ಇಂದು ಮಕ್ಕಳ ನಾಟಕ ಗುಬ್ಬಿ ಪ್ರದರ್ಶನ
KannadaprabhaNewsNetwork | Published : Nov 01 2023, 01:01 AM IST / Updated: Nov 01 2023, 01:02 AM IST
ಇಂದು ಮಕ್ಕಳ ನಾಟಕ ಗುಬ್ಬಿ ಪ್ರದರ್ಶನ
ಸಾರಾಂಶ
ಮಕ್ಕಳ ರಂಗ ತರಬೇತಿಯ ಅಭ್ಯಾಸ ಮಾಲಿಕೆ ನಾಟಕ
ಸಾಗರ: ಇಲ್ಲಿಯ ನಟನಾಟ್ಯ ಟ್ರಸ್ಟ್ ವತಿಯಿಂದ ನ.1ರಂದು ಸಂಜೆ 6.30ಕ್ಕೆ ಪಟ್ಟಣದ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ಮಕ್ಕಳ ರಂಗ ತರಬೇತಿಯ ಅಭ್ಯಾಸ ಮಾಲಿಕೆ ನಾಟಕ ''''ಗುಬ್ಬಿ'''' ಪ್ರದರ್ಶನಗೊಳ್ಳಲಿದೆ. ದರ್ಶನ್ ನೀನಾಸಮ್ ವಿನ್ಯಾಸ ನಿರ್ದೇಶನ, ಭಾರ್ಗವ ಕೆ.ಎನ್. ಸಂಗೀತ, ಸೌಖ್ಯಕುಮಾರ್ ಬೆಳಕು, ಮಣಿನಾಯ್ಕ್ ತಾಂತ್ರಿಕ ನಿರ್ವಹಣೆ ಮತ್ತು ಅಂಬಿಕ ಕಸ್ವೆ ಅವರ ನಿರೂಪಣೆಯಲ್ಲಿ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ದರ್ಶನ್ ನೀನಾಸಮ್ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ್ ಕೆಂಚಪ್ಪನವರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಟ್ರಸ್ಟ್ ಉಪಾಧ್ಯಕ್ಷ ಸಂತೋಷ್ ಆರ್. ಶೇಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುರುಷೋತ್ತಮ ತಲವಾಟ, ಜಿ.ಬಿ. ಜನಾರ್ದನ್ ಉಪಸ್ಥಿತರಿರವರು ಎಂದು ಹೇಳಿದರು. ಕಳೆದ ಮೂರು ವರ್ಷಗಳಿಂದ ನಟನಾಟ್ಯ ಟ್ರಸ್ಟ್ ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ಅವಿರತವಾಗಿ ಕೆಲಸ ಮಾಡುತ್ತಿದೆ. ಕೊರೋನಾ ಸಂದರ್ಭದಲ್ಲಿ ಮಕ್ಕಳಲ್ಲಿರುವ ರಂಗಾಸಕ್ತಿಗೆ ಪೂರಕ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತರಬೇತಿ, ನಟನೆ, ಕ್ರಿಯಾಶೀಲ ಚಟುವಟಿಕೆಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ. ''''ಧರಣಿ ಮಂಡಲ'''' ನಾಟಕ ಪ್ರದರ್ಶನಕ್ಕೆ ಉತ್ತಮ ಪ್ರೋತ್ಸಾಹ ದೊರೆತ ಹಿನ್ನೆಲೆಯಲ್ಲಿ ಎರಡನೇ ನಾಟಕ ''''ಗುಬ್ಬಿ''''ಯನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗಿದೆ ಎಂದರು. ಜಯತೀರ್ಥ ಬಿ.ವಿ. ರಚಿಸಿರುವ ''''ಗುಬ್ಬಿ'''' ನಾಟಕ ಪರಿಸರಪೂರಕ ಸಂದೇಶವನ್ನು ಒಳಗೊಂಡಿದೆ. ಮಕ್ಕಳು ಪರಿಸರ, ಪ್ರಾಣಿ-ಪಕ್ಷಿಗಳ ಬಗ್ಗೆ ಮಾಹಿತಿ ಬೇಕು ಎಂದಾಗ ಗೂಗಲ್ ಸರ್ಚ್ ಮಾಡುತ್ತಿದ್ದಾರೆ. ಆದರೆ, ''''ಗುಬ್ಬಿ'''' ನಾಟಕ ಪಕ್ಷಿಯೊಂದರ ನೈಜಕಥೆ, ಪರಿಸರ ನಾಶದಿಂದ ಪಕ್ಷಿಸಂಕುಲ ಅನುಭವಿಸುತ್ತಿರುವ ಯಾತನೆಯನ್ನು ರಂಗದ ಮೇಲೆ ತರುತ್ತಿದೆ. ರಂಗಾಸಕ್ತರು ಪಾಲ್ಗೊಳ್ಳಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂತೋಷ್ ಆರ್. ಶೇಟ್, ವಿವೇಕ್ ನಾಯ್ಕ್ ಬಿ.ಎಂ., ಕಾರ್ತಿಕ್ ಕೆ. ಹಾಜರಿದ್ದರು.