ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬುದ್ಧನ ಪ್ರೀತಿ, ಬಸವಣ್ಣನ ಸಮಾನತೆ ಹಾಗೂ ಅಂಬೇಡ್ಕರ್ ರಚಿಸಿದ ಸಂವಿಧಾನದ ಬಲದಿಂದ ಜಾತಿ, ಮತ, ಪಂಥಗಳಿಂದ ಮುಕ್ತ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಪಟ್ಟಣದ ಜೆಎಂಎಫ್ಸಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಸುಧೀರ್ ಹೇಳಿದರು.ಪಟ್ಟಣದ ಜೆಎಂಎಫ್ಸಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಯುವ ಜನರು ಹಾಗೂ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಹಾಗೂ ವೈಜ್ಞಾನಿಕ ಮನೋಭಾವನೆ ಮೂಡಿಸಿ ಅಸಮಾನತೆಗಳನ್ನು ಹೊಡೆದೋಡಿಸಿದಾಗ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಬಸವಣ್ಣನವರ ವಿಚಾರಗಳ ಮಂಥನದಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ವಚನಗಳ ಸಾರ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಅರಿತು ಹೆಜ್ಜೆ ಹಾಕಿದರೆ ಆರೋಗ್ಯವಂತ ಸಮಾಜ, ನೈತಿಕ ಮೌಲ್ಯಗಳನ್ನು ಉಳಿಸಿ ಬೆಳೆಸಬಹುದು ಎಂದು ತಿಳಿಸಿದರು.ಸಾಮಾಜಿಕ ಹೋರಾಟಗಾರ ಪ್ರೊ. ಹುಲ್ಲುಕೆರೆ ಮಹದೇವ ಮಾತನಾಡಿ, ಬುದ್ಧ- ಬಸವ- ಅಂಬೇಡ್ಕರ್ ಅವರ ತತ್ವ, ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿವೆ. ವಿದ್ಯಾರ್ಥಿಗಳು ಹಾಗೂ ಯುವ ಜನರು ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೌಢ್ಯಗಳ ನಿರ್ಮೂಲನೆಗೆ ಸಂಘಟಿತ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ದೇವರಾಜು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ ಫಲವೇ ನಮಗೆ ಕೊಡುಗೆಯಾಗಿ ದೊರಕಿರುವ ಸಂವಿಧಾನ. ಇದರಿಂದ ಶೋಷಿತರು, ಹಿಂದುಳಿದ ವರ್ಗಗಳ ಜನರು ಸೇರಿದಂತೆ ಪರಿಶಿಷ್ಟ ಜಾತಿ, ವರ್ಗಗಳ ಜನರಿಗೆ ನ್ಯಾಯ ಬದ್ಧ ಸೌಲಭ್ಯಗಳು ಹಾಗೂ ಕಾನೂನುಗಳು ಸಿಗುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ವಿ.ಅರ್ಪಿತಾ, ವಿ.ಪಾರ್ವತಿ, ಹಿರಿಯ ವಕೀಲರಾದ ಬಿ.ಎಲ್.ದೇವರಾಜು, ಜಿ.ಆರ್. ಅನಂತರಾಮಯ್ಯ, ಕೆ.ಎನ್. ನಾಗರಾಜು, ಸಹಾಯಕ ಸರ್ಕಾರಿ ಅಭಿಯೋಜಕರಾದ ನಂಜುಂಡಸ್ವಾಮಿ, ಹರೀಶ್, ವೀಣಾ, ಶಿರಸ್ತೇದಾರರಾದ ಪ್ರಕಾಶ್, ಗೌಡಣ್ಣ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜೇಗೌಡ, ಉಪಾಧ್ಯಕ್ಷ ಪುರುಷೋತ್ತಮ್, ಜಂಟಿ ಕಾರ್ಯದರ್ಶಿ ದೊಡ್ಡಯ್ಯ, ಕಾರ್ಯಕ್ರಮದ ಆಯೋಜಕರಾದ ಗಂಜಿಗೆರೆ ಲೋಕೇಶ್, ಶೀಳೆನೆರೆ ರಘು, ಅವಿನಾಶ್, ಹಿರಿಯ ವಕೀಲರಾದ ಬಿ.ಸಿ.ದಿನೇಶ್, ಎನ್.ಆರ್.ರವಿಶಂಕರ್, ಸಿ.ಎನ್.ಮೋಹನ್, ಎಚ್.ರವಿ, ಎಸ್.ಡಿ.ಸರೋಜಮ್ಮ, ಪುರ ಮಂಜುನಾಥ್ ಸೇರಿ ನೂರಾರು ವಕೀಲರು ಭಾಗವಹಿಸಿದ್ದರು.