ಜಾತಿ ಬೆನ್ನ ಹತ್ತಬ್ಯಾಡ್ರಿ, ಧರ್ಮ ಬಿಟ್ಟು ನಡಿಬ್ಯಾಡ್ರಿ..!

| Published : Apr 25 2025, 11:53 PM IST

ಸಾರಾಂಶ

ಜಾತಿ ಜಾತಿ ಅಂತ ಹೊಡಿದಾಡ ಬ್ಯಾಡ್ರಿ ಇರುವ ಮೂರು ದಿನದಾಗ ಪ್ರೀತಿ ಸ್ನೇಹದಿಂದ ಇರಿ. ಹಸದಾಗ ಅನ್ನ ಹಾಕೋನೆ, ಹೆತ್ತ ತಂದೆ ತಾಯಿನೇ ದೇವರು ಇದ್ದಂಗಾ ಅಂತ ತಿಳಿದುಕೊಳ್ಳಿ

ಅಣ್ಣಿಗೇರಿ: ಜಾತಿ ಜಾತಿ ಅಂತ ಹಿಂದ ಬೆನ್ನ ಹತ್ತಬ್ಯಾಡ್ರಿ, ಧರ್ಮ ಬಿಟ್ಟು ನಡಿಬ್ಯಾಡ್ರಿ..!

ಇದು ಇಲ್ಲಿನ ಗುದ್ನೇಶ್ವರ ಸ್ವಾಮೀಜಿ ಐದನೆಯ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಜಾನಪದ ಆಶುಕವಿ ಸಿದ್ದಪ್ಪ ಬಿದರಿ, ಹಾಡಿನ ಮೂಲಕವೇ ತಮ್ಮ ಭಾಷಣ ಶುರು ಮಾಡಿದ ಪರಿ.

ಜಾತಿ ಜಾತಿ ಅಂತ ಹೊಡಿದಾಡ ಬ್ಯಾಡ್ರಿ ಇರುವ ಮೂರು ದಿನದಾಗ ಪ್ರೀತಿ ಸ್ನೇಹದಿಂದ ಇರಿ. ಹಸದಾಗ ಅನ್ನ ಹಾಕೋನೆ, ಹೆತ್ತ ತಂದೆ ತಾಯಿನೇ ದೇವರು ಇದ್ದಂಗಾ ಅಂತ ತಿಳಿದುಕೊಳ್ಳಿ. ಇಂತಹ ಮಹಾತ್ಮರ ಆದರ್ಶ ನೀತಿಗಳನ್ನು ಪಾಲಿಸೋಣ ಎಂದು ತಮ್ಮದೇ ಶೈಲಿಯಲ್ಲಿ ಇಂದಿನ ಪರಿಸ್ಥಿತಿ ಬಗ್ಗೆ ಹಾಡು ಹಾಡಿ ವಿವರಿಸಿದರು. ರೈತನಿಗೆ ಅತ್ಯುನ್ನತ ಸ್ಥಾನ ಸಿಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಫಕೀರೇಶ್ವರ ಸ್ವಾಮೀಜಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಎಷ್ಟೇ ಬೆಳೆದರೂ ಶರಣರ ಚಾರಿತ್ರ್ಯ ಮೌಲ್ಯಗಳು ಇವತ್ತಿನ ಕಾಲ ಘಟ್ಟಕ್ಕೆ ಅತ್ಯಗತ್ಯವಾಗಿವೆ ಇದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದರು.

ಸಮಾಜ ಸೇವಕ ವಿರೇಶ ಶಾನಬೋಗರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ, ಉಮೇಶ್ ಹೆಬಸೂರು, ಪ್ರಕಾಶ ಅಳವಂಡಿ, ಯಲ್ಲಪ್ಪ ಪೂಜಾರ, ಗೌರಮ್ಮ ಬಡ್ನಿ, ಚಂದ್ರಶೇಖರ್ ಕೊಟ್ಟೂರು, ಪ್ರಕಾಶ ಹಳ್ಳಿ ಸೇರಿದಂತೆ ಮಠದ ಸಮಿತಿ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು ನಾಗರಿಕರು ಉಪಸ್ಥಿತರಿದ್ದರು.

ನೀಲಗುಂದ ಪ್ರಭುಲಿಂಗ ದೇವರು ನೇತೃತ್ವದ ಹನ್ನೊಂದು ದಿನಗಳ ಈ ಅದ್ಭುತ ಕಾರ್ಯಕ್ರಮ ನಡೆಯುತ್ತಿದೆ.ಇಲ್ಲಿ ನಡೆಯುತ್ತಿರುವ ಪ್ರವಚನಗಳು ಮನುಷ್ಯನನ್ನು ಚಿಂತನೆಗೆ ಹಚ್ಚುತ್ತವೆ. ಜನರು ಬರೀ ಕೇಳಿ ಹೋದರೆ ಸಾಲದು ಜೀವನದಲ್ಲಿ ತತ್ವಾದರ್ಶ ಅಳವಡಿಸಿಕೊಳ್ಳಬೇಕು ಎಂದು ಮುಖಂಡ ಪ್ರಮೋದ ಕೃಷ್ಣಮೂರ್ತಿ ದೇಶಪಾಂಡೆ ಹೇಳಿದ್ದಾರೆ.