- ರಾಜ್ಯವನ್ನು ಡ್ರಗ್ಸ್‌ ಮುಕ್ತಗೊಳಿಸಲು ಸಿಎಂ, ಗೃಹ ಸಚಿವರ ಕಟ್ಟುನಿಟ್ಟಿನ ಆದೇಶ । ಡ್ರಗ್ಸ್‌ ಉತ್ಪಾದನೆ, ಸೇವನೆ, ಮಾರಾಟ ಅಪರಾಧ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

‘ಮುಖ್ಯಮಂತ್ರಿಗಳು, ಗೃಹ ಸಚಿವರ ಆಶಯದಂತೆ ಚಾಮರಾಜನಗರ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಮಾಡುವುದು ನನ್ನ ಧ್ಯೇಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಭಾಗವಹಿಸಿ ಮಾತನಾಡಿ, ‘ಮುಖ್ಯಮಂತ್ರಿಗಳು ಗೃಹಮಂತ್ರಿಗಳು ಒಂದೇ ಒಂದು ಆಶಯ ಎಂದರೆ ಮಾದಕದ್ರವ್ಯ ಮುಕ್ತ ಕರ್ನಾಟಕ ಮಾಡಬೇಕೆನ್ನುವುದು ಅವರ ಆಶಯವಾಗಿದೆ’ ಎಂದರು.


‘ಮಾದಕ ದ್ರವ್ಯ ಮುಕ್ತ ಕರ್ನಾಟಕಕ್ಕೆ ನಮಗೆ ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ಮಾದಕ ದ್ರವ್ಯ ಬೆಳೆಯುವುದಾಗಲಿ, ಸಾಗಾಣಿಕೆ ಮಾಡುವುದಾಗಲಿ, ಸೇವಿಸುವುದಾಗಲಿ ಅಕ್ಷಮ್ಯ ಅಪರಾಧವಾಗಿದೆ. ಅಂಥಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು ವರ್ಷಗಳ ಒಡನಾಟವಿದೆ. ನಾನೂ ಇದೇ ಜಿಲ್ಲೆಯವನಾಗಿರುವುದರಿಂದ ಇಲ್ಲಿ ಕೆಲಸ ಮಾಡಲು ಖುಷಿಯಿದೆ. ಮಾನಸಿಕವಾಗಿ ಒಂದು ತೃಪ್ತಿ ಇದೆ’ ಎಂದರು.

ಈ ಜಿಲ್ಲೆಯು ತುಂಬ ಚಿರಪರಿಚಿತವಾಗಿದ್ದು, ಹಿಂದುಳಿದ ಜಿಲ್ಲೆಯ ಜನರಿಗೆ ಒಂದು ಒಳ್ಳೆಯ ಸೇವೆ ಮಾಡುವುದಕ್ಕೆ ಅವಕಾಶಗಳಿವೆ’ ಎಂದರು.

ಜಿಲ್ಲೆಯು ಶೇ.50 ಅರಣ್ಯ ಪ್ರದೇಶವನ್ನು ಹೊಂದಿದ್ದು, ಮಾನವ-ಪ್ರಾಣಿ ಸಂಘರ್ಷದಿಂದ ತಕ್ಷಣಕ್ಕೆ ಕಾನೂನು ಸುವ್ಯವಸ್ಥೆ ಸಮಸ್ಯೆ ಬರುತ್ತದೆ. ಅದಕ್ಕೋಸ್ಕರ ಜಿಲ್ಲಾಡಳಿತ, ಅರಣ್ಯ ಇಲಾಖೆ ಜತೆ ಅನೇಕ ಸಭೆ ಮಾಡಲಾಗಿದೆ. ಅಲ್ಲದೆ ನಮ್ಮ ಡಿಜಿ, ಐಜಿ ಕೂಡ ಮಾನವ-ಪ್ರಾಣಿ ಸಂಘರ್ಷದಲ್ಲಿ ತಕ್ಷಣಕ್ಕೆ ಏನು ಕ್ರಮ ಕೈಗೊಳ್ಳಬೇಕು, ಯಾವ ಇಲಾಖೆ ಜೊತೆಗೆ ಸಹಕಾರ ತೆಗೆದುಕೊಳ್ಳಬೇಕು ಎಂದು ಒಂದು ಆದೇಶ ಕೂಡ ಇದೆ. ಪ್ರಕಾರ ಈಗಾಗಲೇ ಎಲ್ಲ ಮಾನವ-ಪ್ರಾಣಿ ಸಂಘರ್ಷ ನಿಯಂತ್ರಿಸಲು ಒತ್ತು ನೀಡಲಾಗಿದೆ’ ಎಂದರು.

ಜಿಲ್ಲೆಯು ಒಂದೆಡೆ ಕೇರಳ, ಮತ್ತೊಂದೆಡೆ ತಮಿಳುನಾಡು ಗಡಿ ಇದೆ. 6 ಅಂತರಾಜ್ಯ ಗಡಿ ಬರುತ್ತದೆ. ಮೊದಲು ಅಂತರಾಜ್ಯ ಗಡಿಗಳಿಗೆ ಹೋಗಿ ಅಲ್ಲಿ ನಿರಂತರ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ’ ಎಂದರು.ಸಂವಾದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆ‌ರ್‌.ಎನ್. ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್. ಲಕ್ಕೂರು ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

---ಭಾರಿ ಭದ್ರತೆ:

24 ಗಂಟೆಯೂ ನಾಕಾಬಂದಿ ತಪಾಸಣೆ ನಡೆಯುತ್ತಿದೆ. ಸಿಸಿಟೀವಿ ಅಳವಡಿಸಲಾಗಿದೆ. ಅಲ್ಲಿ ಯಾವುದೇ ಅಕ್ರಮ ಸಾಗಾಟ ಆಗಬಾರದು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಂತಾರಾಜ್ಯ ಕಳ್ಳತನ ಆಗಬಾರದು ಅದಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ’ ಎಂದರು.

---

ಡ್ರಗ್ಸ್‌ ಮುಕ್ತವೇ ಗುರಿ

ಮುಖ್ಯಮಂತ್ರಿಗಳು ಗೃಹಮಂತ್ರಿಗಳು ಒಂದೇ ಒಂದು ಆಶಯ ಎಂದರೆ ಮಾದಕದ್ರವ್ಯ ಮುಕ್ತ ಕರ್ನಾಟಕ ಮಾಡಬೇಕೆನ್ನುವುದು ಅವರ ಆಶಯವಾಗಿದೆ.

- ಮುತ್ತುರಾಜು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ---

11ಸಿಎಚ್‌ಎನ್‌52