ಕಂಪ್ಲಿ ಕ್ಷೇತ್ರದಾದ್ಯಂತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ

ಕಂಪ್ಲಿ: ಕ್ಷೇತ್ರದಾದ್ಯಂತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಶಾಸಕ ಜೆ.ಎನ್. ಗಣೇಶ ತಿಳಿಸಿದರು.

ತಾಲೂಕಿನ ಶ್ರೀರಾಮರಂಗಾಪುರ ಗ್ರಾಮದಲ್ಲಿ ₹5 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಸ್ತೆ ಮೂಲ ಸೌಕರ್ಯ ಅತ್ಯಂತ ಮುಖ್ಯವಾಗಿದೆ. ಜನರ ಸಂಚಾರ ಸುಗಮವಾಗಿಸಲು ಹಲವು ಪ್ರಮುಖ ರಸ್ತೆ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗಿದೆ. ಶ್ರೀರಾಮರಂಗಾಪುರದಿಂದ ಮಾರುತಿ ಕ್ಯಾಂಪ್ ಮೂಲಕ ಯಲ್ಲಾಪುರ ಸಂಪರ್ಕಿಸುವ ರಸ್ತೆಗೆ ಸುಮಾರು ₹6 ಕೋಟಿ ಅನುದಾನ ಮಂಜೂರಾಗಿದೆ. ಎಮ್ಮಿಗನೂರು ಕ್ರಾಸ್‌ನಿಂದ ಒರ್ವಾಯಿ ಹಾಗೂ ಗುತ್ತಿಗೆನೂರು ಭಾಗದ ಸಿಸಿ ರಸ್ತೆ ನಿರ್ಮಾಣಕ್ಕೆ ಸುಮಾರು ₹10 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕ್ಷೇತ್ರದಲ್ಲಿ ಈಗಾಗಲೇ 200 ಕಿ.ಮೀ.ಗಿಂತ ಅಧಿಕ ಪಿಡಬ್ಲ್ಯುಡಿ ರಸ್ತೆಗಳನ್ನು ಶೇ.100ರಷ್ಟು ಅಭಿವೃದ್ಧಿಪಡಿಸಲಾಗಿದೆ. ಸುಮಾರು 30 ವರ್ಷಗಳಿಂದ ಅಭಿವೃದ್ಧಿಯ ಸ್ಪರ್ಶವೇ ಕಾಣದ ಮಣ್ಣು ರಸ್ತೆಗಳನ್ನು ಹಂತ ಹಂತವಾಗಿ ಸುಧಾರಿಸಲಾಗುತ್ತಿದೆ. ಮಾಗಾಣಿ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಅಗತ್ಯವಿರುವುದರಿಂದ ಶಾಸಕರಿಗೆ ನೀಡಲಾಗುವ ಅನುದಾನವನ್ನು ₹2 ಕೋಟಿ ಇಂದ ₹5 ಕೋಟಿ ವರೆಗೆ ಹೆಚ್ಚಿಸಲು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಪರವಾಗಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ ಎಂಬ ವಿರೋಧ ಪಕ್ಷಗಳ ಆರೋಪದಲ್ಲಿ ಯಾವುದೇ ತತ್ವವಿಲ್ಲ ಎಂದು ತಿರುಗೇಟು ನೀಡಿದರು.

ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಮೋದಿಪಲ್ಲೆ ಮಂಜುನಾಥ, ಮಾವಿನಹಳ್ಳಿ ವಿರುಪಣ್ಣ, ಬಿ. ನಾರಾಯಣಸ್ವಾಮಿ, ಡಿ. ವೆಂಕಟಸ್ವಾಮಿ, ಚಿನ್ನಹನುಮಂತ, ಪುಲ್ಸೆ ನಾಗೇಶ, ಡಿ. ವೆಂಕಟೇಶ, ವೆಂಕಟರಾಮುಡು, ನಾಗಭೂಷಣ, ರಂಗನಾಥರೆಡ್ಡಿ, ವೆಂಕಟಪತಿ, ನಾರಾಯಣಚೌದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.