ಸಾರಾಂಶ
ರೌಡಿಶೀಟರ್ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವ ದಲಿತ ಯುವಕ ಅನೀಶ್ ಹಾಗೂ ಲಕ್ಷ್ಮಣ್ ಅವರ ಕನಕಪುರ ಮನೆಗೆ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ವಾಣಿ ಶಿವರಾಮ್ ಹಾಗೂ ಛಲವಾದಿ ಮಹಾ ಸಂಸ್ಥಾನ ಗುರುಪೀಠ ಚಿತ್ರದುರ್ಗದ ಶ್ರೀ ಬಸವ ನಾಗಿದೇವ ಶರಣ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು.
-ಚಿತ್ರದುರ್ಗದ ಶ್ರೀ ಬಸವ ನಾಗಿದೇವ ಶರಣ ಸ್ವಾಮೀಜಿಗಳಿಂದ ಸಾಂತ್ವನ
ಕನಕಪುರ: ರೌಡಿಶೀಟರ್ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವ ದಲಿತ ಯುವಕ ಅನೀಶ್ ಹಾಗೂ ಲಕ್ಷ್ಮಣ್ ಮನೆಗೆ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ವಾಣಿ ಶಿವರಾಮ್ ಹಾಗೂ ಛಲವಾದಿ ಮಹಾ ಸಂಸ್ಥಾನ ಗುರುಪೀಠ ಚಿತ್ರದುರ್ಗದ ಶ್ರೀ ಬಸವ ನಾಗಿದೇವ ಶರಣ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು.ವಾಣಿ ಶಿವರಾಮ್ ಮಾತನಾಡಿ, ಇಂತಹ ಘಟನೆಗಳು ಸಮಾಜದಲ್ಲಿ ನಡೆಯಬಾರದು. ಪ್ರತಿಯೊಬ್ಬ ಮನುಷ್ಯನು ಸಹನೆ, ತಾಳ್ಮೆ, ನೆಮ್ಮದಿಯಿಂದ ಬದುಕಬೇಕು. ಒಂದು ಸಮುದಾಯದ ಮೇಲೆ ಮತ್ತೊಂದು ಸಮುದಾಯ ದ್ವೇಷ ಬೆಳೆಸಿಕೊಳ್ಳುವುದು ಸರಿಯಲ್ಲ. ಅನೀಶ್ ಕುಟುಂಬ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ನೊಂದ ಕುಟುಂಬಕ್ಕೆ ಛಲವಾದಿ ಮಹಾಸಭಾ ಬೆಂಬಲವಾಗಿದೆ. ಅ ಕುಟುಂಬಕ್ಕೆ ನ್ಯಾಯ ದೊರಕಿಸಲು ಹೋರಾಡುತ್ತದೆ. ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಅವರ ಕುಟುಂಬಕ್ಕೆ ನೀಡಬೇಕು.ದಾರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.
ಚಿತ್ರದುರ್ಗದ ಛಲವಾದಿ ಮಹಾ ಪೀಠದ ಶ್ರೀ ಬಸವ ನಾಗಿದೇವ ಶರಣ ಸ್ವಾಮಿ ಮಾತನಾಡಿ, ನೊಂದ ಕುಟುಂಬ ಯಾವುದೇ ಆಸೆ ಆಮಿಷಗಳಿಗೆ ಮಣಿಯಬಾರದು, ರಾಜಕೀಯ ಒತ್ತಡ ತಂದು ರಾಜಿ ಸಂಧಾನಕ್ಕೆ ಮಣಿಯಬಾರದು. ಈ ಘಟನೆಗೆ ಸರ್ಕಾರ ವಿಶೇಷ ನ್ಯಾಯಾಲಯ ಸ್ಥಾಪಿಸಿ ಆರೋಪಿಗಳಿಗೆ ತ್ವರಿತ ಶಿಕ್ಷೆಗೆ ಸೂಚಿಸಬೇಕು. ಸರ್ಕಾರಿ ಅಧಿಕಾರಿಗಳು ರಾಜಿ ಸಂಧಾನಕ್ಕೆ ಪ್ರಯತ್ನಿಸಿದರೆ ಅಂತಹವರು ಸರ್ಕಾರಿ ಹುದ್ದೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಸಿದರು.ಇದೇ ವೇಳೆ ನೊಂದ ಕುಟುಂಬಕ್ಕೆ ಛಲವಾದಿ ಮಹಾಸಭಾ ವತಿಯಿಂದ 25 ಸಾವಿರ ರು. ಚೆಕ್ ವಿತರಿಸಿದರು.
ಈ ವೇಳೆ ಛಲವಾದಿ ಮಹಾಸಭಾದ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಬಸವರಾಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಜಂಟಿ ಕಾರ್ಯದರ್ಶಿ ಟಿ.ಆರ್.ನಾಗೇಶ್, ಸಂಘಟನಾ ಕಾರ್ಯದರ್ಶಿ ಎಂ.ಹಂಸರಾಜ್, ಖಜಾಂಚಿ ಮೈಕೊ ನಾಗರಾಜ್, ಸದಸ್ಯರಾದ ಎಸ್.ಉಮೇಶ್, ಎಸ್.ಸಿದ್ದರಾಜ, ಎಂ.ವಸಂತ, ಬಿ.ಮಹದೇವಯ್ಯ, ಬಿ.ಗಂಗಾಧರ, ರಾಜಪ್ಪ, ಕೆ.ಪರಶುರಾಮ್, ಎಚ್.ಶಿವಪ್ಪ, ಎಚ್.ವಿ.ಕೃಷ್ಣಪ್ಪ ಹಾಗೂ ಜಿಲ್ಲಾಧ್ಯಕ್ಷ ಅಂಚಿಪುರ ಶೇಖರ್, ಬಾನಂದೂರು ಶಿವಕುಮಾರ್, ಬಿಡದಿ ಸದಾಕುಮಾರ್, ಶಂಕರ್ ಗೋಪಹಳ್ಳಿ, ಬಿವಿಎಸ್ ನವೀನ್, ಛಲವಾದಿ ನವೀನ್, ಮಳಗಾಳು ಗ್ರಾಮದ ಗೋಪ ಮತ್ತು ಚಲುವಯ್ಯ ಉಪಸ್ಥಿತರಿದ್ದರು.