ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಾರ್ವಜನಿಕರ ಸಲಹೆ ಆಧರಿಸಿ ನಗರಸಭೆ ಬಜೆಟ್ ರೂಪಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶೀಲಾದಿನೇಶ್ ಹೇಳಿದರು.ನಗರಸಭೆ ಸಭಾಂಗಣದಲ್ಲಿ ಗುರುವಾರ 2026-27ನೇ ಸಾಲಿನ ನಗರ ಸಭೆ ಆಯ-ವ್ಯಯ ಸಿದ್ಧತೆ ಬಗ್ಗೆ ಸಾರ್ವಜನಿಕರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ನಗರದ ಸಂತೆ ಮಾರ್ಕೆಟ್ ಅಭಿವೃದ್ಧಿಪಡಿಸ ಬೇಕು, ಕೆರೆಗಳ ಅಭಿವೃದ್ಧಿ, ಆಟೋ ನಿಲ್ದಾಣ, ಕುಡಿಯುವ ನೀರು ಸರಬರಾಜು, ಚರಂಡಿ ಸ್ವಚ್ಚತೆ, ಬೀದಿದೀಪ ಮುಂತಾದವುಗಳ ಬಗ್ಗೆ ಸಾರ್ವಜನಿಕರು ನೀಡಿದ ಸೂಕ್ತ ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಉತ್ತಮ ಬಜೆಟ್ ಮಂಡಿಸಲಾಗುವುದು ಎಂದರು.

ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ನಗರದ ಸರ್ವಾಂಗೀಣ ಅಭಿವೃದ್ಧಿಗೆ ನಗರಸಭೆಯಿಂದ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಈಗಾಗಲೇ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಾಜಕಾರಣಿಗಳು, ಸಾರ್ವಜನಿಕರು, ನಗರಸಭೆ ಸದಸ್ಯರು ಸೂಕ್ತ ಸಲಹೆ ಸೂಚನೆ ಪಡೆಯಸಲಾಗಿದೆ ಎಂದರು.

ಮನೆ ಮನೆ ಕಸ ಸಂಗ್ರಹಣೆ ವ್ಯವಸ್ಥೆ ಸರಿಪಡಿಸಲು ನಿರ್ಧರಿಸಲಾಗಿದ್ದು, ₹20 ಕೋಟಿ ವೆಚ್ಚದಲ್ಲಿ ಈಗಾಗಲೇ ನಗರದ ಎಲ್ಲ ಪ್ರಮುಖ ರಸ್ತೆಗಳನ್ನು ಡಾಂಬರೀಕರಣ ಮಾಡಿ ಅಭಿವೃದ್ಧಿ ಪಡಿಸಲು ಕಾಮಗಾರಿ ಆರಂಭವಾಗಿದೆ. ₹5 ಕೋಟಿ ವೆಚ್ಚದ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ ಎಂದು ತಿಳಿಸಿದರು.ಇನ್ನೂ ₹15 ಕೋಟಿ ಕಾಮಗಾರಿ ನಡೆಯಬೇಕಿದ್ದು, ಮಾರ್ಚ್ ಅಂತ್ಯದೊಳಗೆ ಪೂರ್ಣಗೊಂಡರೆ ಶೇ.80 ರಷ್ಟು ನಗರದಲ್ಲಿ ಗುಂಡಿಮುಕ್ತ ರಸ್ತೆಗಳಾಗುತ್ತವೆ ಎಂದರು.ಯುಜಿಡಿ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಬಜೆಟ್ ಪೂರ್ವ ಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಸಲಹೆ ಸೂಚನೆಗಳನ್ನು ಈ ಬಾರಿ ನಗರಸಭೆ ಬಜೆಟ್‌ನಲ್ಲಿಟ್ಟು ಸುಂದರ ಬಜೆಟ್‌ತಯಾರು ಮಾಡಲು ನಿರ್ಧರಿಸಲಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್ ಮೊದಲಾದವರಿದ್ದರು.ಫೋಟೋ:


ನಗರ ಸಭೆಯ 2026-27ನೇ ಸಾಲಿನ ಬಜೆಟ್‌ ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಗುರುವಾರ ಸಭೆ ನಡೆಸಲಾಯಿತು. ಈ ವೇಳೆ ನಗರ ಸಭೆ ಅಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾ, ನಗರ ಸಭೆ ಆಯುಕ್ತ ಬಸವರಾಜು ಇದ್ದರು.