ತುಮಕೂರು ಜಿಲ್ಲೆ ಸೇರಿದಂತೆ ಏಳು ಜಿಲ್ಲೆಗಳ ಜನರ ಕುಡಿಯುವ ನೀರಿನ ಬವಣೆ ತೀರಿಸುವ ಎತ್ತಿನಹೊಳೆ ಯೋಜನೆಯ ಶೇ 90 ರಷ್ಟು ಕಾಮಗಾರಿ ಪೂರ್ಣಗೊಂಡ ನಂತರ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಿ ಪಡಿಸುತ್ತಿದ್ದು,ಈ ಬಗ್ಗೆ ಕೇಂದ್ರದ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲು ಡಿಸೆಂಬರ್ 13-14 ರಂದು ರಾಜ್ಯ ಸರ್ಕಾರ ದೆಹಲಿಗೆ ನಿಯೋಗ ಕೊಂಡೊಯ್ಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಜಿಲ್ಲೆ ಸೇರಿದಂತೆ ಏಳು ಜಿಲ್ಲೆಗಳ ಜನರ ಕುಡಿಯುವ ನೀರಿನ ಬವಣೆ ತೀರಿಸುವ ಎತ್ತಿನಹೊಳೆ ಯೋಜನೆಯ ಶೇ 90 ರಷ್ಟು ಕಾಮಗಾರಿ ಪೂರ್ಣಗೊಂಡ ನಂತರ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಿ ಪಡಿಸುತ್ತಿದ್ದು,ಈ ಬಗ್ಗೆ ಕೇಂದ್ರದ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲು ಡಿಸೆಂಬರ್ 13-14 ರಂದು ರಾಜ್ಯ ಸರ್ಕಾರ ದೆಹಲಿಗೆ ನಿಯೋಗ ಕೊಂಡೊಯ್ಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರಲ್ಲಿ ಆರಂಭವಾದ ಎತ್ತಿನಹೊಳೆ ಯೋಜನೆಯ ಶೇ90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. ಈಗಕೇಂದ್ರ ಸರ್ಕಾರ ಯೋಜನೆಗೆ ನಿಗದಿಗಿಂತ ಹೆಚ್ಚು ಭೂಮಿ ಬಳಕೆ ಮಾಡಲಾಗಿದೆ. ಹಸಿರು ಪೀಠದ ಅನುಮತಿ ಪಡೆದಿಲ್ಲ, ಇನ್ನಿತರ ಅನಗತ್ಯ ತರಕಾರುಗಳನ್ನು ತೆಗೆದು, ಯೋಜನೆ ವಿಳಂಭವಾಗಲು ಕಾರಣವಾಗುತ್ತದೆ. ಎತ್ತಿನ ಹೊಳೆ ಯೋಜನೆ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆಯಾಗಿದ್ದು, ಜನರ ಕುಡಿಯುವ ನೀರಿನ ಬವಣೆ ತೀರಿಸಲು ಇರುವ ಮಹತ್ವದ ಯೋಜನೆಯಾಗಿದೆ. ಇದಕ್ಕೆ ಸಹಕಾರ ನೀಡುವ ಬದಲು, ಕೇಂದ್ರ ಸರ್ಕಾರ ಯೋಜನೆಯನ್ನುತಡೆಯಲು ಯತ್ನಿಸುತ್ತಿರುವುದು ಸರಿಯಲ್ಲ.ಇದರ ವಿರುದ್ಧ ರಾಜ್ಯದ ಎಲ್ಲಾ ಸಂಸದರು ಧ್ವನಿ ಎತ್ತಬೇಕಾಗಿದೆ ಎಂದರು. ತುಮಕೂರು ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಲ್ಲಿ ಹೇಮಾವತಿ, ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಮಹತ್ವದ ಪಾತ್ರ ವಹಿಸುತ್ತವೆ. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, 5300 ಕೋಟಿ ರು. ಬಿಡುಗಡೆ ಮಾಡುವುದಾಗಿ 2023-24ನೇ ವರ್ಷದ ಬಜೆಟ್‌ನಲ್ಲಿ ಹಣಕಾಸು ಸಚಿವರು ಘೋಷಣೆ ಮಾಡಿದ್ದರು. ಆದರೆ ಇದುವರೆಗೂ ಒಂದು ನಯಾಪೈಸೆ ನೀಡಿಲ್ಲ. ಯೋಜನೆಯನ್ನು ರಾಜ್ಯ ಸರ್ಕಾರವೇ ತನ್ನ ಸಂಪನ್ಮೂಲದಲ್ಲಿಯೇ ನಡೆಸುತ್ತಿದೆ. ಎತ್ತಿನ ಹೊಳೆ ಯೋಜನಾ ವೆಚ್ಚ ಸುಮಾರು 23,252 ಕೋಟಿ ರುಗಳಾಗಿದೆ. ಕೇಂದ್ರ ಸರ್ಕಾರ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ ನಂತರ, ಈ ರೀತಿಯ ತರಕಾರು ತೆಗೆದು, ಅನಗತ್ಯವಾಗಿ ತನಿಖಾ ಸಮಿತಿಗಳನ್ನು ಕಳುಹಿಸಿ, ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿ, ಕರ್ನಾಟಕದ ಬಗೆಗಿನ ತನ್ನ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ. ಇದರ ವಿರುದ್ಧ ಯೋಜನಾ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲೆಗಳ ಜನರು ಒಗ್ಗೂಡಿ ಹೋರಾಟ ರೂಪಿಸುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಕೇಳಿರುವ ಪ್ರಶ್ನೆಗಳಿಗೆ ಈಗಾಗಲೇ ವಿಶ್ವೇಶ್ವರಯ್ಯ ಜಲ ಅಭಿವೃದ್ದಿ ನಿಗಮದಿಂದ ಸಮರ್ಪಕ ಉತ್ತರವನ್ನು ನೀಡಿದ್ದರೂ ಸಹ, ಯೋಜನೆಗೆ ಅನುಮತಿ ನೀಡದೆ ಅನಗತ್ಯ ವಿಳಂಭ ಮಾಡುತ್ತಿದೆ. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರು ರಾಜ್ಯದಎಲ್ಲಾ ಸಂಸದರ ಸಭೆಕರೆದಾಗ, ವಿವಿಧ ಕಾರಣ ಹೇಳಿ ಯಾವೊಬ್ಬ ಬಿಜೆಪಿ ಸಂಸದರು ಸಭೆಗೆ ಹಾಜರಾಗಿಲ್ಲ. ಇದು ರಾಜ್ಯದ ಬಗ್ಗೆ ಬಿಜೆಪಿ ಪಕ್ಷಕ್ಕೆಇರುವ ಕಾಳಜಿಯನ್ನು ತೋರಿಸುತ್ತದೆ. ಈಗಲಾದರೂ ಬಿಜೆಪಿ ಸಂಸದರು, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಎತ್ತಿನಹೊಳೆ ಯೋಜನೆಗೆ ಇರುವ ಅಡ್ಡಿ, ಆತಂಕಗಳನ್ನು ನಿವಾರಿಸಿ, ತಮ್ಮ ಪಾಲಿನ ಅನುದಾನ ನೀಡುವ ಮೂಲಕ, ಯೋಜನೆ ಪೂರ್ಣಗೊಳ್ಳಲು ಸಹಕಾರ ನೀಡಬೇಕು. ಇಲ್ಲದಿದ್ದಲ್ಲಿ ಯೋಜನಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಜಿಲ್ಲೆಗಳ ಜನರು ಅನಿವಾರ್ಯವಾಗಿ ಬೀದಿಗಿಳಿದು, ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸಬೇಕಾಗುತ್ತದೆಎಂದು ಮುರುಳೀಧರ ಹಾಲಪ್ಪ ಎಚ್ಚರಿಸಿದರು. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾರಾಜಣ್ಣ ಮಾತನಾಡಿ, ಬಯಲು ಸೀಮೆಗೆ ಸೇರಿದ ತುಮಕೂರು, ಹಾಸನ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ ಜಿಲ್ಲೆಗಳಿಗೆ ಎತ್ತಿನ ಹೊಳೆ ಕುಡಿಯುವ ನೀರಿನ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಕಲ್ಲು ಹಾಕುವ ಕೆಲಸ ಮಾಡಬಾರದು. ಇಂದು ಪರಿಸರ ಇಲಾಖೆಯಿಂದ ಎನ್.ಓ.ಸಿ ಪಡೆದಿಲ್ಲ. ಹೆಚ್ಚು ಭೂಮಿ ಬಳಕೆ ಎಂದು ತಕರಾರು ತೆಗೆಯುವ ಕೇಂದ್ರ ಸರ್ಕಾರ ೧೨ ವರ್ಷದಿಂದ ಏನು ಮಾಡುತ್ತಿತ್ತು. ಈ ರೀತಿಯ ಮಲತಾಯಿ ಧೋರಣೆ ಸರಿಯಲ್ಲ. ಕೂಡಲೇ ಕೇಂದ್ರ ಸರ್ಕಾರ ಎತ್ತಿನಹೊಳೆ ಯೋಜನೆಗೆ ಅನುಮೋದನೆ ನೀಡುವ ಜೊತೆಗೆ, ಅನುದಾನ ನೀಡುವ ಮೂಲಕ ಸಹಕಾರ ನೀಡಬೇಕು. ಇಲ್ಲದಿದ್ದರೆಉಗ್ರ ಹೋರಾಟ ಅನಿವಾರ್ಯ ಎಂದರು.ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ರೇವಣಸಿದ್ದಯ್ಯ,ಅಶೋಕ್ ರಾಜವರ್ಧನ್,ರೈತ ಮುಖಂಡರಾದ ರಾಚಪ್ಪ, ಕೆ.ಆರ್.ವೆಂಕಟೇಶ್ ಇವರುಗಳು ಎತ್ತಿನ ಹೊಳೆ ಯೋಜನೆ ಹಾಗೂ ಕೇಂದ್ರದ ಅಡ್ಡಿ ಕುರಿತಂತೆ ಮಾತನಾಡಿದರು. ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.