ಎಸ್ಸಿ,ಎಸ್ಪಿ, ಟಿಎಸ್ಪಿ ಯೋಜನೆಯಡಿ ಹಣ ದುರ್ಬಳಕೆ ಖಂಡಿಸಿ ಬಿಎಸ್ಪಿ ಪ್ರತಿಭಟನೆ

| Published : Aug 14 2024, 12:52 AM IST

ಎಸ್ಸಿ,ಎಸ್ಪಿ, ಟಿಎಸ್ಪಿ ಯೋಜನೆಯಡಿ ಹಣ ದುರ್ಬಳಕೆ ಖಂಡಿಸಿ ಬಿಎಸ್ಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಎಸ್‌ಸಿಎಸ್ಪಿ ಮತ್ತು ಟಿಎಸ್‌ಪಿ ಕಾಯ್ದೆಯಲ್ಲಿ ರೂಪಿಸಿರುವ ಯೋಜನೆಗಳು ನೇರವಾಗಿ ಎಸ್‌ಸಿ ಎಸ್‌ಟಿಗಳಿಗೆ ತಲುಪುವಂತೆ ಮಾಡಬೇಕು. ಈ ಮೀಸಲು ಹಣವನ್ನು ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡಿರುವವರ ವಿರುದ್ಧ ಸದರಿ ಕಾಯ್ದೆಯಂತೆ ಶಿಕ್ಷೆಗೆ ಗುರಿಪಡಿಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟ ಕೋಟ್ಯಂತರ ರು. ಹಣವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹೋಬಳಿಯ ನಾಡ ಕಚೇರಿ ಆವರಣಲ್ಲಿ ಸೇರಿದ ಬಿಎಸ್ಪಿ ಹೋಬಳಿ ಘಟಕದ ಕಾರ್ಯಕರ್ತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣ ದುರ್ಬಳಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಹ.ನಾ.ವೀರಭದ್ರಯ್ಯ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ಯೋಜನೆಗಳ ಮುಖಾಂತರ ಸಬಲರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಎಸ್‌ಸಿಎಸ್‌ಪಿ, ಟಿಎಸ್‌ಪಿ, ಕಾಯ್ದೆಯನ್ನು ರೂಪಿಸಿತು. ಇದರ ಅಡಿಯಲ್ಲಿ ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಮೀಸಲಿಡುವುದಕ್ಕಾಗಿ ಈ ಅಧಿನಿಯಮ ಅವಕಾಶ ಮಾಡಿಕೊಟ್ಟಿದೆ ಎಂದರು.

ಈ ಯೋಜನೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿರುವುದೆಂದು ಆಶಾಭಾವನೆ ಉಂಟಾಗಿತ್ತು. ಆದರೆ, ರಾಜ್ಯವನ್ನಾಳಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಅಧಿನಿಯಮದ ಆಶಯಗಳನ್ನು ಜಾರಿಮಾಡದೆ ಗಾಳಿಗೆ ತೂರಿರುವುದನ್ನು ಖಂಡಿಸಿದರು.

ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಎಸ್‌ಸಿಎಸ್ಪಿ ಮತ್ತು ಟಿಎಸ್‌ಪಿ ಕಾಯ್ದೆಯಲ್ಲಿ ರೂಪಿಸಿರುವ ಯೋಜನೆಗಳು ನೇರವಾಗಿ ಎಸ್‌ಸಿ ಎಸ್‌ಟಿಗಳಿಗೆ ತಲುಪುವಂತೆ ಮಾಡಬೇಕು. ಈ ಮೀಸಲು ಹಣವನ್ನು ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡಿರುವವರ ವಿರುದ್ಧ ಸದರಿ ಕಾಯ್ದೆಯಂತೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಖಾತೆಗೆ ಹಿಂತಿರುಗಿಸುವಂತೆ ಸರ್ಕಾರಕ್ಕೆ ತಾವು ಸೂಚನೆ ನೀಡಬೇಕೆಂದು ಎಂದು ಆಗ್ರಹಿಸಿ ತಾಲೂಕು ಅಧ್ಯಕ್ಷ ನಂಜುಂಡ ಸ್ವಾಮಿ ಅವರು ಉಪ ತಹಸೀಲ್ದಾರ್ ಸುನೀಲ್ ಮೂಲ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು

ಪ್ರತಿಭಟನೆಯಲ್ಲಿ ಬಿಎಸ್ಪಿ ಮಳವಳ್ಳಿ ತಾಲೂಕ ಅಧ್ಯಕ್ಷ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಸುಧಾಕರ್, ಮುಖಂಡರಾದ ಸಿದ್ದಲಿಂಗ ಮೂರ್ತಿ, ಆನಂದ್ ಕುಮಾರ್, ಕೆ.ಬಿ.ಚನ್ನಪ್ಪ, ಲೋಕೇಶ್ ಗೌಡ, ಅಂದಾನಿ, ಮಹೇಶ್, ಗಿರೀಶ್ ಕುಮಾರ್, ಕೆ.ಎನ್.ಗೋವಿಂದ, ತಮ್ಮಯ್ಯ, ಆನಂದ್, ವೆಂಕಟೇಶ್, ಇತರರು ಇದ್ದರು.