ಕನ್ನಡಪ್ರಭವಾರ್ತೆ ನಾಪೋಕ್ಲು

ನಾವೆಲ್ಲರೂ ಒಂದೇ ಎಂಬ ಮನೋಭಾವದೊಂದಿಗೆ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ ಹೇಳಿದರು.

ಇಲ್ಲಿಗೆ ಸಮೀಪದ ಚೆರಿಯಪರಂಬು ಉರುಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಪ್ರಪಂಚದ ಹಲವೆಡೆ ಯುದ್ಧ ನಡೆಯುತ್ತಿದೆ. ಯುದ್ಧ ನಿಲ್ಲಬೇಕು. ಎಲ್ಲರೂ ಮಾನವೀಯತೆಯನ್ನು ಮೆರೆಯಬೇಕು. ಸುಖ ಶಾಂತಿ ನೆಮ್ಮದಿಯ ಸಮಾಜ ನಿರ್ಮಾಣವಾಗಬೇಕು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಾಮರಸ್ಯ ಸಾರಬೇಕು . ಪ್ರಪಂಚದ ಎಲ್ಲರೂ ಮಾನವೀಯತೆಯನ್ನು ಸಾರಿ ಒಂದಾಗಿ ಬಾಳಬೇಕು ಎಂದರು.

ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಹ್ಮಾನ್ ವಲಿವುಲ್ಲಾಹಿ ಹಾಗೂ ಇತರ ಮಹಾನುಭಾವರ ವಾರ್ಷಿಕ ಉರುಸ್ ಕಾರ್ಯಕ್ರಮದಲ್ಲಿ ಮಸೀದಿಯ ಆಡಳಿತ ಮಂಡಳಿ ವತಿಯಿಂದ ಶಾಸಕ ಎ ಎಸ್ ಪೊನ್ನಣ ಅವರನ್ನು ಸನ್ಮಾನಿಸಲಾಯಿತು. ಬಳಿಕ ಧರ್ಮ ಗುರುಗಳಿಂದ ಪಾರಾಯಣ ಜರುಗಿತು. ಇದಕ್ಕೂ ಮೊದಲು ಮಕ್ಕಳ ದಫ್‌ ಕಾರ್ಯಕ್ರಮದೊಂದಿಗೆ ಗೌರವ ಪೂರ್ವಕವಾಗಿ ಶಾಸಕ ಪೊನ್ನಣ್ಣ ಅವರನ್ನು ಸ್ವಾಗತಿಸಲಾಯಿತು. ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಪಿ. ಎ. ಅಹಮದ್ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಪೋಕ್ಲು ಪಟ್ಟಣದ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಂ.ಎಚ್. ಅಬ್ದುಲ್‌ ರೆಹಮಾನ್ , ಗ್ರಾಮ ಪಂಚಾಯಿತಿ ಸದಸ್ಯರಾದ ಕೆಎ ಇಸ್ಮಾಯಿಲ್, ಮಾಚೇಟಿರ ಕುಸು ಕುಶಾಲಪ್ಪ, ಮಹಮ್ಮದ್ ಟಿ. ಎ. ಮಸೀದಿಯ ಖತೀಬರಾದ ಮುಹಮ್ಮದ್ ಶಫೀಕ್ ಅಲಿ , ಎಂ ಎ ಮನ್ಸೂರ್ ಆಲಿ ಮತ್ತಿತರರಿದ್ದರು.