ದೇಶದ ಉಜ್ವಲ ಭವಿಷ್ಯ ನಿರ್ಮಾಣಕಾರರಾಗಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುಲು ನಿಟ್ಟಿನಲ್ಲಿ ಸರ್ಕಾರಗಳು ಜಾರಿಗೆ ತಂದ ಕಾರ್ಯಕ್ರಮಗಳಲ್ಲಿ ಅಕ್ಷರ ದಾಸೋಹ ಸಹ ಒಂದಾಗಿದೆ.

ಗಜೇಂದ್ರಗಡ: ಅನ್ನ ಹಾಗೂ ಅಕ್ಷರಕ್ಕೆ ಅವಿನಾಭಾವ ಸಂಬಂಧವಿದ್ದು, ಸ್ವಚ್ಛತೆ ಹಾಗೂ ಸುರಕ್ಷತೆಯಿಂದ ಅಡುಗೆ ತಯಾರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ನೀಡುವ ಮಹತ್ತರವಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಕಾಂಬೋಗಿ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪೌಷ್ಟಿಕ ಆಹಾರ ಗುಣಾತ್ಮಾಕ ಶಿಕ್ಷಣಕ್ಕೆ ಸಹಕಾರಿ, ಅಕ್ಷರ ದಾಸೋಹ ಕಾರ್ಯಕ್ರಮ ಅಡಿ ಶನಿವಾರ ನಡೆದ ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದ ಉಜ್ವಲ ಭವಿಷ್ಯ ನಿರ್ಮಾಣಕಾರರಾಗಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುಲು ನಿಟ್ಟಿನಲ್ಲಿ ಸರ್ಕಾರಗಳು ಜಾರಿಗೆ ತಂದ ಕಾರ್ಯಕ್ರಮಗಳಲ್ಲಿ ಅಕ್ಷರ ದಾಸೋಹ ಸಹ ಒಂದಾಗಿದೆ. ಯೋಜನೆಯ ಯಶಸ್ಸಿಗೆ ಅಡುಗೆ ಸಿಬ್ಬಂದಿಯ ಪಾತ್ರ ಮುಖ್ಯವಾದದ್ದು. ದೇಶವನ್ನು ಸಶಕ್ತಗೊಳಿಸಲು ತಯಾರಾಗುತ್ತಿರುವ ಭಾವಿ ಪ್ರಜೆಗಳಿಗೆ ಗುಣಮಟ್ಟದ ಆಹಾರ ಸಿದ್ಧಗೊಳಿಸಿ ಅವರಿಗೆ ಪೂರಕ ಶಕ್ತಿ ನೀಡುವ ಕಾರ್ಯದಲ್ಲಿ ಅಡುಗೆ ಸಿಬ್ಬಂದಿ ಕಾರ್ಯ ಮಹತ್ವದ್ದು. ಹೀಗಾಗಿ ಅಡುಗೆ ಮನೆಯಲ್ಲಿ ಸುರಕ್ಷಿತವಾಗಿ ಸಿಲಿಂಡರ್ ಬಳಕೆ ಜತೆಗೆ ಅಡುಗೆ ಸಾಮಾಗ್ರಿಗಳನ್ನು ಕಾಯ್ದಿರಿಸುವ ಜಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದರು. ಪ್ರಾಸ್ತಾವಿಕವಾಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್.ಎನ್. ನಾಯ್ಕರ ಮಾತನಾಡಿ, ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳು ಎಂದು ಪರಿಗಣಿಸಿ ಸುರಕ್ಷತೆಗೆ ಜತೆಗೆ ಶುಚಿತ್ವ ಕಾಪಾಡಿಕೊಂಡು ಗುಣಮಟ್ಟದ ಆಹಾರ ಸಿದ್ಧಪಡಿಸಬೇಕು. ಹೀಗಾಗಿ ಅಡುಗೆ ಸಿಬ್ಬಂದಿಗೆ ಕಾರ್ಯಕ್ಷಮತೆ ಮತ್ತು ಹೊಸ ವ್ಯವಸ್ಥೆಗಳ ಅಳವಡಿಕೆ ಮತ್ತು ಸುಧಾರಣೆಗೆ ನಡೆಸುತ್ತಿರುವ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದ್ದು, ತಾಲೂಕಿನ ೪೫೦ ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಬಸವರಾಜ ಕಡಬಿನ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಸ್.ಕೆ. ಸರಗಣಾಚಾರಿ, ಬಿ.ಎಸ್. ಅಣ್ಣಿಗೇರಿ, ಎ.ಕೆ. ಒಂಟಿ, ಅಗ್ನಿಶಾಮಕ ಠಾಣೆಯ ಮಂಜುನಾಥ ಮೇಲ್ಮನಿ, ಡಾ. ಶರಣು ಗಾಣಗೇರ, ಕೇಶಮ್ಮ ಲಮಾಣಿ, ಶಿವಕುಮಾರ, ಎಸ್.ಎಸ್. ಪಸಾರದ ಸೇರಿ ಇತರರು ಇದ್ದರು.