ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರದ ಆಮದು ನೀತಿಯಿಂದಾಗಿ ರೈತರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಿ.ರವೀಂದ್ರನ್ ಹೇಳಿದರು.ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಆಯೋಜಿಸಿದ್ದ ಸಾಮ್ರಾಜ್ಯಶಾಹಿ ದೇಶಗಳ ಸುಂಕ ಕಡಿತದ ಒತ್ತಡ ಮತ್ತು ಕರ್ನಾಟಕ ರಾಜ್ಯದ ರೈತರ ಮೇಲಿನ ದುಷ್ಪರಿಣಾಮಗಳ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಅಗತ್ಯ ವಸ್ತುಗಳನ್ನು ಉತ್ಪಾದನೆ ಮಾಡುತ್ತಿದ್ದರೂ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಶೇ.60 ರಷ್ಟು ಅಡುಗೆ ಎಣ್ಣೆಯನ್ನು ಬೇರೆ ದೇಶಗಳಿಂದ ಆಮದಾಗುತ್ತಿದೆ. ಸ್ಥಳೀಯವಾಗಿಯೇ ನಾವು ಸೂರ್ಯಕಾಂತಿ, ಕಡಲೆ ಬೀಜಗಳನ್ನು ನಮ್ಮ ದೇಶದಲ್ಲಿಯೇ ಬೆಳೆಯುತ್ತಿದ್ದೇವೆ. ಇಷ್ಟಿದ್ದರೂ ಎಣ್ಣೆ ಆಮದು ಅವಶ್ಯಕತೆ ಇದಿಯೇ ಎಂದು ಪ್ರಶ್ನಿಸಿದರು.ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ. ಕರ್ನಾಟಕದಲ್ಲೂ ಸಾವಿರಾರು ರೈತರು ಆತ್ಮಹತ್ಯೆ ದಾರಿ ತುಳಿದಿದ್ದಾರೆ. 2014ರಿಂದೀಚೆಗೆ ಭಾರತದಲ್ಲಿ 1.44 ಲಕ್ಷದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ರೈತರು ಶೇ.86 ರಷ್ಟು ಸಾಲದಲ್ಲಿ ಸಿಲುಕಿದ್ದಾರೆ. ಗಂಭೀರವಾದ ಕೃಷಿ ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದರು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ಅಮೆರಿಕಾ ದೇಶ ಅಡಿಕೆ ಎಲೆಗಳಿಂದ ತಯಾರಿಸಿದ ತಟ್ಟೆ, ಲೋಟ ಇತರೆ ವಸ್ತುಗಳನ್ನು ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂದು ಹೇಳಿ ನಿಷೇಧಿಸಿದೆ. ಏಕಪಕ್ಷೀಯವಾಗಿ ಅಮೆರಿಕಾದಲ್ಲಿ ಅಡಿಕೆ ತಟ್ಟೆ ಬಳಸಬಾರದೆಂದು ಹೇಳಿ ಅವರ ದೇಶದ ಸ್ವಂತ ಉದ್ಯಮಕ್ಕೇನೋ ನಮ್ಮ ದೇಶದ ಅಡಿಕೆ ಉದ್ಯಮಕ್ಕೆ ನಿಷೇಧ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕದಿಂದ ವಾರ್ಷಿಕ ಒಟ್ಟು 35 ಸಾವಿರ ಟನ್ ನಷ್ಟು ಜರ್ಮನ್, ಶ್ರೀಲಂಕಾ, ಅಮೆರಿಕಾಕ್ಕೆ ನೇರವಾಗಿ ಅಡಿಕೆ ಎಲೆಗಳಿಂದ ತಯಾರಾಗಿದ್ದ ತಟ್ಟೆಗಳು ರಫ್ತಾಗುತ್ತಿತ್ತು. ವಿಶ್ವಮಟ್ಟದಲ್ಲಿ ನಾವು ಒಪ್ಪಂದ ಮಾಡಿಕೊಂಡಿದ್ದಕ್ಕೆ ನಿಷೇಧ ಹೇರುವಂತಹ ಸಮಸ್ಯೆ ಎದುರಿಸುತ್ತಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯ ತೋರಿಸುತ್ತದೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯು.ಬಸವರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ರಾಜ್, ಜನವಾದಿ ಮಹಿಳಾ ಸಂಘಟನೆಯ ದೇವಿ, ಮುಖಂಡರಾದ ಎಂ.ಪುಟ್ಟಮಾದು, ಲಿಂಗರಾಜುಮೂರ್ತಿ, ಪ್ರಭಾ ಭಾಗವಹಿಸಿದ್ದರು.