ಓದುವ ಹವ್ಯಾಸ ಬೆಳೆಯಲಿಲ್ಲ: ಡಿಕೆಶಿ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಪುಸ್ತಕಗಳ ಓದು ಬಹಳ ಮುಖ್ಯ, ಅದು ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಆದರೆ, ನನಗೆ ಅದ್ಯಾಕೋ ಓದುವ ಹವ್ಯಾಸ ಬೆಳೆಯಲಿಲ್ಲ. ಎಲ್ಲವೂ ಅನುಭವದ ಮೇಲೆ ನಡೆದುಕೊಂಡು ಹೋಗುತ್ತಿದೆ. ಈಗಂತೂ ಚಾಟ್ ಜಿಪಿಟಿ ಮತ್ತಿತರ ತಂತ್ರಜ್ಞಾನ ಬಂದ ಮೇಲೆ ಬೇಕಾದ ವಿಷಯದ ಜ್ಞಾನವನ್ನು ಬೆರಳತುದಿಯಲ್ಲೇ ಪಡೆಯಬಹುದಾಗಿದೆ. ಆದರೆ, ನಮಗೆ ಗೊತ್ತಿಲ್ಲದ ಎಷ್ಟೋ ಮಾಹಿತಿ, ವಿಚಾರಗಳನ್ನು ತಿಳಿದುಕೊಳ್ಳಲು ಪುಸ್ತಕಗಳ ಓದು ಅಗತ್ಯವಾಗುತ್ತದೆ. ಹಾಗಾಗಿ, ವಿಧಾನಸೌಧದಲ್ಲಿ ಇಂತಹ ಪುಸ್ತಕ ಮೇಳ ಆಯೋಜಿಸುವುದು ಒಳ್ಳೆಯದು. ಇದರಿಂದ ವಿಧಾನಸೌಧಕ್ಕೂ ಜನರು ಬಂದಂತಾಗುತ್ತದೆ. ಪುಸ್ತಕಗಳಲ್ಲಿನ ಜ್ಞಾನದ ಭಂಡಾರವನ್ನೂ ಮುಂದಿನ ಜನಾಂಗಕ್ಕೆ ತಲುಪಿಸಲು ಸಹಾಯವಾಗುತ್ತದೆ ಎಂದರು.
ಪುಸ್ತಕ ಹಬ್ಬವಾಗುವ ನಿರೀಕ್ಷೆ:
ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಮಾ.2ರವರೆಗೆ ಪುಸ್ತಕ ಮೇಳ ನಡೆಯಲಿದ್ದು, ಒಟ್ಟು 151 ಪುಸ್ತಕ ಮಳಿಗೆಗಳಿಗೆ ಯಾವುದೇ ಶುಲ್ಕವಿಲ್ಲದೆ ಸ್ಟಾಲ್ಗಳನ್ನು ನೀಡಿ ಪುಸ್ತಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಶುಕ್ರವಾರದಿಂದ ಮುಕ್ತ ಅವಕಾಶ ಇರಲಿದೆ. ಪುಸ್ತಕ ಮೇಳಕ್ಕೆ ಸರ್ಕಾರ ಎಲ್ಲ ಸಹಕಾರ ನೀಡಿದೆ. ಇದು ಮುಂದೆ ರಾಜ್ಯದ ಬಹುದೊಡ್ಡ ಪುಸ್ತಕ ಹಬ್ಬವಾಗಿ ಪರಿವರ್ತನೆಯಾಗುವ ನಿರೀಕ್ಷೆ ಇದೆ ಎಂದರು.
ಶಾಸಕರು ಸಕ್ರಿಯವಾಗಿ ಮೇಳದಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಕ್ಷೇತ್ರಾಭಿವೃದ್ಧಿ ನಿಧಿಯಿಂದ 2 ಲಕ್ಷ ರು.ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಅವರ ಕ್ಷೇತ್ರದ ಸಾರ್ವಜನಿಕ ಗ್ರಂಥಾಲಯಗಳು, ಶಾಲೆಗಳಿಗೆ ನೀಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.
ಸಾಹಿತಿಗಳಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ, ಗೋವಾದ ಸಾಹಿತಿ ದಾಮೋದರ ಮೌಜೊ, ಸಾಹಿತಿಗಳಾದ ವಸುಧೇಂದ್ರ, ಪ್ರಶಾಂತ್ ಮಾರ್ಥ, ಬೋಳುವಾರು ಮಹಮದ್ ಕುಞ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಶಕ್ತ ಪ್ರಕಾಶಕರಿಂದ ಪುಸ್ತಕ ಖರೀದಿಸಿ: ಕುಂಞ್
ಹಿರಿಯ ಸಾಹಿತಿ ಬೋಳುವಾರು ಮಹಮದ್ ಕುಂಞ್ ಮಾತನಾಡಿ, ಗ್ರಂಥಾಲಯಗಳಿಗೆ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸುವ ಕೆಲಸ 2021ರಿಂದ ನಿಂತು ಹೋಗಿದೆ. ಇದರಿಂದ ಅಶಕ್ತ ಪ್ರಕಾಶಕರು ಸಮಸ್ಯೆಗೆ ಸಿಲುಕಿದ್ದಾರೆ. ಹಾಗಾಗಿ, ಸರ್ಕಾರ ಕೂಡಲೇ ಪುಸ್ತಕಗಳನ್ನು ಖರೀದಿಸುವ ಕೆಲಸ ಪುನಾರಂಭಿಸಬೇಕು ಎಂದು ಆಗ್ರಹಿಸಿದರು. ಯು.ಟಿ.ಖಾದರ್ ಸ್ಪೀಕರ್ ಆದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ತಮಾಷೆಗಳಾದವು. ಸಭಾಧ್ಯಕ್ಷ ಯಾರೂ ಆಗಬಹುದು. ಆದರೆ, ವಿಧಾನಸೌಧದಲ್ಲಿ ಇಂತಹ ಪುಸ್ತಕ ಮೇಳ ಆಯೋಜಿಸುವ ಆಲೋಚನೆ ಆ ಸ್ಥಾನದಲ್ಲಿ ಕುಳಿತ ಎಲ್ಲರಿಗೂ ಹೊಳೆಯುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.